Asianet Suvarna News Asianet Suvarna News

8 ತಿಂಗಳಲ್ಲಿ 46,000 ಮನೆ ನಿರ್ಮಾಣ: ಸಚಿವ ಸೋಮಣ್ಣ

*   ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗ್ಳೂರು ವಸತಿ ಯೋಜನೆ
*   ಸ್ಥಳೀಯರಿಗೆ ಶೇ.50ರಷ್ಟು ಕಾಯ್ದಿರಿಸಿ ಉಳಿದ ಮನೆಗಳನ್ನು ಕೋರಿಕೆ ಮೇರೆಗೆ ಹಂಚಿಕೆ 
*   ಹಿಂದಿನ ಸರ್ಕಾರಗಳಿಂದಾಗಿ ಸಮಸ್ಯೆ

46000 Home Construction in 8 Months Says Minister V Somanna grg
Author
Bengaluru, First Published Sep 29, 2021, 8:05 AM IST

ಬೆಂಗಳೂರು(ಸೆ. 29): ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ(Housing Plan) ಮುಂದಿನ ಎಂಟು ತಿಂಗಳಲ್ಲಿ 46,499 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗುವುದು ಎಂದು ಸಚಿವ ವಿ. ಸೋಮಣ್ಣ(V Somanna) ಭರವಸೆ ನೀಡಿದ್ದಾರೆ.

ಅಲ್ಲದೆ, 1 ಲಕ್ಷ ಮನೆಗಳ ಹಂಚಿಕೆಯ ಯೋಜನೆಯಲ್ಲಿ ಈಗಾಗಲೇ 46,499 ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಈವರೆಗೆ 20,156 ಮಂದಿ ಮಾತ್ರ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಸೆ.21ರ ಬದಲಿಗೆ ಅ.21ರ ವರೆಗೆ ಅರ್ಜಿ ಸಲ್ಲಿಕೆ ಕಾಲಾವಕಾಶ ವಿಸ್ತರಿಸಲಾಗಿದೆ. ಹೀಗಾಗಿ ನಗರದ ಎಂಟು ವಿಧಾನಸಭಾ ಕ್ಷೇತ್ರದ ಅರ್ಹರು ಅರ್ಜಿ ಸಲ್ಲಿಸಬಹುದು ಎಂದು ಕರೆ ನೀಡಿದ್ದಾರೆ. ಮಂಗಳವಾರ ಬೆಂಗಳೂರಿನ ಆಯ್ದ ಸಚಿವರು ಹಾಗೂ ಶಾಸಕರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಮುಖ್ಯಮಂತ್ರಿಗಳ 1 ಲಕ್ಷ ವಸತಿ ಯೋಜನೆಯಡಿ ಸ್ವಾತಂತ್ರ್ಯದ ಅಮೃತೋತ್ಸವ ಸಂದರ್ಭದಲ್ಲಿ 10,000 ಮನೆ ಹಂಚಿಕೆ ಭರವಸೆ ನೀಡಲಾಗಿತ್ತು. ಸರ್ಕಾರ ಬದಲಾವಣೆ ಇತರೆ ಕಾರಣಗಳಿಂದ ಸಾಧ್ಯವಾಗಿಲ್ಲ. ಸದ್ಯ 316 ಎಕರೆಯಲ್ಲಿ 46,499 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.

ನಗರ ಪ್ರದೇಶದ ಎಲ್ಲ ಬಡವರಿಗೆ ಸೂರು ಕಲ್ಪಿಸುವೆ: ಸಚಿವ ಸೋಮಣ್ಣ

ಸಿಎಂ ಜೊತೆ ಚರ್ಚಿಸಿ ದರ ಅಂತಿಮ:

ಐದಾರು ಕೋಟಿ ರು. ಬೆಲೆ ಬಾಳುವ, ಹರಾಜಿಗೆ ಗುರುತಿಸಲಾಗಿದ್ದ ಜಾಗಗಳಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮೂಲ ಸೌಕರ್ಯ ಕಲ್ಪಿಸಲು ಮುಖ್ಯಮಂತ್ರಿಗಳು 500 ಕೋಟಿ ರು. ಒದಗಿಸಿದ್ದಾರೆ. ಹಿಂದೆ 6.50 ರಿಂದ 7 ಲಕ್ಷ ರು. ವೆಚ್ಚದಲ್ಲಿ ಹಂಚಿಕೆಗೆ ಚಿಂತಿಸಲಾಗಿತ್ತು. ಆದರೆ, ಹೆಚ್ಚುವರಿ ಮಹಡಿಗೆ ವೆಚ್ಚ ಏರಿಕೆಯಾಗುವುದರಿಂದ ಅಂತಿಮವಾಗಿ 9 ಲಕ್ಷ ರು. ನಿಗದಿಪಡಿಸಲು ಚಿಂತಿಸಲಾಗಿದ್ದು, ಮುಖ್ಯಮಂತ್ರಿಯೊಂದಿಗೆ ಜತೆಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು. ಫಲಾನುಭವಿಗಳು ವಾಸ್ತವ್ಯ ಹೂಡಿದ ಬಳಿಕ ಸಾಲಕ್ಕೆ ಬಡ್ಡಿ ಪಾವತಿಸುವಂತೆ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗಿದೆ ಎಂದು ಹೇಳಿದರು.

ಸ್ಥಳೀಯರಿಗೆ ಶೇ.50ರಷ್ಟು ಮೀಸಲು:

ಪ್ರತಿ ತಿಂಗಳು ನಗರದ ಸಚಿವರು, ಶಾಸಕರೊಂದಿಗೆ ಪರಿಶೀಲನೆ ನಡೆಸಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು. ಕ್ಷೇತ್ರದ ಸ್ಥಳೀಯರಿಗೆ ಶೇ.50ರಷ್ಟು ಕಾಯ್ದಿರಿಸಿ ಉಳಿದ ಮನೆಗಳನ್ನು ಕೋರಿಕೆ ಮೇರೆಗೆ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಅವ್ಯವಹಾರ ನಡೆದಿಲ್ಲ:

ಸುಮಾರು 200 ಕೋಟಿ ರು. ಮೊತ್ತದ ಟೆಂಡರ್‌ ಪ್ರಕ್ರಿಯೆಯಲ್ಲಿ ಏನಾಗಿದೆ ಎಂದು ಪ್ರಶ್ನಿಸಿರುವ ಕೇಂದ್ರ ಸರ್ಕಾರ ಪರಿಶೀಲಿಸುವಂತೆ ಸೂಚಿಸಿದೆಯೇ ಹೊರತು ಯಾವುದೇ ಅವ್ಯವಹಾರ ನಡೆದಿದೆ ಎಂದಿಲ್ಲ. ಕೆಲವರು ನನ್ನನ್ನೇ ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಕುತಂತ್ರ ನಡೆಸಿದ್ದಾರೆ. ಸಂಪುಟ ವಿಸ್ತರಣೆ ಸಂದರ್ಭದಲ್ಲೇ ಈ ಬಗ್ಗೆ ಗದ್ದಲ ಎಬ್ಬಿಸಿದರು. ಅದನ್ನು ನಮ್ಮವರು ಮಾಡಲಿ, ಬೇರೆಯವರು ಮಾಡಲಿ. ಒಳ್ಳೆಯ ಕೆಲಸ ಮಾಡುವಾಗ ಶತ್ರುಗಳು ಹೆಚ್ಚು ಎಂದು ಮಾರ್ಮಿಕವಾಗಿ ಹೇಳಿದರು. ಸಚಿವರಾದ ಎಸ್‌.ಟಿ. ಸೋಮಶೇಖರ್‌, ಕೆ.ಗೋಪಾಲಯ್ಯ, ಶಾಸಕ ರವಿಸುಬ್ರಹ್ಮಣ್ಯ ಇತರರು ಹಾಜರಿದ್ದರು.

ಹಿಂದಿನ ಸರ್ಕಾರಗಳಿಂದಾಗಿ ಸಮಸ್ಯೆ

ಸಮ್ಮಿಶ್ರ ಸರಕಾರದ ಅವಧಿಯಲ್ಲಿ 29,000 ಕೋಟಿ ರು. ವೆಚ್ಚದಲ್ಲಿ 22 ಲಕ್ಷ ಮನೆ ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಆದರೆ, ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿಯವರು 3,000 ಕೋಟಿ ರು. ಮಾತ್ರ ಮೀಸಲಿಟ್ಟರು. ಇದರು ವಸತಿ ಹಂಚಿಕೆಯಲ್ಲಿ ಸಮಸ್ಯೆ ಸೃಷ್ಟಿಯಾಗಲು ಕಾರಣವಾಯಿತು ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮನೆ ನಿರ್ಮಾಣ ಗೊಂದಲ, ಸಮಸ್ಯೆಗಳನ್ನೆಲ್ಲಾ ಬಗೆಹರಿಸಲಾಗಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರಿನಲ್ಲಿ (Bengaluru) 3,800 ಕೋಟಿ ರು. ವೆಚ್ಚದಲ್ಲಿ 2.53 ಲಕ್ಷ ಮನೆ ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ ವತಿಯಿಂದ 35,999 ಫಲಾನುಭವಿಗಳಿಗೆ ಸದ್ಯದಲ್ಲೇ ಹಕ್ಕುಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.
 

Follow Us:
Download App:
  • android
  • ios