ಡಿ.4 ರಿಂದ ಡಿ.15ರವರೆಗೆ ಹತ್ತು ದಿನಗಳ ಕಾಲ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಆಗಮಿಸುವ ಗಣ್ಯರಿಗೆ ಹಾಗೂ ಪ್ರತಿಭಟನಾಕಾರರಿಗೆ, ಅಧಿವೇಶನ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನಿಗಾವಹಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ: ಬೆಳಗಾವಿ ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌ ಸಿದ್ದರಾಮಪ್ಪ 

ಬೆಳಗಾವಿ(ನ.28): ಇಲ್ಲಿನ ಸುವರ್ಣ ವಿಧಾನ ಸೌಧದಲ್ಲಿ ಡಿ.4 ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಪೊಲೀಸ್‌ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಭದ್ರತೆಗಾಗಿ ಸುಮಾರು 5 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌ ಸಿದ್ದರಾಮಪ್ಪ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.4 ರಿಂದ ಡಿ.15ರವರೆಗೆ ಹತ್ತು ದಿನಗಳ ಕಾಲ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಆಗಮಿಸುವ ಗಣ್ಯರಿಗೆ ಹಾಗೂ ಪ್ರತಿಭಟನಾಕಾರರಿಗೆ, ಅಧಿವೇಶನ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನಿಗಾವಹಿಸಲು ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಎಸ್‌ಪಿ-5, ಹೆಚ್ಚುವರಿ ಎಸ್ಪಿ-12, ಡಿವೈಎಸ್‌ಪಿ-42, ಪೊಲೀಸ್‌ ಇನಸ್ಪೆಕ್ಟರ್‌ -100, ಪಿಎಸ್‌ಐ-200, ಕೆಎಸ್‌ಆರ್‌ಪಿ ತುಕಡಿ-35, ಗುಪ್ತಚರ ಅಧಿಕಾರಿ, ಸಿಬ್ಬಂದಿ, ಶ್ವಾನದಳ, 3 ಸಾವಿರ ಪೊಲೀಸ್‌ ಸಿಬ್ಬಂದಿ ಸೇರಿದಂತೆ ಒಟ್ಟು 5 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದರು.

ರೈತರಿಗೆ ಬಡ್ಡಿ ರಹಿತ ಸಾಲ ಒದಗಿಸಿದ ಹೆಮ್ಮೆ ನನಗಿದೆ: ಲಕ್ಷ್ಮಣ ಸವದಿ

ಅಧಿವೇಶನದ ಕರ್ತವ್ಯಕ್ಕೆ ಆಗಮಿಸುವ ಹೊರ ಜಿಲ್ಲೆಯ ಪೊಲೀಸರಿಗಾಗಿ ಸೂಕ್ತ ವಸತಿ, ಕುಡಿಯುವ ನೀರು, ಉತ್ತಮ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸುವರ್ಣ ಸೌಧದ ಬಳಿ ಟೌನ್ ಶಿಪ್‌ ನಿರ್ಮಿಸಿ 1800 ಜನ ಸಿಬ್ಬಂದಿ, 200 ವಸತಿ ವ್ಯವಸ್ಥೆ, ಮಚ್ಛೆ ಕೆಎಸ್‌ಆರ್‌ಪಿ ತರಬೇತಿ ಕೇಂದ್ರದಲ್ಲಿ 600, ಕಂಗ್ರಾಳಿ ತರಬೇತಿ ಕೇಂದ್ರದಲ್ಲಿ 300, ಸಾಂಬ್ರಾ ವಿಮಾನ ನಿಲ್ದಾಣದ ಬಳಿ 150, ಭೂತರಾಮನಹಟ್ಟಿ, ವೀರಭದ್ರೇಶ್ವರ ದೇವಸ್ಥಾನ, ಶಹಾಪುರದಲ್ಲಿರುವ ದೇವಸ್ಥಾನ, ಖಾನಾಪುರ ಪೊಲೀಸ್‌ ತರಬೇತಿ ಕೇಂದ್ರ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿಗೆ ವಸತಿ, ಊಟ, ಸ್ನಾನಕ್ಕೆ ಬಿಸಿನೀರು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಬೆಳಗಾವಿ ವಿಧಾನಮಂಡಳ ಅಧಿವೇಶನಕ್ಕೆ ವಿರೋಧಿಸಿ ಮಹಾಮೇಳಾವ್‌ ಸಂಘಟಿಸಲು ಮುಂದಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಈವರೆಗೂ ಅನುಮತಿ ಕೋರಿ ಯಾವುದೇ ಅರ್ಜಿ ಬಂದಿಲ್ಲ. ಈ ಸಂಬಂಧ ಅರ್ಜಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.