ಬಿಬಿಎಂಪಿ ಚುನಾವಣೆ ಮತ್ತೆ ಮುಂದೂಡಲು ಅರ್ಜಿ
ಮತ್ತೆ ಮೂರು ತಿಂಗಳು ಕೋರಿದ್ದ ಸರ್ಕಾರ, ಅರ್ಜಿ ತಿರಸ್ಕರಿಸುವಂತೆ ಕೋರಿದ ಚುನಾವಣಾ ಆಯೋಗ, ವಿಚಾರಣೆ ಡಿ.6ಕ್ಕೆ ಮುಂದೂಡಿಕೆ
ಬೆಂಗಳೂರು(ಡಿ.01): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಸಲು ಮತ್ತೆ ಮೂರು ತಿಂಗಳ ಅವಕಾಶ ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಡಿ.6ಕ್ಕೆ ಹೈಕೋರ್ಟ್ ಮುಂದೂಡಿದೆ.
ಬಿಬಿಎಂಪಿಯ 243 ವಾರ್ಡ್ಗಳಿಗೆ ನವೆಂಬರ್ 30ರೊಳಗೆ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು 2022ರ ಸೆ.30ರಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಈ ಆದೇಶ ಪಾಲನೆಗೆ ಮೂರು ತಿಂಗಳ ಕಾಲ ಅವಧಿ ವಿಸ್ತರಿಸುವಂತೆ ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಸಲ್ಲಿಸಿದ್ದ ಅಫಿಡವಿಟ್ನ್ನು ಬುಧವಾರ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಹಾಜರಾಗಿ, ಬಿಬಿಎಂಪಿಯ 243 ವಾರ್ಡ್ಗಳಲ್ಲಿ ಎಸ್ಸಿ, ಎಸ್ಟಿವರ್ಗ, ಹಿಂದುಳಿದ ವರ್ಗ ಎ ಹಾಗೂ ಬಿಗೆ ಮೀಸಲಾತಿ ನಿಗದಿ ಮತ್ತು ರಾಜಕೀಯ ಮೀಸಲಾತಿಗೆ ಅರ್ಹರಿರುವ ಹಿಂದುಳಿದ ವರ್ಗಗಳ ವಿವರವಾದ ಪಟ್ಟಿಯನ್ನು ಸಲ್ಲಿಕೆ ವಿಚಾರದಲ್ಲಿ ನ್ಯಾ.ಕೆ.ಭಕ್ತವತ್ಸಲ ಅವರ ನೇತೃತ್ವದ ಆಯೋಗಕ್ಕೆ ವರದಿ ಕೋರಲಾಗಿದೆ. ಆದಷ್ಟು ಬೇಗ ಪ್ರತಿಕ್ರಿಯಿಸುವುದಾಗಿ ಆಯೋಗ ಸಹ ಹೇಳಿದೆ. ಹೊಸದಾಗಿ ಮೀಸಲಾತಿ ನಿಗದಿಸಲು ಆಯೋಗದ ನಿಲುವು ಮುಖ್ಯವಾಗಿದೆ. ಆದ ಕಾರಣ ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಬಿಬಿಎಂಪಿ ಚುನಾವಣೆಗೆ ಮತ್ತೆ 3 ತಿಂಗಳು ಸಮಯ ಕೇಳಿದ ಸರ್ಕಾರ
ಸರ್ಕಾರದ ಈ ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿ ಆಕ್ಷೇಪಣೆ ಸಲ್ಲಿಸಿರುವ ಚುನಾವಣಾ ಆಯೋಗ, 2022ರ ಡಿ.31ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಈಗಾಗಲೇ ಹೈಕೋರ್ಟ್ ಆದೇಶಿಸಿದೆ. ಇದಾದ ನಂತರ ಸಮಯ ವಿಸ್ತರಣೆ ಕೋರಿ ಸರ್ಕಾರ ಸಲ್ಲಿಸಿರುವ ಈ ಅರ್ಜಿ ವಿಚಾರಣಾ ಯೋಗ್ಯವಾಗಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದೆ.
ಚುನಾವಣಾ ಆಯೋಗದ ಪರ ವಕೀಲರು, ಚುನಾವಣೆ ನಡೆಸಲು ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್ನಲ್ಲೂ ಅರ್ಜಿ ಸಲ್ಲಿಸಲಾಗಿದೆ. ಚುನಾವಣೆ ನಡೆಸಲು ಕಾಲಾವಕಾಶ ಕೋರಿರುವ ಸರ್ಕಾರದ ಅರ್ಜಿ ಕುರಿತು ಆಯೋಗವು ಸುಪ್ರಿಂ ಕೋರ್ಟ್ಗೆ ಮೆಮೊ ಸಲ್ಲಿಸಿದೆ. ಅರ್ಜಿ ಗುರುವಾರ (ನ. 30) ವಿಚಾರಣೆಗೆ ಬರಬೇಕಿತ್ತು. ಆದರೆ, ವಿಚಾರಣೆಗೆ ನಿಗದಿಯಾಗಿಲ್ಲ. ಬಹುಶಃ ಡಿ.5ರೊಳಗೆ ವಿಚಾರಣೆ ನಿಗದಿಯಾಗುವ ಸಾಧ್ಯತೆಯಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಅದನ್ನು ಪರಿಗಣಿಸಿದ ನ್ಯಾಯಾಲಯ, ಸುಪ್ರಿಂಕೋರ್ಟ್ ವಿಚಾರಣೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ತಿಳಿಸಿ ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿದೆ.
ಆಯೋಗದ ಆಕ್ಷೇಪಣೆ ಏನು?
ಬಿಬಿಎಂಪಿ ಚುನಾಯಿತ ಸದಸ್ಯರ ಅವಧಿ 2020ರ ಸೆಪ್ಟೆಂಬರ್ ವೇಳೆಗೆ ಮುಕ್ತಾಯಗೊಂಡಿರುವುದರಿಂದ ಚುನಾವಣೆ ನಡೆಸಲು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ಮೀಸಲು ಪಟ್ಟಿಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, 2022ರ ನ.30ರೊಳಗೆ ಹೊಸದಾಗಿ ಮೀಸಲು ಪಟ್ಟಿಪ್ರಕಟಿಸಲು ಸರ್ಕಾರಕ್ಕೆ ಸೆ.30ರಂದು ಸೂಚಿಸಿತ್ತು. ಆದರೆ, ಸರ್ಕಾರ ಚುನಾವಣೆ ನಡೆಸಲು ಸಮಯ ವಿಸ್ತರಿಸಲು ಕೋರಿ ಸಕಾರಣ ವಿಲ್ಲದೆ ಅರ್ಜಿ ಸಲ್ಲಿಸಿದೆ. ಅದು ಸಂಪೂರ್ಣವಾಗಿ ಅಸಮರ್ಥನೀಯವಾಗಿದೆ. ಇದರ ಹಿಂದೆ ಚುನಾವಣೆ ವಿಳಂಬ ಮಾಡುವ ಉದ್ದೇಶವಿದೆ. 2023ರ ಮೇ ನಂತರ ಚುನಾವಣೆ ನಡೆಸುವ ಉದ್ದೇಶ ಸರ್ಕಾರದ್ದಾಗಿದೆ. ಪ್ರಮುಖವಾಗಿ 2023ರ ಮೇ ತಿಂಗಳ ವೇಳೆಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಒಂದೊಮ್ಮೆ ವೇಳಾಪಟ್ಟಿ ಪ್ರಕಟಗೊಂಡರೆ, ಪಾಲಿಕೆ ಚುನಾವಣೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಲಿದೆ. ಆಗ ಸಂವಿಧಾನ ಪರಿಚ್ಛೇದ 243-3 ಉಲ್ಲಂಘನೆಯಾಗಲಿದೆ ಎಂದು 2022ರ ನ.24ರಂದು ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಆಯೋಗ ತಿಳಿಸಿದೆ.