Vijayapura: ಅಕ್ಕಮಹಾದೇವಿ ವಿವಿ ಘಟಿಕೋತ್ಸವ: 4 ಚಿನ್ನದ ಪದಕ ಮುಡಿಗೇರಿಸಿಕೊಂಡ ಗರ್ಭಿಣಿ
ವಿಜಯಪುರ ನಗರದ ಹೊರ ವಲಯದಲ್ಲಿರುವ ತೊರವಿ ಬಳಿಯ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯ ಆವರಣದಲ್ಲಿ ಇಂದು ಹಮ್ಮಿಕೊಂಡ 13 ಮತ್ತು 14 ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಹಿಳಾ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ವಿಜಯಪುರ (ಡಿ.19) :
(ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್)
ನಗರ ಹೊರ ವಲಯದ ತೊರವಿ ಬಳಿಯ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯ ಆವರಣದಲ್ಲಿ ಇಂದು ಹಮ್ಮಿಕೊಂಡ 13 ಮತ್ತು 14 ನೇ ವಾರ್ಷಿಕ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಹಿಳಾ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಇದೆ ವೇಳೆ 4 ಚಿನ್ನದ ಮೆಡಲ್ ಪಡೆದ ಧಾರವಾಡ ಮೂಲಕ 7 ತಿಂಗಳ ಗರ್ಭಿಣಿ ತನ್ನ ಮಗು, ಗಂಡ, ಕುಟುಂಬ ಸಮೇತವಾಗಿ ಬಂದು ಮೆಡಲ್ ಸ್ವೀಕರಿಸಿದ್ದಾರೆ. ಈ ಮೂಲಕ ಸಾಧನೆಗೆ ಯಾವುದು ಕೂಡ ಅಡ್ಡಿಯಾಗದು ಅನ್ನೋದನ್ನ ಸಾಬೀತು ಪಡೆಸಿದ್ದಾರೆ.
ಇದೇ ವೇಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಡಿನ ಇಬ್ಬರು ಸಾಧಕಿಯರಿಗೆ ಡಾಕ್ಟರೇಟ್ ಗೌರವ ನೀಡಲಾಯಿತು. ಡಾ.ಜಿ.ಎಸ್. ಸುಶೀಲಮ್ಮ, ರೇಷ್ಮಾ ಕೌರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
4 ಚಿನ್ನದ ಮೆಡಲ್ ಬಾಚಿದ 7 ತಿಂಗಳ ಗರ್ಭಿಣಿ: ಮದುವೆಯಾಗಿ 2 ವರ್ಷದ ಮಗುವಿದ್ದರು ಕನ್ನಡದಲ್ಲಿ ಎಂ.ಎ ಮಾಡಿದ್ದ ವಿದ್ಯಾರ್ಥಿನಿಯೊಬ್ಬರು 4 ಮೆಡಲ್ ಬಾಚಿದ್ದು ವಿಶೇಷವಾಗಿತ್ತು. ಧಾರವಾಡ ಮೂಲದ ಸವಿತಾ ಕುಲಕರ್ಣಿ ಕನ್ನಡ ಎಂ.ಎ ವಿಭಾಗದಲ್ಲಿ ಮೂರು ಹಾಗೂ ಕಳೆದ ಸಾಲಿನಲ್ಲಿ ಒಂದು ಮೆಡಲ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ತಾನು 7 ತಿಂಗಳ ಗರ್ಭಿಣಿಯಾಗಿದ್ದರು ಧಾರವಾಡದಿಂದ ಆಗಮಿಸಿ ರಾಜ್ಯಪಾಲರಿಂದ ಮೆಡಲ್ ಸ್ವೀಕರಿಸಿ ಜ್ಞಾನ ಸಂಪಾದನೆಗೆ, ಸಾಧನೆಗೆ ಯಾವುದು ಅಡಚಣೆ ಆಗದು ಎನ್ನುವುದನ್ನ ತೋರಿಸಿದರು.
ಭೀಮಾತೀರದಲ್ಲಿ ಜನಮೆಚ್ಚುಗೆ ಪಡೆದ ಡಿಸಿ ನಡೆ ಹಳ್ಳಿ ಕಡೆ, ಗರ್ಭಿಣಿಯರಿಗೆ ಸೀಮಂತ, ಮಗುವಿಗೆ ನಾಮಕರಣ!
ಸಂಸಾರದ ನಡುವೆಯೂ ಸವಿತಾ ಸಾಧನೆ: ನವಲಗುಂದ ಮೂಲದ ಸವಿತಾರನ್ನ ಧಾರವಾಡದ ಕುಲಕರ್ಣಿ ಮನೆತನಕ್ಕೆ ಮದುವೆ ಮಾಡಿ ಕೊಡಲಾಗಿತ್ತು. 2 ವರ್ಷದ ಗಂಡು ಮಗು ಇದ್ದಾಗಲೇ ಸವಿತಾ ತಮ್ಮ ವಿದ್ಯಾಭ್ಯಾಸ ಮುಂದುವರೆಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದಲ್ಲಿ ಎಂ.ಎ ಕನ್ನಡ ವಿಭಾಗಕ್ಕೆ ಪ್ರವೇಶ ಪಡೆದಿದ್ದರು. ಮಗು ಪ್ರಲ್ಹಾದ ಚಿಕ್ಕವನಿದ್ದಾಗಲೂ ಆತ ಮಲಗಿದ ಮೇಲೆ ಸವಿತಾ ಛಲಬಿಡದೆ ಅಭ್ಯಾಸ ಮಾಡಿದ್ದರು. ಪರಿಣಾಮ ಇಂದು 4 ಗೋಲ್ಡ್ ಮೆಡಲ್ ಪಡೆದು ಸಾಧನೆ ಮಾಡಿದ್ದಾರೆ. ಸಂಸಾರದ ಗದ್ದಲದ ನಡುವೆಯೂ ಸಾಧನೆಗೆ ಯಾವುದು ಕೂಡ ಅಡ್ಡಿಯಾಗದು ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ ಸವಿತಾ.
ವಿದ್ಯಾರ್ಥಿನಿಯರ ಚಿನ್ನದ ಬೇಟೆ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ 167 ವಿದ್ಯಾರ್ಥಿಗಳಿಗೆ 202 ಚಿನ್ನದ ಪದಕ, 23,911 ವಿದ್ಯಾರ್ಥಿನಿ ಯರಿಗೆ ಪ್ರದವಿ ಪ್ರದಾನ, 55 ವಿದ್ಯಾರ್ಥಿನಿಯರಿಗೆ ಪಿಎಚ್ ಡಿ ಪ್ರಧಾನ ಮಾಡಲಾಯಿತು. ಕೆಲ ವಿದ್ಯಾರ್ಥಿನಿಯರು ನಾಲ್ಕು, ಮೂರು, ಎರಡೂ ಚಿನ್ನದ ಪದಕ ಬಾಚಿಕೊಳ್ಳುವ ಮೂಲಕ ಗಮನ ಸೆಳೆದರು.
ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಜ್ಯಪಾಲರು: ಇದೆ ವೇಳೆ ಮಾತನಾಡಿದ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಎಲ್ಲರಿಗೂ ನನ್ನ ಹಾರ್ದಿಕ ಅಭಿನಂದನೆಗಳು ಎಂದು ಕನ್ನಡದಲ್ಲೇ ಭಾಷಣ ಪ್ರಾರಂಭಿಸಿದರು. ಭಾಷಣದ ಆರಂಭದಲ್ಲಿ ಶರಣೆ ಅಕ್ಕಮಹಾದೇವಿಯನ್ನ ನೆನೆದ ರಾಜ್ಯಪಾಲರು ಮಹಿಳಾ ಶಿಕ್ಷಣಕ್ಕಾಗಿ ರಾಜ್ಯದಲ್ಲಿರೋ ಏಕೈಕ ಮಹಿಳಾ ವಿವಿ ಇದಾಗಿದೆ. ಮಹಿಳಾ ಸಬಲೀಕರಣದ ಆಶಯ ಈ ಮೂಲಕ ಈಡೇರುತ್ತಿದೆ. ಗೌರವ ಡಾಕ್ಟರೇಟ್ ಪಡೆದ ಮೂವರು ಮಹಿಳಾ ಸಾಧಕಿಯರ ಸಾಧನೆಯನ್ನ ಹಾಡಿ ಹೊಗಳಿ ದರು. ಅಲ್ಲದೆ ಇದೇ ಸೇವೆಯನ್ನು ಜೀವನ ಪರ್ಯಂತ ಮಾಡಬೇಕೆಂದು ಸಾಧಕ ಮಹಿಳೆಯರಲ್ಲಿ ರಾಜ್ಯಪಾಲರು ಮನವಿ ಮಾಡಿದರು. ತಮ್ಮ ಭಾಷಣದಲ್ಲಿ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮೀ, ವಿದ್ಯೆಯ ಅಧಿದೇವತೆ ಸರಸ್ವತಿಯನ್ನ ಗವರ್ನರ್ ನೆನೆದರು. ಜೊತೆಗೆ ಮಹಾಶರಣೆ ಅಕ್ಕಮಹಾದೇವಿಯನ್ನ ನೆನೆಯುವ ಮೂಲಕ ನಮ್ಮ ಸಂಸ್ಕೃತಿಯನ್ನ ಕೊಂಡಾಡಿದರು.
ಮಕ್ಕಳ ಅಶ್ಲೀಲ ವೀಡಿಯೋ ನೋಡಿದರೆ, ಡೌನ್ಲೋಡ್ ಮಾಡಿದರೆ ಜೈಲು ಗ್ಯಾರಂಟಿ
ಇದೆ ವೇಳೆ ಹೊಸ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಶಾಂತಿಶ್ರೀ ಧೂಳಪುಡಿ ಪಂಡಿತ, ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯ ಕುಲಪತಿ ಬಿ.ಕೆ. ತುಳಸಿಮಾಲ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ಎಸ್ಪಿ ಎಚ್.ಡಿ. ಆನಂದಕುಮಾರ, ಪ್ರೊ. ಓಂಕಾರ ಕಾಕಡೆ ಸೇರಿದಂತೆ ಮತ್ತಿತರರು ಇದ್ದರು.