ಮುಂಬರಲಿರುವ ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದವು ದೇಶದ ಕೃಷಿ ವಲಯಕ್ಕೆ ಮಾರಕವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆತಂಕ ವ್ಯಕ್ತಪಡಿಸಿದೆ. ಆಮದು ಸುಂಕ ಕಡಿತ ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಧಕ್ಕೆಯಾಗುವ ಸಾಧ್ಯತೆಯಿಂದಾಗಿ, ಈ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ರೈತ ಮುಖಂಡರು ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಹಾವೇರಿ: ಮುಂಬರಲಿರುವ ಭಾರತ-ಅಮೆರಿಕ ಮಧ್ಯಂತರ ಮುಕ್ತ ವ್ಯಾಪಾರ ಒಪ್ಪಂದದಿಂದ ದೇಶದ ಕೃಷಿ ವಲಯಕ್ಕೆ ಭಾರಿ ಪೆಟ್ಟು ಬೀಳಲಿದ್ದು, ಯಾವುದೇ ಕಾರಣಕ್ಕೂ ರೈತರ ಹಿತಾಸಕ್ತಿ ಬಲಿಗೊಡುವ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಮೋದಿಯವರಿಗೆ ತುರ್ತು ಮನವಿ ಸಲ್ಲಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ ರೈತ ಮುಖಂಡರು, ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಜೂ. 23, 24ರಂದು ನವದೆಹಲಿಗೆ ಭೇಟಿ ನೀಡಲಿದ್ದು, ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ. ಇದರಿಂದ ರೈತ ಸಮುದಾಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಸ್ಥಳೀಯ ಮಾರುಕಟ್ಟೆ ನಾಶದ ಆತಂಕ
ಹತ್ತಿ, ಜೋಳ, ಸೋಯಾಬೀನ್ ಎಣ್ಣೆ ಹಾಗೂ ಸಂಸ್ಕರಿಸಿದ ಹಣ್ಣುಗಳ ಮೇಲಿನ ಆಮದು ಸುಂಕ ಕಡಿತಗೊಳಿಸಿದರೆ, ಅಮೆರಿಕದ ಸಬ್ಸಿಡಿಯುಕ್ತ ಉತ್ಪನ್ನಗಳ ಎದುರು ನಮ್ಮ ರೈತರು ಸ್ಪರ್ಧಿಸಲು ಸಾಧ್ಯವಿಲ್ಲ. ತಾಂತ್ರಿಕ ಅಡೆತಡೆಗಳ ನಿವಾರಣೆಯಿಂದ ವಿದೇಶಿ ಹಾಲು, ಮಾಂಸ, ಜೋಳ ಭಾರತದ ಮಾರುಕಟ್ಟೆ ಪ್ರವೇಶಿಸಿ ಸ್ಥಳೀಯ ಮಾರುಕಟ್ಟೆ ನಾಶವಾಗಲಿದೆ. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಅಮೆರಿಕವು ಭಾರತದ ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ತರಲು ಒತ್ತಡ ಹೇರುತ್ತಿದೆ. ಈಗಾಗಲೇ ಸೂಪರ್ ಎಲ್-ನಿನೋ ಮುಂಗಾರು ಭೀತಿಯಿರುವಾಗ, ಎಂ.ಎಸ್.ಪಿಗೆ ಧಕ್ಕೆಯಾದರೆ ಭತ್ತ ಮತ್ತು ಗೋಧಿ ಬೆಳೆಯುವ ಕೋಟ್ಯಂತರ ರೈತರು ಬೀದಿಪಾಲಾಗಲಿದ್ದಾರೆ. ಯಾವುದೇ ಕಾರಣಕ್ಕೂ ಕೃಷಿಕರು, ಹಾಲು ಉತ್ಪಾದಕರು ಹಾಗೂ ಮೀನುಗಾರರನ್ನು ಸಂಕಷ್ಟಕ್ಕೆ ತಳ್ಳುವ ಈ ಒಪ್ಪಂದಕ್ಕೆ ಭಾರತ ಸರ್ಕಾರ ಸಹಿ ಹಾಕಬಾರದು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕೈಕೊಟ್ಟ ಮಳೆ: 11 ಎಕ್ರೆ ಗೋವಿನಜೋಳದ ಬೆಳೆ ಟ್ರ್ಯಾಕ್ಟರ್ನಿಂದ ನಾಶ ಮಾಡಿದ ಹಾವೇರಿ ರೈತ
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಶಿವಯೋಗಿ ಹೊಸಗೌಡ್ರ, ಜಾನ್ ಪುನಿತ್, ಸುಭಾಸ ಬನ್ನಿಹಟ್ಟಿ, ರಾಜು ತರ್ಲಗಟ್ಟ ಇತರರು ಇದ್ದರು.
ಇದನ್ನೂ ಓದಿ: 17 ಲಕ್ಷಕ್ಕೆ ಕೋಟ್ಯಂತರ ಮೌಲ್ಯದ 5 ಎಕರೆ ಕೃಷಿಭೂಮಿ ಕಬಳಿಕೆ? ದೂರು ದಾಖಲಿಸಿದ ನೊಂದ ರೈತ


