ಹಂಪಿ ಉತ್ಸವದ ಕೊನೆಯ ದಿನ, ನಟಿ ರಚಿತಾ ರಾಮ್ ಅವರ ಕಾರು ಚಾಲಕ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಗೂಂಡಾ ವರ್ತನೆಯಿಂದ ಅಧಿಕಾರಿಯ ಕಣ್ಣಿಗೆ ಗಾಯವಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯನಗರ: ಹಂಪಿ ಉತ್ಸವದ ಕೊನೆಯ ದಿನ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಅವರ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಹಂಪಿ ಉತ್ಸವದ ಕಾರ್ಯಕ್ರಮ ನಡೆಯುತ್ತಿದ್ದ ಎಂ.ಪಿ. ಪ್ರಕಾಶ ವೇದಿಕೆಯ ಸಮೀಪ ಈ ಘಟನೆ ಸಂಭವಿಸಿದ್ದು, ಖ್ಯಾತ ಚಿತ್ರನಟಿ ರಚಿತಾ ರಾಮ್ ಅವರ ಕಾರು ಚಾಲಕ, ನಿರ್ಮಿತಿ ಕೇಂದ್ರದ ರವಿಕುಮಾರ್ ಅವರ ಕಣ್ಣಿಗೆ ಮುಷ್ಟಿ ಮಾಡಿ ಗುದ್ದಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿಯ ಕಾರು ಚಾಲಕನಿಂದ ಗೂಂಡಾೆ ವರ್ತನೆ

ಈ ವೇಳೆ ನಟಿಯ ಕಾರು ಚಾಲಕ ಗೂಂಡಾಗಳಂತೆ ವರ್ತನೆ ತೋರಿದ್ದಾನೆ ಎಂಬ ಆರೋಪಗಳು ಕೇಳಿಬಂದಿದೆ. ಭದ್ರತೆಯ ನೆಪದಲ್ಲಿ ಸಾರ್ವಜನಿಕರ ಮೇಲೂ ಅಸಭ್ಯ ಹಾಗೂ ಆಕ್ರಮಣಕಾರಿ ವರ್ತನೆ ತೋರಲಾಗಿದೆ ಎಂದು ಸ್ಥಳದಲ್ಲಿದ್ದವರು ಆರೋಪಿಸಿದ್ದಾರೆ. ರವಿಕುಮಾರ್ ಅವರ ಕಣ್ಣಿಗೆ ಹೊಡೆದಿರುವುದರಿಂದ ಗಾಯವಾಗಿದೆ ಎಂದು ತಿಳಿದುಬಂದಿದೆ.

ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿ ಗಲಾಟೆ ಜೋರಾಗಿದ್ದು ಜನ ಗುಂಪು ಸೇರಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿವೆ. ಚಾಲಕ ಕಾರಿನಿಂದ ಇಳಿದು ಅಧಿಕಾರಿಯತ್ತ ಮುನ್ನುಗ್ಗುತ್ತಿರುವ ದೃಶ್ಯಗಳೂ ಸಿಸಿಟಿವಿಯಲ್ಲಿ ಲಭ್ಯವಿವೆ. ಈ ವಿಡಿಯೋಗಳು ಈಗ ವೈರಲ್ ಆಗುತ್ತಿದೆ.

ಕಾರ್ಯಕ್ರಮದ ಭದ್ರತೆ ಮತ್ತು ವ್ಯವಸ್ಥೆ ಬಗ್ಗೆ ಪ್ರಶ್ನೆ

ಹಂಪಿ ಉತ್ಸವದಂತಹ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇಂತಹ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದ್ದು, ಕಾರ್ಯಕ್ರಮದ ಭದ್ರತೆ ಮತ್ತು ವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಘಟನೆಯ ಬಳಿಕ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಈ ಸಂಬಂಧ ವಿಜಯನಗರ ಜಿಲ್ಲಾ ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ಸಾಕ್ಷಿಗಳ ಹೇಳಿಕೆಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಹಲ್ಲೆಗೆ ಕಾರಣ ತಿಳಿದುಬಂದಿಲ್ಲ.