Asianet Suvarna News Asianet Suvarna News

ಅಫಜಲ್ಪುರ: ಗಾಣಗಾಪೂರ ಅಭಿವೃದ್ಧಿಗೆ 50 ಕೋಟಿ, ಸಚಿವ ನಿರಾಣಿ

50 Crore for the Development of Ganagapura Says Minister Murugesh Nirani grg

50 Crore for the Development of Ganagapura Says Minister Murugesh Nirani grg
Author
Bengaluru, First Published Jul 16, 2022, 12:40 PM IST

ಚವಡಾಪುರ(ಜು.16):  ಕಳೆದ ತಿಂಗಳಲ್ಲಿ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರ ಕ್ಷೇತ್ರಕ್ಕೆ ಕೇಂದ್ರ ಸಚಿವ ನಿತೀನ್‌ ಗಡ್ಕರಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಗಾಣಗಾಪೂರ ಸುಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ ಧಾರ್ಮಿಕ ಸ್ಥಳವನ್ನು ಜಾಗತಿಕವಾಗಿ ಪ್ರಸಿದ್ಧಿ ಪಡಿಸುವ ನಿಟ್ಟಿನಲ್ಲಿ ಸುಮಾರು 50 ಕೋಟಿ ವೆಚ್ಚದಲ್ಲಿ ನೀಲನಕ್ಷೆ ಸಿದ್ದಪಡಿಸಲು ಸೂಚಿಸಿದ್ದಾರೆ ಎಂದು ಬೃಹತ್‌ ಕೈಗಾರಿಕೆ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಅವರು ಅಫಜಲ್ಪುರ ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸುಕ್ಷೇತ್ರ ದೇವಲ ಗಾಣಗಾಪೂರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕು, ಈ ಧಾರ್ಮಿಕ ಕ್ಷೇತ್ರಕ್ಕೆ ಬಹಳಷ್ಟುಐತಿಹಾಸಿಕ ಹಿನ್ನೆಲೆ ಇದೆ. ಅಲ್ಲದೆ ದೇಶದ ನಾನಾ ಮೂಲೆಗಳಿಂದ ಈ ದೇವಸ್ಥಾನಕ್ಕೆ ಭಕ್ತರು, ಯಾತ್ರಿಕರು ಬಂದು ಹೋಗುತ್ತಾರೆ. ಹೀಗಾಗಿ ಇಲ್ಲಿ ಬೇಕಾದಷ್ಟುಸೌಲಭ್ಯಗಳ ಕೊರತೆ ಇರುವುದನ್ನು ಕೇಂದ್ರ ಸಚಿವ ನಿತೀನ್‌ ಗಡ್ಕರಿ ಅವರು ಗಮನಿಸಿದ್ದಾರೆ ಹೀಗಾಗಿ ಈ ಕ್ಷೇತ್ರದ ಅಭಿವೃದ್ಧಿಗಾಗಿ 40 ರಿಂದ 50 ಕೋಟಿಯ ಯೋಜನೆ ರೂಪಿಸಲು ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಗಾಣಗಾಪೂರದಲ್ಲಿ ಏನೆಲ್ಲಾ ಆಗಬೇಕಾಗಿದೆ ಎನ್ನುವುದರ ಬಗ್ಗೆ ನೀಲನಕ್ಷೆ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಅಲ್ಲದೆ ರಾಜ್ಯ ಸರ್ಕಾರವು ಕೂಡ ಗಾಣಗಾಪೂರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ತಿಳಿಸಿದರು.

ಗಾಣಗಾಪೂರ ದತ್ತಾತ್ರೆಯನಿಗೆ ಪೂಜೆ ನೆರವೇರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ದಂಪತಿ

ಸಚಿವರ ವಿವಾದಾತ್ಮಕ ಹೇಳಿಕೆ:

ಸಭೆಯಲ್ಲಿ ಸಚಿವ ನಿರಾಣಿ ಮಾತನಾಡುವ ಸಂದರ್ಭದಲ್ಲಿ ಇದು ಅಫಜಲ್ಪುರವೋ ಲಕ್ಷಮಿಪುರವೋ? ಏನಂತ ಕರೀತೀರಿ ಎನ್ನುತ್ತಿದ್ದಂತೆ ಬಿಜೆಪಿ ಜಿಲ್ಲಾ ಮುಖಂಡ ಅಶೋಕ ಬಗಲಿ ಅವರು ಹೌದು ಅಫಜಲ್ಪುರ ಅಲ್ಲ ಇದು ಲಕ್ಷ್ಮೀಪುರ ಎಂದು ಕೂಗಿದರು. ಇದರಿಂದ ಕುಪಿತರಾದ ಮುಖಂಡರಾದ ಅರುಣಕುಮಾರ ಪಾಟೀಲ್‌, ಪಪ್ಪು ಪಟೇಲ್‌, ಮತೀನ್‌ ಪಟೇಲ್‌ ಅವರು ಆಕ್ಷೇಪಿಸಿ ದಯವಿಟ್ಟು ಸಚಿವರಾಗಿ ಇಂತಹ ಹೇಳಿಕೆಗಳನ್ನು ನೀಡಬೇಡಿ. ಇದು ಯಾವ ಲಕ್ಷ್ಮೀಪುರವಲ್ಲ, ಹೆಸರು ಬದಲಿಸೋದೆ ನಿಮ್ಮ ಸರ್ಕಾರದ ಸಾಧನೆಯಾಗಿದೆ. ಇದನ್ನು ಬಿಟ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಕಿಡಿ ಕಾರಿದರು. ಅಲ್ಲದೆ ಬಿಜೆಪಿ ಮುಖಂಡ ಅಶೋಕ ಬಗಲಿ ಅವರನ್ನು ಪಪ್ಪು ಪಟೇಲ್‌ ಅವರು ತರಾಟೆಗೆ ತೆಗೆದುಕೊಂಡು ನೀನು ಈ ತಾಲೂಕಿನವಲ್ಲ ಹೀಗಾಗಿ ಇಲ್ಲಿನ ಇತಿಹಾಸ ನಿನಗೇನು ಗೊತ್ತಿದೆ? ನಿನ್ನ ಪಾರ್ಟಿಯ ಅಜೆಂಡಾ ನಮ್ಮ ಸರ್ವಧರ್ಮ ಸಮಭಾವದ ಅಫಜಲ್ಪುರದವರ ಮೇಲೆ ಹೇರಲು ಬರಬೇಡಿ ಎಂದು ಚಾಟಿ ಬೀಸಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ವೈ ಪಾಟೀಲ್‌, ಮುಖಂಡರಾದ ಶಿವಕುಮಾರ ನಾಟಿಕಾರ, ಜೆ.ಎಂ ಕೊರಬು, ಜಿಲ್ಲಾಧಿಕಾರಿ ಯಶವಂತ ಗುರುಕರ್‌, ತಹಸೀಲ್ದಾರ ಸಂಜೀವಕುಮಾರ ದಾಸರ್‌ ಸೇರಿದಂತೆ ಅನೇಕರು ಇದ್ದರು.

Follow Us:
Download App:
  • android
  • ios