ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದ್ರಾಬಾದ್ ಮೂಲಕ ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸಮರ್ಪಣೆ ಮಾಡಿರುವ ಪ್ರಭಾವಳಿ,ಕಿರೀಟ, ಗಧೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದೆ.

ಗಂಗಾವತಿ (ಮೇ.10): ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದ್ರಾಬಾದ್ ಮೂಲಕ ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸಮರ್ಪಣೆ ಮಾಡಿರುವ ಪ್ರಭಾವಳಿ,ಕಿರೀಟ, ಗಧೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದೆ. ಎಲ್ಲವೂ ಚಿನ್ನದಿಂದ ಕೂಡಿಲ್ಲ ಎಂದು ಕಿಷ್ಕಿಂಧಾ ಅಂಜನಾದ್ರಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ಭಾನುವಾರ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ದೇವಾಲಯಕ್ಕೆ ಸಮರ್ಪಣೆಯಾಗಿರುವ ಸಾಮಾನುಗಳನ್ನು ಲೋಹ ತಜ್ಞರಿಂದ ಪರೀಕ್ಷೆ ಮಾಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಹೈದ್ರಾಬಾದ್ ಮೂಲಕ ಎಎಂಆರ್ ಕಂಷ್ಟ್ರಕ್ಷನ್ ಕಂಪನಿಯ ಮಹೇಶ ರೆಡ್ಡಿ ಹಾಗೂ ಕುಟುಂಬದವರು ಮೇ.8 ರಂದು ಒಂದುವರೇ ಕೆಜಿ ಚಿನ್ನ ಅಂದಾಜು 2 ಕೋಟಿ 30 ಲಕ್ಷ ರು ಮೌಲ್ಯದ ಆಭರಣಗಳನ್ನು ಸಮರ್ಪಣೆ ಮಾಡಿದ ಪ್ರಭಾವಳಿ ಗದೆ, ಕಿರೀಟ ಇತರೆ ಪೂಜಾ ಸಾಮಾನುಗಳು ಎಂದು ಹೇಳಲಾಗಿತ್ತು.

ಚಿನ್ನದ ತಗಡು ಲೇಪನ

ಈಗ ಚಿನ್ನ ಲೇಪಿತ ತಾಮ್ರದಿಂದ ಕೂಡಿವೆ ಎಂದು ಲೋಹ ಪರಿಶೋಧಕರು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ನೀಡವಾಗ ಬಂಗಾರದ ಮೌಲ್ಯ ಮಾಪನ ಮಾಡುವ ಗುಂಡಾಚಾರ್ ಮತ್ತು ಪರಶುರಾಮ ವಿಶ್ವಕರ್ಮ ಇವರು ದೃಢಪಡಿಸಿದ್ದು, ತಾಮ್ರದ ಸಾಮಾನುಗಳಿಗೆ ಚಿನ್ನದ ತಗಡು ಲೇಪನ ಮಾಡಲಾಗಿದೆ. ಎಲ್ಲವೂ ಚಿನ್ನದ ಸಾಮಾನುಗಳು ಅಲ್ಲ. ದಾನ ನೀಡಿದ ದಾನಿಗಳನ್ನು ಸಂಪರ್ಕ ಮಾಡಿ ಶ್ರೀಆಂಜನೇಯನಿಗೆ ಸಮರ್ಪಣೆ ಮಾಡಿದ ಸಾಮಾನುಗಳ ಮೌಲ್ಯ ಹಾಗೂ ರಸೀದಿಯನ್ನು ದೇವಾಲಯ ಕಮೀಟಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದ್ದು ಶೀಘ್ರ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದಾನಿಗಳು ದೇವಾಲಯಗಳಿಗೆ ನೀಡಿದ ಚಿನ್ನಾಭರಣೆ, ಬೆಳ್ಳಿ, ವಜ್ರ, ವೈಡೂರ್ಯ ಇತರೆ ಅಮೂಲ್ಯ ವಸ್ತುಗಳ ಮೌಲ್ಯ ಮಾಪನ ಮಾಡಿ ರಸೀದಿ ಸಮೇತ ದಾಖಲೆಗಳನ್ನು ಇಡಬೇಕಾಗುತ್ತದೆ. ಆದ್ದರಿಂದ ಲೋಹ ಶೋಧಕರು ಮತ್ತು ಮೌಲ್ಯಮಾಪನ ಮಾಡುವವರಿಂದ ಮೌಲ್ಯ ಮಾಡಿಸಿ ದಾಖಲೆ ಇರಿಸಲಾಗುತ್ತದೆ ಎಂದು ಮಾಲಗಿತ್ತಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಯು.ವಸಂತಕುಮಾರಿ, ಕಂದಾಯ ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳಿದ್ದರು.