Asianet Suvarna News Asianet Suvarna News

ವಿಜಯಪುರದಲ್ಲಿ 75 ವರ್ಷದ ಹಳೆಯ ಧ್ವಜ ಆರೋಹಣ: ಸ್ವಾತಂತ್ರ್ಯ ಸಿಕ್ಕ ದಿನ ಹಾರಿದ ಧ್ವಜವಿದು

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅಪರೂಪದ ಧ್ವಜಾರೋಹಣವೊಂದು ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿನ ಶಿಕ್ಷಣ ಸಂಸ್ಥೆ ಅಪರೂಪದಲ್ಲೆ ಅಪರೂಪದ ಧ್ವಜಾರೋಹಣಕ್ಕೆ ಸಾಕ್ಷಿಯಾಗಿದೆ.

75th Independence day celebration: 75 Year old National flag hoisted in Vijayapura akb
Author
Vijayapura, First Published Aug 15, 2022, 3:41 PM IST

ವಿಜಯಪುರ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅಪರೂಪದ ಧ್ವಜಾರೋಹಣವೊಂದು ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿನ ಶಿಕ್ಷಣ ಸಂಸ್ಥೆ ಅಪರೂಪದಲ್ಲೆ ಅಪರೂಪದ ಧ್ವಜಾರೋಹಣಕ್ಕೆ ಸಾಕ್ಷಿಯಾಗಿದೆ. 75ನೇ ಸ್ವಾತಂತ್ರ್ಯ ಮಹೋತ್ಸವದ ದಿನ 75 ವರ್ಷದ ಹಳೆದ ಧ್ವಜ ಬಳಸಿ ಧ್ವಜಾರೋಹಣ ನೆರವೇರಿಸಲಾಗಿದೆ. ನಾಲತವಾಡ ಪಟ್ಟಣದಲ್ಲಿನ ವಿಶ್ವಚೇತನ ಶಿಕ್ಷಣ ಸಂಸ್ಥೆಯಲ್ಲಿ ಈ ಧ್ವಜಾರೋಹಣ ನೆರವೇರಿಸಲಾಗಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ 75 ವರ್ಷಗಳಿಂದ ಸುರಕ್ಷಿತವಾಗಿ ಇಡಲಾಗಿರುವ ಧ್ವಜವಿದ್ದು, ಪ್ರತಿವರ್ಷ ಅದನ್ನೇ ಈ ಶಾಲೆಯಲ್ಲಿ ಹಾರಿಸಲಾಗುತ್ತದೆ. ಅದರಂತೆ ಇಂದು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಪರೂಪದ ಧ್ವಜಾರೋಹಣ ನಡೆದಿದೆ.

91 ವರ್ಷದ ಹಿರಿತಲೆಯ ಬಳಿ ಇದೆ ಈ ಧ್ವಜ

ಹಿರಿಯರು ನಾಲತವಾಡ ಮೂಲದ ಧಾರವಾಡ ನಿವಾಸಿಯಾಗಿರುವ 91 ವರ್ಷದ ಗಂಗಾಧರ ನರಸಿಂಗರಾವ ಕುಲಕರ್ಣಿ ಎಂಬುವವರ ಹತ್ತಿರ ಈ ಧ್ವಜವಿದೆ. ಅದನ್ನು ನಾಲ್ಕನೇ ತರಗತಿ ಓದುತ್ತಿದ್ದಾಗ ಅವರಿಗೆ ಆದಪ್ಪ ಯರಗುಂಟಿ ಎಂಬ ಗುರುಗಳು ನೀಡಿದ್ದರಂತೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮಕ್ಕಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಪ್ರತೀಕವಾಗಿ ಆಗಸ್ಟ್‌ 14ರಂದು 1947ರ ಮಧ್ಯರಾತ್ರಿ ರಾಷ್ಟ್ರಧ್ವಜ ನೀಡಿದ್ದರಂತೆ. ಆಗ 25 ಪೈಸೆ ಕೊಟ್ಟು ಖರೀದಿಸಿದ್ದ ರಾಷ್ಟ್ರಧ್ವಜವನ್ನು ಗಂಗಾಧರ ಅವರು ತಮ್ಮ ಹೆತ್ತಮ್ಮಗೆ ಕಾಣಿಕೆಯಾಗಿ ಕೊಟ್ಟಿದ್ದರಂತೆ. ಸುಮಾರು ಅರವತ್ತು ವರ್ಷಗಳ ಕಾಲ ಗಂಗಾಧರ ಅವರ ತಾಯಿ ಈ ಧ್ವಜವನ್ನ ಪ್ರತಿವರ್ಷ ಧ್ವಜಾರೋಹಣದ ಸಂದರ್ಭದಲ್ಲಿ ಹಾರಿಸುತ್ತಿದ್ದರಂತೆ. ತಮ್ಮ ಧಾರವಾಡದ ಮನೆಯಲ್ಲಿ ಪ್ರತಿವರ್ಷ ಈ ಧ್ವಜವನ್ನ ಹಾರಿಸುತ್ತಿದ್ದರಂತೆ.

ನೇತಾಜಿ ಅಸ್ಥಿಯನ್ನು ಭಾರತಕ್ಕೆ ತರುವ ಸಮಯ ಬಂದಿದೆ: ಪುತ್ರಿ ಅನಿತಾ ಬೋಸ ...

ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿರುತ್ತಿದ್ದ ರಾಷ್ಟ್ರಧ್ವಜ

ಈ ಸಲ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಾಲತವಾಡ ಪಟ್ಟಣದ ತಮ್ಮ ನಿವಾಸದಲ್ಲಿ ತೆರೆಯಲಾದ ಶಾಲೆಯಲ್ಲಿ ಈ ಬಾರಿ ಧ್ವಜಾರೋಹಣ ನೆರವೇರಿಸಿದ್ದಾರೆ. ಧ್ವಜಕ್ಕೆ ಧಕ್ಕೆಯಾಗಬಾರದು ಎನ್ನುವ ಕಾರಣಕ್ಕೆ ತಾಯಿಯ ಆಸೆಯಂತೆ ಕುಲಕರ್ಣಿಯವರು ಧಾರವಾಡದ ಬ್ಯಾಂಕ್‌ ಲಾಕರಿನಲ್ಲಿ ಈ ಧ್ವಜವನ್ನ ಇಡುತ್ತಿದ್ದರಂತೆ. ಪ್ರತಿವರ್ಷ ಧ್ವಜಾರೋಹಣದ ವೇಳೆ ಇದನ್ನ ಮನೆಗೆ ತರುತ್ತಾರೆ. ಧ್ವಜವಂದನೆಯಾದ ನಂತರ ಮತ್ತೆ ಮರುದಿನ ಬ್ಯಾಂಕಿಗೆ ಒಯ್ದು ಈ ಧ್ವಜವನ್ನ ಸುರಕ್ಷಿತವಾಗಿಡುತ್ತಾರೆ. ಇಂದು ನಾಲತವಾಡ ಪಟ್ಟಣದಲ್ಲಿ ವಿಶ್ವ ಚೇತನ ಶಿಕ್ಷಣ ಸಂಸ್ಥೆಯಲ್ಲಿ ಮಾಜಿ ಸೈನಿಕ ಪರ್ವತಗೌಡ ಬಿರಾದಾರರೊಡಗೂಡಿ 91 ವರ್ಷದ ವೃದ್ಧ ಗಂಗಾಧರ ನರಸಿಗಂಗರಾವ ಕುಲಕರ್ಣಿಯವರು ಈ ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಊರಿನ ಹಿರಿಯರು, ಮುಖ್ಯೋಪಾಧ್ಯಾಯರು ಮತ್ತು ಶಾಲೆಯ ಮಕ್ಕಳು ಇನ್ನಿತರರು ಇದ್ದರು.
INDIA@75: ಚೆನ್ನಮ್ಮ ಸ್ವಾತಂತ್ರ್ಯದ ಮೊದಲ ಹೋರಾಟಗಾರ್ತಿ ಎಂದು ಘೋಷಣೆಯ ...

 

Follow Us:
Download App:
  • android
  • ios