Thirthahalli Landslide: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ದುಡಿಯಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ್ ಗ್ರಾಮದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಗಂಗಾವತಿ (ಆ.02): ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ದುಡಿಯಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ್ ಗ್ರಾಮದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಕಕ್ಕರಗೋಳ್ ಗ್ರಾಮದ ಮಲ್ಲಿಕಾರ್ಜುನ, (35) ಪತ್ನಿ ನಾಗವೇಣಿ (26), ಸಂತೋಷ (4) ಮಗು ಸಾವನ್ನಪ್ಪಿದ್ದಾರೆ. ಇವರು ಕಳೆದ ಆರು ತಿಂಗಳ ಹಿಂದಷ್ಟೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ದುಡಿಯಲು ಹೋಗಿದ್ದರು.

ಮನೆಯಲ್ಲಿ ವಾಸ ಮಾಡಿದ್ದ ಸಂದರ್ಭದಲ್ಲಿ ಅತಿಯಾದ ಮಳೆಯಿಂದ ಗುಡ್ಡ ಕುಸಿದಿದ್ದು, ಮೂವರು ಮೃತಪಟ್ಟಿದ್ದು, ಹನುಮಂತಪ್ಪ (26) ಎನ್ನುವಾತ ತೀವ್ರ ಗಾಯಗೊಂಡಿದ್ದಾರೆ. ಇವರನ್ನು ಶಿವಮೊಗ್ಗ ನಗರದ ಮೇಘ ರಾಜನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಆಕ್ರಂದನ

ದುಡಿಯುಲು ಕುಟಂಬ ಸಮೇತ ತೀರ್ಥಹಳ್ಳಿಗೆ ಹೋಗಿದ್ದ ಒಂದೇ ಕುಟಂಬವರು ಸಾವನ್ನಪ್ಪಿದ್ದರಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಕಳೆದ 6 ತಿಂಗಳ ಹಿಂದೆ ಗದ್ದೆ, ಹೊಲಗಳಲ್ಲಿ ದುಡಿಯಲು ಹೋಗಿದ್ದ ಮಲ್ಲಿಕಾರ್ಜನ, ಪತ್ನಿ ನಾಗವೇಣಿ, ಇವರ ಮಗು 4 ವರ್ಷದ ಸಂತೋಷ ಗುಡ್ಡ ಕುಸಿದ ಪರಿಣಾಮವಾಗಿ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಈ ಸುದ್ದಿ ತಿಳಿಯುತ್ತಲೇ ಮೃತ ಮಲ್ಲಿಕಾರ್ಜುನ ಅವರ ತಂದೆ ಲಕ್ಷ್ಣಣ, ತಾಯಿ ಗೌರಮ್ಮ ದಿಕ್ಕು ದೋಚದೆ ಕಣ್ಣೀರಿಟ್ಟಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತರ ಮರಣೋತ್ತರ ಪರೀಕ್ಷೆ ನಡೆದಿದ್ದು, ಸೋಮವಾರ ಬೆಳಿಗ್ಗೆ ಕಕ್ಕರಗೋಳ್ ಗ್ರಾಮಕ್ಕೆ ಮೃತದೇಹಗಳನ್ನು ತರಲಾಗುತ್ತದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.