Karnataka Assembly Election : 2023ಕ್ಕೆ ನನ್ನ ಸ್ಪರ್ಧೆ ಖಚಿತ ಎಂದ ಜೆಡಿಎಸ್ ಮುಖಂಡ
- 2023ಕ್ಕೆ ನಾಗಮಂಗಲದಿಂದ ನನ್ನ ಸ್ಪರ್ಧೆ ಖಚಿತ
- ಜನರ ಹಿತ ಕಾಯಲು ನನ್ನ ಸ್ಪರ್ಧೆ ಅನಿವಾರ್ಯ: ಶಿವರಾಮೇಗೌಡ
ನಾಗಮಂಗಲ (ಡಿ.20): 2023ರ ವಿಧಾನಸಭಾ ಚುನಾವಣೆಯಲ್ಲಿ (Assembly Election) ನಾಗಮಂಗಲ ಕ್ಷೇತ್ರದಿಂದನನ್ನ ಸ್ಪರ್ಧೆ ಖಚಿತ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (Shivaramegowda) ಖಡಕ್ಕಾಗಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಒಮ್ಮೆ ಶಾಸಕನಾಗಿ, ಒಂದು ಬಾರಿ ಸಂಸದನಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದೇನೆ. ತಾಲೂಕಿನಲ್ಲಿ ಜೆಡಿಎಸ್ (JDS) ಕಾರ್ಯಕರ್ತರ ಹಿತ ಕಾಯುವ ದೃಷ್ಠಿಯಿಂದ ಚುನಾವಣೆಗೆ (Election) ಸ್ಪರ್ಧಿಸಲು ಆಕಾಂಕ್ಷಿತನಾಗಿದ್ದೇನೆ. ಜೆಡಿಎಸ್ (JDS) ಪಕ್ಷದಿಂದಲೇ ಕಣಕ್ಕಿಳಿಯತ್ತೇನೆ. ತಾಲೂಕಿನ ಜನರ ನಾಡಿ ಮಿಡಿತ ನನಗೆ ಚೆನ್ನಾಗಿ ಗೊತ್ತಿದೆ. ತಾಲೂಕಿನ ಜನತೆಯ ಹಿತ ಕಾಯಲು ನನ್ನ ಸ್ಪರ್ಧೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಮುಂದಿನ ಚುನಾವಣೆಯಲ್ಲಿ (Election) ನಾಗಮಂಗಲ ಕ್ಷೇತ್ರದಿಂದ ನಾನು ಕಣಕ್ಕಿಳಿಯುವ ವಿಷಯವನ್ನು ಈಗಾಗಲೇ ನಮ್ಮ ವರಿಷ್ಠರಾದ ದೇವೇಗೌಡರು (Devegowda) ಮತ್ತು ಕುಮಾರಣ್ಣನವರ ಗಮನಕ್ಕೆ ತಂದಿದ್ದೇನೆ. ಅವರು ನನಗೆ ಟಿಕೆಟ್ (Ticket) ನೀಡುವರೆಂಬ ಸಂಪೂರ್ಣ ವಿಶ್ವಾಸ ನನಗಿದೆ. ಮುಂದಿನ ಸಂಕ್ರಾಂತಿ ಬಳಿಕ ಕ್ಷೇತ್ರದಲ್ಲಿ ಪ್ರವಾಸ ಆರಂಭಿಸುವುದಾಗಿ ಹೇಳಿದರು.
ಜ್ವಲಂತ ಸಮಸ್ಯೆಗಳಿಗೆ ಸಿಗದ ಪರಿಹಾರ: ನಾಗಮಂಗಲ ಕ್ಷೇತ್ರದಲ್ಲಿ ಜನಸಾಮಾನ್ಯರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾಲೂಕು ಕಚೇರಿ, ವಿದ್ಯುತ್ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಣ ಕೊಡದೆ ಜನಸಾಮಾನ್ಯರ ಕೆಲಸಗಳು ಯಾವುದೂ ನಡೆಯುತ್ತಿಲ್ಲ. ಪಿಡಿಒಗಳಿಂದಲೂ (PDO) ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಗುತ್ತಿಗೆದಾರರ ಕೆಲಸಗಳು ಮಾತ್ರ ಸರಾಗವಾಗಿ ನಡೆಯುತ್ತಿವೆ ಎಂದರು.
ಕೆ.ಸುರೇಶ್ಗೌಡರು ಪಕ್ಷದ ಶಾಸಕರಾಗಿದ್ದರೂ ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿಲ್ಲ. ಅವರೇ ಗುತ್ತಿಗೆದಾರರಾಗಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ನಮ್ಮ ಅಭಿಪ್ರಾಯ-ಸಲಹೆ ಸೂಚನೆಗಳು ಅವರಿಗೆ ಬೇಡವಾಗಿವೆ ಎಂದು ನುಡಿದರು.
ಷಡ್ಯಂತ್ರದ ಸೋಲು: ವಿಧಾನಪರಿಷತ್ ಚುನಾವಣೆಯಲ್ಲಿ (MLC Election) ಎನ್.ಅಪ್ಪಾಜಿಗೌಡರ ಸೋಲು ಜೆಡಿಎಸ್ (JDS) ಸೋಲಲ್ಲ. ಜೆಡಿಎಸ್ (JDS) ಬೆಂಬಲಿತ ಮತದಾರರು 1900 ಮಾತ್ರ ಇದ್ದರು. ಅಷ್ಟೂ ಮತಗಳನ್ನು ನಾವು ಪಡೆದುಕೊಂಡಿದ್ದೇವೆ. ಜೆಡಿಎಸ್ (JDS) ಅಭ್ಯರ್ಥಿಯನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟು ಕಾಂಗ್ರೆಸ್ (Congress), ಬಿಜೆಪಿ (BJP), ರೈತ ಸಂಘ ಮಾಡಿಕೊಂಡ ಒಳ ಒಪ್ಪಂದದ ಷಡ್ಯಂತ್ರದಿಂದ ಅಪ್ಪಾಜಿ ಗೌಡರಿಗೆ ಸೋಲಾಯಿತು ಎಂದು ವಿಶ್ಲೇಷಿಸಿದರು.
ಜೆಡಿಎಸ್ (JDS) ಈಗಲೂ ಬಲಿಷ್ಠ: ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮತದಾರರು ಜೆಡಿಎಸ್ (JDS) ಬಿಟ್ಟು ಎಲ್ಲೂ ಹೋಗಲ್ಲ. ಕಾಂಗ್ರೆಸ್ ಗೆಲ್ಲಿಸಿದ್ದೇವೆ, ಇನ್ನೇನು ಜೆಡಿಎಸ್ ಕಥೆ ಮುಗಿದೇ ಹೋಯಿತು ಎಂದು ವಿರೋಧಿಗಳು ಬೀಗಬೇಕಾಗಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಈಗಲೂ ಬಲಿಷ್ಠವಾಗಿದ್ದು, ಮುಂಬರುವು ಜಿಪಂ, ತಾಪಂ ಚುನಾವಣೆಯಲ್ಲಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಅಧಿಕಾರ ಹಿಡಿಯಲಿದ್ದೇವೆ. ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಗಂಧ-ಗಾಳಿ ಗೊತ್ತಿಲ್ಲ: ಎಂಎಲ್ಸಿ ದಿನೇಶ್ ಗೂಳಿಗೌಡ ನನ್ನ ಸ್ನೇಹಿತರಾದರೂ ಅವರಿಗೆ ರಾಜಕೀಯದ ಗಂಧ-ಗಾಳಿ ಗೊತ್ತಿಲ್ಲ, ರಾಜಕೀಯದ ಅನುಭವ ಮೊದಲೇ ಇರಲಿಲ್ಲ. ಒಬ್ಬ ಸಚಿವರ ಹತ್ತಿರ ಆಪ್ತ ಸಹಾಯಕರಾಗಿದ್ದ ಅಧಿಕಾರಿಯನ್ನು ಕರೆದುಕೊಂಡು ಬಂದು ಒಬ್ಬ ರಾಜಕೀಯ ಮುತ್ಸದ್ಧಿ ಅಪ್ಪಾಜಿಗೌಡರನ್ನು ಸೋಲಿಸಿದ್ದಾರೆ. ಹಣ ಬೆಂಬಲದಿಂದ ಕಾಂಗ್ರೆಸ್ ಗೆದ್ದಿದೆಯೇ ಹೊರತು ಜನಬೆಂಬಲದಿಂದ ಅಲ್ಲ ಎಂದು ಟೀಕಿಸಿದರು.