Asianet Suvarna News Asianet Suvarna News

Anganwadi Workers: ಮುಷ್ಕರದಲ್ಲಿ ಕಾರ್ಯಕರ್ತೆಯರು, ಬೀದಿಯಲ್ಲಿ ಮಕ್ಕಳು!

ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ. 23ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಂಗನವಾಡಿ ನೌಕರರು ಧರಣಿ ಕುಳಿತ ಹಿನ್ನೆಲೆ ಅಂಗನವಾಡಿಗೆ ಬರಬೇಕಾದ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿವೆ.

Anganwadi workers protest at freedom park bengaluru rav
Author
First Published Jan 28, 2023, 11:01 AM IST

ಸಂಜೀವಕುಮಾರ ಹಿರೇಮಠ

 ಹೊಳೆಆಲೂರ (ಜ.28) : ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ. 23ರಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಂಗನವಾಡಿ ನೌಕರರು ಧರಣಿ ಕುಳಿತ ಹಿನ್ನೆಲೆ ಅಂಗನವಾಡಿಗೆ ಬರಬೇಕಾದ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿವೆ.

ರಾಜ್ಯಾದ್ಯಂತ ಅಂಗನವಾಡಿ ನೌಕರರ ಪ್ರಮುಖ ಬೇಡಿಕೆಗಳಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌.ಕೆ.ಜಿ ಹಾಗೂ ಯು.ಕೆ.ಜಿ ಪ್ರಾರಂಬಿಸುವ ಸರ್ಕಾರದ ಯೋಜನೆ ಹಿಂಪಡೆದು ಮಕ್ಕಳಿಗಾಗಿ ಪೌಷ್ಟಿಕ ಆಹಾರ, ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಅಂಗನವಾಡಿ ಕೇಂದ್ರಗಳನ್ನು ಉಳಿಸಿ, ಅಂಗನವಾಡಿಯಲ್ಲಿಯೇ ಎಲ್‌.ಕೆ.ಜಿ ಮತ್ತು ಯು.ಕೆ.ಜಿ ಪ್ರಾರಂಭಿಸಬೇಕು. ಗ್ರ್ಯಾಚುಟಿ, ಕನಿಷ್ಠ ವೇತನ .36 ಸಾವಿರ ನೀಡಬೇಕು. ಪ್ರತಿ ದಿನ ಮುಂಜಾನೆ 9.30 ರಿಂದ 1 ಗಂಟೆಯ ವರೆಗೆ ಯಾವುದೇ ಪಾಲಕರ ಸಮಸ್ಯೆಗಳಿಲ್ಲದೇ ಮಕ್ಕಳಿಗೆ ಪಾಠ ಮಾಡಲು ಅವಕಾಶ ನೀಡಬೇಕು. ಬಿಎಲ್‌ಒ, ಮಾತೃವಂದನಾ, ಮಾತೃಪೂರ್ಣ, ಭಾಗ್ಯಲಕ್ಷ್ಮಿ ಹಾಗೂ ಬೇರೆ ಇಲಾಖೆಯ ಯೋಜನೆಗಳನ್ನು ನಮಗೆ ಕೊಡಬಾರದು. ಸುಸಜ್ಜಿತ ಕಟ್ಟಡ, ಯುನಿಫಾಮ್‌ರ್‍, ಶೂ ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರು ಕಳೆದ ಜ. 19ರಿಂದಲೇ ಅಂಗನವಾಡಿ ಕೇಂದ್ರಗಳನ್ನು ಬಂದ್‌ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

ಬೆಂಗಳೂರು: ಅಂಗನವಾಡಿ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

ಇದರಿಂದಾಗಿ ಅಂಗನವಾಡಿ ಕೇಂದ್ರಗಳು ತೆರೆಯದೇ ಬಂದಾಗಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಶಿಕ್ಷಣ ಕಲೆಯಬೇಕಾದ ಮಕ್ಕಳು ಬೀದಿಯಲ್ಲಿ ಆಟವಾಡುವಂತಾಗಿದೆ. ಮಕ್ಕಳನ್ನು ಬಿಟ್ಟು ನಿಶ್ಚಿಂತೆಯಿಂದ ಮನೆ ಕೆಲಸದಲ್ಲಿ ತೊಡಗುತ್ತಿದ್ದ ತಾಯಂದಿರು ಹಾಗು ಪೋಷಕರಿಗೆ ಈಗ ಮಕ್ಕಳನ್ನು ಕಾಯುವುದೇ ಕೆಲಸವಾಗಿದೆ.

ಬಡ ಪಾಲಕರ ಮಕ್ಕಳ ಪಾಲಿಗೆ ಅಂಗನವಾಡಿ ಕೇಂದ್ರಗಳು ದಾರಿದೀಪ. ನಾವು ಮಕ್ಕಳನ್ನು ನಿಶ್ಚಿಂತೆಯಿಂದ ಕೇಂದ್ರಗಳಲ್ಲಿ ಬಿಟ್ಟು ಹೋಗುತ್ತೇವೆ. ಆದ್ದರಿಂದ ಯಾವುದೇ ಕಾರಣಕ್ಕೂ ಅಂಗನವಾಡಿ ಕೇಂದ್ರ ಕಾರ್ಯಕರ್ತೆಯರಿಗೆ ಅನ್ಯಾಯ ಮಾಡಬೇಡಿ.

- ಲಕ್ಷ್ಮಣ ದ್ಯಾವರಡ್ಡಿ, ಮಕ್ಕಳ ಪಾಲಕರು.

 

ಹೊಸ ಆದೇಶದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ಯಾಯ 

ನಮ್ಮ ಮಕ್ಕಳನ್ನು ಬೆಳಗ್ಗೆಯಿಂದ ಸಂಜೆಯ ವರೆಗೂ ಕಾಳಜಿಯಿಂದ ನೋಡಿಕೊಳ್ಳುವ ಕಾರ್ಯಕರ್ತೆಯರಿಗೆ ಸರ್ಕಾರ ಸೂಕ್ತ ಸೌಲಭ್ಯ ನೀಡುವುದರ ಮೂಲಕ ಅವರಿಗೆ ನ್ಯಾಯ ದೊರಕಿಸಿ ಕೊಡುವ ಕಾರ್ಯ ಮಾಡಬೇಕು.

- ನಿರ್ಮಲಾ ಹಳ್ಳೂರ ಮಕ್ಕಳ ಪಾಲಕರು

ನಾವು ಹೇಳಿದ್ದು ಕೇಳುತ್ತೇವೆ, ಮಕ್ಕಳ ಸೇವೆ ಹಾಗೂ ತಾಯಂದಿರ ಸೇವೆ ಎಂದುಕೊಂಡು ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಅದನ್ನೇ ದಾಳವಾಗಿ ಬಳಸಿಕೊಂಡ ಸರ್ಕಾರ ಬೇರೆ ಬೇರೆ ಇಲಾಖೆಯ ಯೋಜನೆಗಳನ್ನು ನಮಗೆ ನೀಡಿ ನಾವು ಮಾಡುತ್ತಿರುವ ಮಕ್ಕಳ ಸೇವೆಯನ್ನೇ ಮರೆಯುವಂತೆ ಮಾಡಿದ್ದಾರೆ.

- ಗಂಗಮ್ಮ ದ್ಯಾವರಡ್ಡಿ, ರೋಣ ತಾಲೂಕು ಸಿಐಟಿಯು ಅಧ್ಯಕ್ಷೆ

Follow Us:
Download App:
  • android
  • ios