Asianet Suvarna News Asianet Suvarna News

ಬಾಗಲಕೋಟೆ: ತಿರುಮಲದಲ್ಲಿ ಬಿವಿವಿ ಸಂಘಕ್ಕೆ ಜಮೀನು ಹಂಚಿಕೆ

ವರ್ಣರಂಜಿತ ಕಾರ್ಯಕ್ರಮದಲ್ಲಿ ತಿರುಪತಿ ಆಡಳಿತ ಮಂಡಳಿಯಿಂದ ಕಾಗದಪತ್ರ ಹಸ್ತಾಂತರ

Allotment of land to BVV Sangh in Tirumala grg
Author
First Published Oct 18, 2022, 7:30 PM IST | Last Updated Oct 18, 2022, 7:38 PM IST

ಬಾಗಲಕೋಟೆ(ಅ.18):  ಬಾಗಲಕೋಟೆಯ ಬಿವಿವಿ ಸಂಘಕ್ಕೆ ಆಂಧ್ರಪ್ರದೇಶದ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ನೀಡಿರುವ 8,500 ಚ.ಅಡಿ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ಪತ್ರಗಳನ್ನು ನೀಡುವ ಕಾರ್ಯಕ್ರಮ ಅತ್ಯಂತ ವರ್ಣರಂಜಿತ ಕಾರ್ಯಕ್ರಮವಾಗಿ ಮಾರ್ಪಟ್ಟಿತು.

ವಿದ್ಯಾಗಿರಿಯ ಬಿವಿವಿ ಸಂಘದ ಬಿಇಸಿ ನೂತನ ಸಭಾಭವನದ ಉದ್ಘಾಟನೆಯ ಸಂದರ್ಭದಲ್ಲಿ ಸೋಮವಾರ ಆಂಧ್ರಪ್ರದೇಶದ ಹಣಕಾಸು ಸಚಿವರಾದ ಬುಗ್ಗನ್‌ ರಾಜೇಂದ್ರನಾಥ ರೆಡ್ಡಿ, ತಿರುಮಲ್‌ ಟ್ರಸ್ಟ್‌ನ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ, ಅಲ್ಲಿನ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾರೆಡ್ಡಿ, ಸಚಿವ ಗೋವಿಂದ ಕಾರಜೋಳ ಉಪಸ್ಥಿತಿಯಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರಿಗೆ ಜಮೀನಿನ ಕಾಗದಗಳನ್ನು ಹಸ್ತಾಂತರಿಸಲಾಯಿತು.

ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ಬಲ: ಸಚಿವ ಮುರುಗೇಶ್ ನಿರಾಣಿ

ಕಾರ್ಯಕ್ರಮದ ಸಂದರ್ಭದಲ್ಲಿ .15 ಕೋಟಿ ವೆಚ್ಚದ ಅತ್ಯಾಧುನಿಕ ನೂತನ ಅಡಿಟೋರಿಯಂ ಹಾಲ್‌ ಅನ್ನು ಉದ್ಘಾಟಿಸಿದ ಆಂಧ್ರಪ್ರದೇಶದ ಹಣಕಾಸು ಸಚಿವ ಬುಗ್ಗನ್‌ ರಾಜೇಂದ್ರನಾಥ ರೆಡ್ಡಿ ತಿರುಮಲದಲ್ಲಿ ಬಿವಿವಿ ಸಂಘಕ್ಕೆ ನೀಡಿದ ಜಮೀನು ಹಾಗೂ ಆ ಸಂದರ್ಭದ ಸವಾಲುಗಳನ್ನು ಮೆಲಕುಹಾಕಿದರು.

ಕಠಿಣ ಕೆಲಸವಾಗಿತ್ತು:

ಕಳೆದ 25 ವರ್ಷದಿಂದ ತಿರುಪತಿ ದೇವಸ್ಥಾನದ ವ್ಯಾಪ್ತಿಯಲ್ಲಿ ಯಾರಿಗೂ ಸಹ ನಿವೇಶನ ಹಾಗೂ ಜಮೀನನ್ನು ನೀಡಿರಲಿಲ್ಲ. ಅದಕ್ಕೆ ಕೇಂದ್ರ ಸರ್ಕಾರ ಹಾಗೂ ಆಡಳಿತ ಮಂಡಳಿ ಕಠಿಣ ನಿಯಮಗಳಿಂದ ಅವಕಾಶವಿರಲಿಲ್ಲ ಎಂದು ಹೇಳಿದರಲ್ಲದೇ, ಆಂದ್ರದ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಅವರಿಗೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಾಡಿಕೊಂಡ ಮನವಿಯ ನಂತರ ಬಿವಿವಿ ಸಂಘಕ್ಕೆ ಜಮೀನು ನೀಡಲು ತೀರ್ಮಾನಿಸಲಾಯಿತು ಎಂದರು.

ಶಾಸಕ ವೀರಣ್ಣ ಚರಂತಿಮಠ ಅವರ ನಿರಂತರ ಪರಿಶ್ರಮದ ಫಲವಾಗಿ ತಿರುಮಲದಲ್ಲಿ ಈ ಪ್ರಮಾಣದ ಜಮೀನನ್ನು ನೀಡಿದ್ದೇವೆ ಎಂದು ಹೇಳಿದರಲ್ಲದೇ, ಆಂದ್ರದ ಮುಖ್ಯಮಂತ್ರಿಗಳು ಯಡಿಯೂರಪ್ಪ ಅವರ ಮನವಿಯನ್ನು ಪರಿಗಣಿಸಿ ತಕ್ಷಣವೇ ಜಮೀನನ್ನು ನೀಡಲು ಒಪ್ಪಿಕೊಂಡರು.

ಬಾಗಲಕೋಟೆ ಜಿಲ್ಲೆಯೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡ ಆಂದ್ರದ ಹಣಕಾಸು ಸಚಿವರು ತಮ್ಮ ಪತ್ನಿಯ ತವರಾದ ಮುಧೋಳ ಹಾಗೂ ಅಲ್ಲಿನ ಶಾಸಕರೂ, ಸಚಿವರಾಗಿರುವ ಕಾರಜೋಳ ಅವರ ಜೊತೆಗಿನ ಸಂಬಂಧವನ್ನು ಮೆಲಕು ಹಾಕಿದರು.

ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿ.ವಿ.ಸುಬ್ಬಾರೆಡ್ಡಿ ಮಾತನಾಡಿ, ಸನಾತನ ಹಿಂದು ಧರ್ಮದ ರಕ್ಷಣೆಗೆ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ನಿರಂತರವಾಗಿ ಶ್ರಮಿಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಸಹ ಸದ್ಯದಲ್ಲಿಯೇ ದೇವಸ್ಥಾನದ ಉದ್ಘಾಟನೆ ಹಾಗೂ ಕುಂಭಮೇಳ ನಡೆಯಲಿದೆ ಎಂದು ತಿಳಿಸಿದರಲ್ಲದೇ, ಆಂಧ್ರದ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಅವರ ಆಡಳಿತ ಅವಧಿಯಲ್ಲಿ ಆಂಧ್ರದ ವ್ಯಾಪ್ತಿಯಲ್ಲಿ ಎಲ್ಲ ಧರ್ಮದ ಭಾಗವಾಗಿ 2 ಸಾವಿರ ದೇವಸ್ಥಾನಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೊರೋನಾ ನಂತರದ ದಿನಗಳಲ್ಲಿ ತಿರುಮಲ ದೇವಸ್ಥಾನದ ಸ್ಥಿತಿಗತಿ ಹಾಗು ನಂತರದ ದಿನಗಳಲ್ಲಿ ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದಾಗಿ ಹೇಳಿ, ಪ್ರತಿ ನಿತ್ಯ ಸಾಮಾನ್ಯ ದಿನಗಳಲ್ಲಿ 80 ಸಾವಿರ ಭಕ್ತರು ದರ್ಶನ ಪಡೆಯುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಬಾಗಲಕೋಟೆ ಜಿಲ್ಲೆಗೆ ಇಬ್ಬರ ಕೊಡುಗೆ ನೆನಪಿನಲ್ಲಿ ನಿರಂತರವಾಗಿ ಉಳಿಯಲಿದೆ. ಜಿಲ್ಲೆ ಮಾಡಿದ ಮಾಜಿ ಜೆ.ಎಚ್‌.ಪಟೇಲ, ಶಿಕ್ಷಣ ಕ್ರಾಂತಿ ಮಾಡಿದ ವೀರಣ್ಣ ಚರಂತಿಮಠ ಅವರ ಸೇವೆಯನ್ನು ಕೊಂಡಾಡಿದರು.

ಕಾಂಗ್ರೆಸ್ ಮುಳುಗ್ತಿರೋ ಹಡಗು; ಖರ್ಗೆಯನ್ನ ಹಡಗಿನ ಜತೆ ಮುಳುಗಿಸ್ತಾರೆ -ಕಾರಜೋಳ

ಕಾರ್ಯಕ್ರಮದಲ್ಲಿ ತಿರುಮಲ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾರೆಡ್ಡಿ, ಅಧ್ಯಕ್ಷತೆ ವಹಿಸಿದ್ದ ವೀರಣ್ಣ ಚರಂತಿಮಠ ಅವರು ಮಾತನಾಡಿದರು. ವೇದಿಕೆ ಮೇಲೆ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಬಿವಿವಿ ಸಂಘದ ತಾಂತ್ರಿಕ ನಿರ್ದೇಶಕ ಡಾ.ಆರ್‌.ಎನ್‌.ಹೆರಕಲ್‌ ಹಾಗೂ ಪ್ರಾಚಾರ್ಯ ಡಾ.ಎಸ್‌.ಎಸ್‌.ಇಂಜನಗೇರಿ ಉಪಸ್ಥಿತರಿದ್ದರು.

21ನೇ ಶತಮಾನದಲ್ಲಿ ಶಿಕ್ಷಣ ಕ್ಷೇತ್ರದ ಬಲವರ್ಧನೆಗಾಗಿ ಹುಟ್ಟಿಬಂದ ಶರಣ ಸಂತ ಬಾಗಲಕೋಟೆಯ ಬಿವಿವಿ ಸಂಘದ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ವೀರಣ್ಣ ಚರಂತಿಮಠ, ನಾನು ನೋಡಿದ ಸಂತರಲ್ಲಿ ಇವರು ಪ್ರಮುಖರಾಗಿದ್ದು, ಇವರಿಂದ ಜಗತ್ತಿನೆಲ್ಲೆಡೆ ಬಾಗಲಕೋಟೆಯ ಕೀರ್ತಿ ಹೆಚ್ಚಿದೆ ಅಂತ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios