ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜೂನ್ 09ರಂದು ಮತ್ತೆ ಹೊಸದಾಗಿ 6 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 129ಕ್ಕೆ ಏರಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಜು.10): ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸದಿಂದ ಮೆರೆಯುತ್ತಿದ್ದು, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರು ಸೇರಿ ಮತ್ತೆ 6 ಮಂದಿಯಲ್ಲಿ ಗುರುವಾರ ಕೊರೋನಾ ಸೋಂಕಿರುವುದು ದೃಢಪಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಲ್ಲಾ ವಿಚಕ್ಷಣಾ ಘಟಕದ ಲ್ಯಾಬ್‌ ಟೆಕ್ನಿಷಿಯನ್‌ನಲ್ಲಿ ಸೋಂಕು ಇರುವುದು ದೃಢಪಟ್ಟಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರ ಮತ್ತು ಶುಕ್ರವಾರ ಕೋವಿಡ್‌ ನಿಗಾ ಘಟಕ ಸೀಲ್‌ಡೌನ್‌ ಮಾಡಲಾಗಿದೆ. ಬರೀ ಇಷ್ಟೆಅಲ್ಲ, ಈ ಎರಡು ದಿನ ಗಂಟಲ ದ್ರವದ ಮಾದರಿಯನ್ನು ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಾಗಿದೆ.

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಜಿಪಂ ಉಪಾಧ್ಯಕ್ಷರು, ಬಿಜೆಪಿ ನಗರ ಘಟಕದ ಅಧ್ಯಕ್ಷರ ಪತ್ನಿ ಹಾಗೂ ಆರೋಗ್ಯ ಇಲಾಖೆಯ ಟೆಕ್ನಿಷಿಯನ್‌ ಹಾಗೂ ಇನ್ನುಳಿದ 2 ಪ್ರಕರಣಗಳು ಶೃಂಗೇರಿ ಮತ್ತು ತರೀಕೆರೆ ತಾಲೂಕುಗಳಲ್ಲಿ ರಾರ‍ಯಂಡಮ್‌ ಆಗಿ ತಪಾಸಣೆ ನಡೆಸಿದಾಗ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಟ್ಟು 129ಕ್ಕೇರಿದ್ದು, 60 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರನ್ನು ಜಿಲ್ಲೆಯ ಕೋವಿಡ್‌-19 ಸೆಂಟರ್‌ನ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೋನಾ ಭಯ:

ಈವರೆಗೆ ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೊರೋನಾ ಸೋಂಕು ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರ ತಲೆ ಕೆಡಿಸಿದೆ. ಬರೀ ಇಷ್ಟೆಅಲ್ಲಾ, ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ ಸ್ವಯಂಪ್ರೇರಿತವಾಗಿ ತಪಾಸಣೆಗೆ ಒಳಾಗುತ್ತಿದ್ದಾರೆಂಬ ಮಾತುಗಳು ಮೂರು ಪಕ್ಷಗಳ ನಡುವೆ ಓಡಾಡುತ್ತಿದೆ. ಒಟ್ಟಾರೆ ಕೊರೋನಾ ಕಾಫಿಯ ನಾಡನ್ನು ತಲ್ಲಣಗೊಳಿಸಿದೆ. ಶಾಸಕ ಟಿ.ಡಿ.ರಾಜೇಗೌಡ ಜುಲೈ 4ರಂದು ತಾಪಂ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ತಡೆ ಸಭೆ ನಡೆಸಿದ್ದರು. ಅಂದು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಅಲ್ಲದೆ, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಗಳಲ್ಲೂ ಭಾಗವಹಿಸಿದ್ದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ರೌದ್ರ ನರ್ತನ: 37 ಜನರಿಗೆ ಸೋಂಕು

ರಾಜೇಗೌಡರಿಗೆ ಪಾಸಿಟಿವ್‌ ಬಂದಿರುವುದರಿಂದ ಅಂದು ಸಭೆಯಲ್ಲಿ ಭಾಗವಹಿಸಿದ ಹಲವರಿಗೆ ಭಯ ಶುರುವಾಗಿದೆ. ಹಲವರು ತಮ್ಮ ಗಂಟಲು ದ್ರವ ಪರೀಕ್ಷೆಗೆ ರೆಡಿಯಾಗುತ್ತಿದ್ದಾರೆ. ಈ ನಡುವೆ ಜುಲೈ 4ರ ಸಭೆಗಳಲ್ಲಿ ಶಾಸಕ ರಾಜೇಗೌಡ ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಸ್ವಯಂ ಹೋಂ ಕ್ವಾರಂಟೈನ್‌ ಮಾಡಿಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ವೀರಪ್ರಸಾದ್‌ ಮನವಿ ಮಾಡಿದ್ದಾರೆ.

ಕಂಟೋನ್ಮೆಂಟ್‌ ವಲಯದಲ್ಲಿ 15 ಮನೆ

ನರಸಿಂಹರಾಜಪುರ: ತಾಲೂಕಿನ ಬೈಪಾಸ್‌ ರಸ್ತೆಯಲ್ಲಿ ಕೊರೋನಾ ಪಾಸಿಟಿವ್‌ ಬಂದಿರುವ ವ್ಯಕ್ತಿಯ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, 100 ಮೀಟರ್‌ ಸುತ್ತಳತೆಯನ್ನು ಕಂಟೋನ್ಮೆಂಟ್‌ ವಲಯ ಎಂದು ಗುರುತಿಸಲಾಗಿದೆ. ಇದರಲ್ಲಿ 14 ಮನೆ ಹಾಗೂ ಒಂದು ವೆಲ್ಡಿಂಗ್‌ಶಾಪ್‌ ಸೇರಿದೆ.

ಇದೇ ಪ್ರಥಮ ಬಾರಿಗೆ ತಾಲೂಕಿನಲ್ಲಿ ಕಂಟೋನ್ಮೆಂಟ್‌ ವಲಯ ಘೋಷಿಸಲಾಗಿದೆ. 14 ಮನೆಯವರು 14 ದಿನದವರೆಗೆ ಹೋಂ ಕ್ವಾರಂಟೈನ್‌ ಆಗಿದ್ದು, ಸಂಬಂಧಪಟ್ಟಮನೆಯವರಿಗೆ ಅಗತ್ಯವಸ್ತುಗಳನ್ನು ನೀಡುವ ಜವಬ್ದಾರಿ ಮೆಣಸೂರು ಗ್ರಾಪಂಗೆ ವಹಿಸಲಾಗಿದೆ. ಈಗಾಗಲೇ ಔಟ್‌ಪೋಸ್ಟ್‌ ತೆರೆಯಲಾಗಿದ್ದು, ನಿತ್ಯ ಪೊಲೀಸ್‌ ಕಾವಲು ಹಾಕಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಮಾತ್ರ ಕಂಟೋನ್ಮೆಂಟ್‌ ವ್ಯಾಪ್ತಿಯ ಒಳಗೆ ಹೋಗಬಹುದಾಗಿದೆ.