Asianet Suvarna News Asianet Suvarna News

ಉಚಿತ ಆರೋಗ್ಯ ಸೇವೆಗೆ ಅಭಾ ಕಾರ್ಡ್‌ : ಡೀಸಿ

ಆಭಾ ಕಾರ್ಡ್‌ ಹೊಂದಿರುವ ಯಾವುದೇ ವ್ಯಕ್ತಿ ದೇಶದ ಯಾವುದೇ ಸರ್ಕಾರಿ/ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ನಾಗರಿಕರು ಆಯುಷ್ಮಾನ್‌ ಭಾರತ್‌ ಹೆಲ್ತ್‌ ಅಕೌಂಟ್‌ (ಆಭಾ) ಕಾರ್ಡ್‌ಗಳನ್ನು ಪಡೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ ತಿಳಿಸಿದರು.

Abha Card for Free Healthcare Facility snr
Author
First Published Nov 1, 2022, 4:36 AM IST

 ತುಮಕೂರು (ನ.01):  ಆಭಾ ಕಾರ್ಡ್‌ ಹೊಂದಿರುವ ಯಾವುದೇ ವ್ಯಕ್ತಿ ದೇಶದ ಯಾವುದೇ ಸರ್ಕಾರಿ/ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ನಾಗರಿಕರು ಆಯುಷ್ಮಾನ್‌ ಭಾರತ್‌ ಹೆಲ್ತ್‌ ಅಕೌಂಟ್‌ (ಆಭಾ) ಕಾರ್ಡ್‌ಗಳನ್ನು ಪಡೆಯಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌ ಪಾಟೀಲ ತಿಳಿಸಿದರು.

ತಮ್ಮ ಕಚೇರಿಯ ಕೆಸ್ವಾನ್‌ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿ ಮಾತನಾಡಿದರು. ಸರ್ಕಾರ ಜನಸಾಮಾನ್ಯರ ಆರೋಗ್ಯದ ಕಾಳಜಿಗಾಗಿ ಯೋಜನೆ ಜಾರಿಗೆ ತಂದಿದ್ದು ಗ್ರಾಮ ಒನ್‌ ಸೇರಿದಂತೆ ನಿಗಧಿತ ಸೇವಾ ಕೇಂದ್ರಗಳಲ್ಲಿ ಆಭಾ ಕಾರ್ಡ್‌ ಒದಗಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಡಿಸೆಂಬರ್‌ 5ರಿಂದ 1ರಿಂದ 15ನೇ ವಯಸ್ಸಿನ ಮಕ್ಕಳಿಗೆ ಜೆಇ ಲಸಿಕಾ ಅಭಿಯಾನ ನಡೆಯುವ ಹಿನ್ನೆಲೆಯಲ್ಲಿ ಕೋವಿಡ್‌ ತಡೆಗಟ್ಟಲು ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕಾಕರಣವನ್ನು ನವೆಂಬರ್‌ 10ರೊಳಗೆ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.

ಬೆಳೆಹಾನಿ ಸರ್ವೆ ಮಾಡಿ ರೈತರ ಅಗತ್ಯ ದಾಖಲೆಗಳನ್ನು ಪರಿಹಾರ ಪೋರ್ಟಲ್‌ನಲ್ಲಿ ನಮೂದಿಸುವುದು, ಜೀವಹಾನಿ ಪ್ರಕರಣಗಳಿಗೆ ಶೀಘ್ರ ಪರಿಹಾರ, ಮನೆಹಾನಿಗೆ ಸಂಬಂಧಿಸಿದಂತೆ ಜಿಪಿಎಸ್‌ ಪೂರ್ಣಗೊಳಿಸಿ ಪರಿಹಾರ ನೀಡುವುದು ಹೊಸದಾಗಿ ಕಟ್ಟುತ್ತಿರುವ ಮನೆಗಳ ಜಿಪಿಎಸ್‌ ಕಾರ್ಯ ತ್ವರಿತಗತಿಯಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಲರ್ಚ್‌ ಇರಬೇಕು ಎಂದು ಆಯಾ ತಾಲೂಕು ತಹಸೀಲ್ದಾರ್‌ ಹಾಗೂ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳನ್ನು ಒದಗಿಸುವ ನಿಟ್ಟಿನಲ್ಲಿ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಹಾಗೂ ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೂಕ್ತ ನಿವೇಶನ ಗುರುತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಪರ್ದಿಗೆ ವಹಿಸಬೇಕು. ಸರ್ಕಾರಿ/ಗ್ರಾಮ ಠಾಣ ಜಾಗದಲ್ಲಿರುವ ಸರ್ಕಾರಿ ಶಾಲೆಗಳನ್ನು ಶಿಕ್ಷಣ ಇಲಾಖೆಯ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಅವಕಾಶವಿದ್ದು ಸಂಬಂಧಿಸಿದ ಬಿಇಓ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮುಖ್ಯ ಶಿಕ್ಷಕರಿಂದ ಗ್ರಾಮ ಪಂಚಾಯತಿ ಪಿಡಿಓಗಳಿಗೆ ದಾಖಲೆಗಳನ್ನು ನೀಡಿ ಖಾತೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ. ಅಜಯ್‌, ಜಿಲ್ಲಾ ವಾರ್ತಾಧಿಕಾರಿ ಎಂ.ಆರ್‌. ಮಮತಾ, ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ ಅತಿಕ್‌ ಪಾಷಾ, ಡಿಎಚ್‌ಓ ಡಾ. ಮಂಜುನಾಥ್‌, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ವೀಣಾ, ಡಿಡಿಎಲ್‌ಆರ್‌ ಸುಜಯ್‌ ಕುಮಾರ್‌, ತಹಸೀಲ್ದಾರ್‌ ಮೋಹನ್‌ ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕಿ ಟಿಎಸ್‌ಎಲ್‌ ಪ್ರೇಮಾ ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಿಕಲಚೇತನರಿಗೆ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢಿಕರಿಸಲಾಗುವ ವೈದ್ಯಕೀಯ ಪ್ರಮಾಣಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿ (ಯುಡಿಐಡಿ) ಕಾರ್ಡ್‌ಗಳನ್ನು ಅರ್ಹ ವಿಕಲಚೇತನರಿಗೆ ನೀಡಬೇಕಾಗಿದ್ದು, ಬಾಕಿ ಇರುವ 350 ಅಧಿಕ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಕ್ಷಯರೋಗಿಗಳ ದತ್ತು ಕಾರ್ಯಕ್ರಮದಡಿ ರೋಗಿಗಳಿಗೆ ಬೇಕಾದ ಪೌಷ್ಟಿಕಾಹಾರ ಒದಗಿಸಲು ಆಸಕ್ತ ಸರ್ಕಾರಿ ಅಧಿಕಾರಿ/ ನೌಕರರು ಜಿಲ್ಲಾ ಟಿಬಿ ನಿಯಂತ್ರಣಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ವೈ.ಎಸ್‌ ಪಾಟೀಲ ಜಿಲ್ಲಾಧಿಕಾರಿ

ಆಭಾ ಕಾರ್ಡ್‌ ಹೊಂದಿರುವ ಯಾವುದೇ ವ್ಯಕ್ತಿ ದೇಶದ ಯಾವುದೇ ಸರ್ಕಾರಿ/ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ

ನಾಗರಿಕರು ಆಯುಷ್ಮಾನ್‌ ಭಾರತ್‌ ಹೆಲ್ತ್‌ ಅಕೌಂಟ್‌ (ಆಭಾ) ಕಾರ್ಡ್‌ಗಳನ್ನು ಪಡೆಯಲು ಮುಂದಾಗಬೇಕು

ಸರ್ಕಾರ ಜನಸಾಮಾನ್ಯರ ಆರೋಗ್ಯದ ಕಾಳಜಿಗಾಗಿ ಯೋಜನೆ ಜಾರಿಗೆ ತಂದಿದ್ದು ಗ್ರಾಮ ಒನ್‌ ಸೇರಿದಂತೆ ನಿಗಧಿತ ಸೇವಾ ಕೇಂದ್ರಗಳಲ್ಲಿ ಆಭಾ ಕಾರ್ಡ್‌ ಒದಗಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು

Follow Us:
Download App:
  • android
  • ios