ವಾಹನ ತರಬೇತಿಗಾಗಿ ಸರ್ಕಾರದಿಂದ, ಸಾರಿಗೆ ಇಲಾಖೆಯಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಮೋಟಾರು ವಾಹನ ಚಾಲನಾ ತರಬೇತಿ ಶಾಲೆಯಲ್ಲಿಯೇ ಮಾತ್ರ ತರಬೇತಿಗಾಗಿ ಕಳುಹಿಸಬೇಕು ಎಂದ ಬೀದರ್‌ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಸವರಾಜ ಶೀರೋಳಕರ 

ಬೀದರ್‌(ಜು.14): ಪಾಲಕರು ತಮ್ಮ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಮ್ಮ ವಾಹನ (ಬೈಕ್‌ಗಳನ್ನು) ಚಾಲನೆಗಾಗಿ ನೀಡಿದರೆ ಅಂತಹ ಬಾಲಕರ ತಂದೆ-ತಾಯಿಗೆ 25 ಸಾವಿರ ರು. ದಂಡ ಹಾಗೂ ತಪ್ಪಿದಲ್ಲಿ 3 ವರ್ಷ ಜೈಲು ಶಿಕ್ಷೆಯಾಗುವುದು ಎಂದು ಬೀದರ್‌ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಸವರಾಜ ಶೀರೋಳಕರ ಎಚ್ಚರಿಕೆ ನೀಡಿದರು.

ತಾಲೂಕಿನ ಕಪಲಾಪೂರ (ಎ) ಗ್ರಾಮದ ಡಾ. ಎಪಿಜೆ ಅಬ್ದುಲ್‌ ಕಲಾಂ ವಸತಿ ಶಾಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ, ಜನವಾಡಾ ಪೊಲೀಸ್‌ ಠಾಣೆ ಹಾಗೂ ಭಾಗ್ಯವಂತಿ ಮೋಟಾರ್‌ ವಾಹನ ತರಬೇತಿ ಶಾಲೆಯ ಆಶ್ರಯದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸುಳ್ಳಿನ ಬಜಾರಲ್ಲಿ ಖಂಡ್ರೆ ದೋಖಾ ಅಂಗಡಿ ತೆಗೆದಾರ: ಕೇಂದ್ರ ಸಚಿವ ಭಗವಂತ ಖೂಬಾ

ವಾಹನ ತರಬೇತಿಗಾಗಿ ಸರ್ಕಾರದಿಂದ, ಸಾರಿಗೆ ಇಲಾಖೆಯಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಮೋಟಾರು ವಾಹನ ಚಾಲನಾ ತರಬೇತಿ ಶಾಲೆಯಲ್ಲಿಯೇ ಮಾತ್ರ ತರಬೇತಿಗಾಗಿ ಕಳುಹಿಸಬೇಕು ಎಂದರು.

ಸಿಪಿಐ ಮಲ್ಲಿಕಾರ್ಜುನ ಯಾತನೂರ ಮಾತನಾಡಿ, ಪ್ರತಿಯೊರ್ವ ವಿದ್ಯಾರ್ಥಿ 18 ವರ್ಷ ಮೇಲ್ಪಟ್ಟನಂತರ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಕಲಿಕೆ ಚಾಲನಾ ಪತ್ರ (ಡಿಎಲ್‌) ಪಡೆದು ತಮ್ಮ ವಾಹನಕ್ಕೆ ವಿಮೆ, ಮಾಲಿನ್ಯ ಪ್ರಮಾಣ ಪತ್ರ ಇದೆಯೇ ಎಂಬುವುದನ್ನು ಪರಿಶೀಲನೆ ಮಾಡಿಕೊಂಡಿರಬೇಕು ಎಂದರು. ಪಿಎಸ್‌ಐ ಶಿವರಾಜ ಪಾಟೀಲ್‌ ಮಾತನಾಡಿದರು.

ಮೋಟಾರು ವಾಹನ ನಿರೀಕ್ಷಕ ಮೊಹ್ಮದ ಶರೀಫ್‌ ಶೇಕ್‌, ವೀರೇಂದ್ರ ಎಂ., ಕಾಲೇಜಿನ ಪ್ರಾಂಶುಪಾಲರಾದ ವಿಜಯಲಕ್ಷ್ಮಿ, ಭಾಗ್ಯವಂತಿ ಮೋಟಾರು ವಾಹನ ತರಬೇತಿ ಶಾಲೆಯ ಪ್ರಾಚಾರ್ಯರಾದ ಶಿವರಾಜ ಜಮಾದಾರ ಖಾಜಾಪೂರ, ಪೊಲೀಸ್‌ ಸಿಬ್ಬಂದಿ ಶಾಂತಕುಮಾರ ಕೌಠಾ ಹಾಗೂ ವಸತಿ ಶಾಲೆಯ ಮಹಾವೀರ, ಶ್ರೀಕಾಂತ, ಅಜಯಕುಮಾರ ಹಾಗೂ ತೌಸಿಫ್‌ ಮಿಯ್ಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.