Asianet Suvarna News Asianet Suvarna News

ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರತಿ ದಿನ 10 ಲಕ್ಷದಷ್ಟು ನಷ್ಟ!

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಗಿ ಹಲವು ದಿನ ಕಳೆದಿದ್ದರೂ ಕೊಡಗು ಜಿಲ್ಲೆಯಲ್ಲಿ ಪ್ರತಿ ದಿನ ಕೆಎಸ್‌ಆರ್‌ಟಿಸಿ 10 ಲಕ್ಷ ರು. ನಷ್ಟವನ್ನು ಎದುರಿಸುತ್ತಿದೆ. ಕೊರೋನಾ ಪರಿಣಾಮದಿಂದಾಗಿ ಪ್ರಯಾಣಿಕರ ಕೊರತೆಯುಂಟಾಗಿದ್ದು, ದಿನಕ್ಕೆ 12 ಲಕ್ಷ ರು. ಪಡೆಯುತ್ತಿದ್ದ ಪುತ್ತೂರು ವಿಭಾಗಕ್ಕೆ ಒಳಪಟ್ಟಿರುವ ಮಡಿಕೇರಿ ಘಟಕ ಈಗ ರು.2 ಲಕ್ಷ ಆದಾಯ ಮಾತ್ರ ಪಡೆಯುವಂತಾಗಿದೆ.

10 lakh rupees loss to koadgu ksrtc
Author
Bangalore, First Published Jun 2, 2020, 10:02 AM IST

ಮಡಿಕೇರಿ(ಜೂ 02): ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭವಾಗಿ ಹಲವು ದಿನ ಕಳೆದಿದ್ದರೂ ಕೊಡಗು ಜಿಲ್ಲೆಯಲ್ಲಿ ಪ್ರತಿ ದಿನ ಕೆಎಸ್‌ಆರ್‌ಟಿಸಿ 10 ಲಕ್ಷ ರು. ನಷ್ಟವನ್ನು ಎದುರಿಸುತ್ತಿದೆ. ಕೊರೋನಾ ಪರಿಣಾಮದಿಂದಾಗಿ ಪ್ರಯಾಣಿಕರ ಕೊರತೆಯುಂಟಾಗಿದ್ದು, ದಿನಕ್ಕೆ 12 ಲಕ್ಷ ರು. ಪಡೆಯುತ್ತಿದ್ದ ಪುತ್ತೂರು ವಿಭಾಗಕ್ಕೆ ಒಳಪಟ್ಟಿರುವ ಮಡಿಕೇರಿ ಘಟಕ ಈಗ ರು.2 ಲಕ್ಷ ಆದಾಯ ಮಾತ್ರ ಪಡೆಯುವಂತಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಡಿಕೇರಿ, ಕುಶಾಲನಗರ, ವಿರಾಜಪೇಟೆ ಮತ್ತಿತರ ಡಿಪೋಗಳಿಂದ 115 ಬಸ್‌ ರೂಟ್‌ಗಳಿದ್ದು, ದಿನಕ್ಕೆ 30 ರೂಟ್‌ಗಳಿಗೆ ಮಾತ್ರ ಬಸ್‌ಗಳು ತೆರಳುತ್ತಿದೆ. ಇದರಿಂದ ಪ್ರಸ್ತುತ ಜಿಲ್ಲೆಯಲ್ಲಿ ಕೇವಲ 2 ಲಕ್ಷ ಮಾತ್ರ ಆದಾಯ ಸಂಗ್ರಹವಾಗುತ್ತಿದೆ. ಸಂಚಾರವಿಲ್ಲದೆ ಹಲವು ಬಸ್‌ಗಳು ಡಿಪೋದಲ್ಲೇ ಉಳಿಯುವಂತಾಗಿದೆ.

ಟೆಲಿ ಮೆಡಿಸಿನ್‌ ಮತ್ತಷ್ಟುಜನಪ್ರಿಯವಾಗಲಿ: ಮೋದಿ

ಮಾ.23ರಿಂದ ಲಾಕ್‌ಡೌನ್‌ ಆರಂಭವಾಗಿದ್ದು, ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕೊಡಗು ಜಿಲ್ಲೆ ಗ್ರೀನ್‌ ಝೋನ್‌ಗೆ ಬಂದ ಬಳಿಕ ಬಸ್‌ ಸಂಚಾರಕ್ಕೆ ಅವಕಾಶ ದೊರಕಿತ್ತು. ಅದರಂತೆ ಮೇ 6ರಿಂದ ಬಸ್‌ ಸಂಚಾರ ಜಿಲ್ಲೆಯಲ್ಲಿ ಆರಂಭಿಸಿತು. ಆರಂಭದ ದಿನಗಳಲ್ಲಿ 10 ರೂಟ್‌ಗಳು ಮಾತ್ರ ತೆರಳುತ್ತಿತ್ತು. ಇದೀಗ 30ಕ್ಕೂ ಹೆಚ್ಚು ರೂಟ್‌ಗಳಲ್ಲಿ ಬಸ್‌ಗಳು ಸಂಚರಿಸುತ್ತಿದೆಯಾದರೂ ಪ್ರಯಾಣಿಕರು ಬೆರಳೆಣಿಕೆಯ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ ಮಡಿಕೇರಿಯಿಂದ ಬೆಂಗಳೂರಿಗೆ 9 ಸಾರಿಗೆ, 2 ರಾಜಹಂಸ, ಸೋಮವಾರಪೇಟೆ, ವಿರಾಜಪೇಟೆಯಿಂದ ಬೆಂಗಳೂರಿಗೆ ತಲಾ ಒಂದು ಬಸ್‌ ಸಂಚಾರ ಮಾಡಿದೆ. ಮಡಿಕೇರಿಯಿಂದ ಹಾಸನಕ್ಕೆ 2, ಮಂಗಳೂರಿಗೆ 3 ಬಸ್‌ಗಳು ಸಂಚರಿಸಿವೆ. ಜಿಲ್ಲೆಯಲ್ಲಿ ಒಟ್ಟು ಗ್ರಾಮೀಣ ಭಾಗದ 28 ಟ್ರಿಪ್‌ಗಳು ಸಂಚಾರವಾಗಿದೆ.

ಗಾಂಜಾ, ಇಸ್ಪೀಟ್‌ ಜೂಜಾಟ ತಡೆಗಟ್ಟುವಲ್ಲಿ ಪೊಲೀಸ್‌ ಇಲಾಖೆ ವಿಫಲ: ಆರೋಪ

ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸುವವರಿಗೆ ಥರ್ಮಲ್‌ ಸ್ಕಾ್ಯನಿಂಗ್‌ ಮಾಡಿದ ಬಳಿಕವೇ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಂದು ಬಸ್‌ನಲ್ಲಿ 30 ಮಂದಿ ಪ್ರಯಾಣಿಸಲು ಮಾತ್ರ ಅವಕಾಶ ನೀಡಲಾಗಿದೆ. ಮೈಸೂರು, ಬೆಂಗಳೂರಿಗೆ ತೆರಳುವ ಬಸ್‌ಗಳಲ್ಲಿ ಅರ್ಧದಷ್ಟುಮಂದಿ ಪ್ರಯಾಣಿಕರು ಆಗುತ್ತಿದ್ದಂತೆ ಬಸ್‌ ಸಂಚಾರ ಆರಂಭಿಸುತ್ತದೆ. ಲಾಕ್‌ಡೌನ್‌ ಸಡಿಲಗೊಂಡಿದ್ದು, ಬಸ್‌ ಸಂಚಾರ ಪ್ರಾರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಆದಾಯದ ಸಂಗ್ರಹವೂ ಚೇತರಿಕೆ ಕಾಣಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ ಕೆಎಸ್‌ಆರ್‌ಟಿಸಿ ಅಧಿ​ಕಾರಿಗಳು.

ಖಾಸಗಿ ಬಸ್‌ ಸಂಚಾರ ಆರಂಭ!

ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭವಾಗಿದೆ. ಸೋಮವಾರ ಅಶೋಕ ಹಾಗೂ ಜಗದೀಶ್ವರ ಎರಡು ಬಸ್‌ಗಳು ಮಾತ್ರ ಸಂಚಾರ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಕೆಲವು ಖಾಸಗಿ ಬಸ್‌ಗಳು ಸಂಚಾರ ಆರಂಭಿಸುವ ಸಾಧ್ಯತೆಯಿದೆ. ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಅರ್ಧದಷ್ಟುಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಬೇಕಾಗಿದೆ. ಇದರಿಂದ ನಷ್ಟಎದುರಾಗುವ ಭೀತಿಯಿಂದ ಖಾಸಗಿ ಬಸ್‌ ಸಂಚಾರ ಆರಂಭಿಸಲು ಕೆಲವು ಮಾಲೀಕರು ಮುಂದಾಗುತ್ತಿಲ್ಲ. ಕೊಡಗಿನಲ್ಲಿ ಒಟ್ಟು 149 ಖಾಸಗಿ ಬಸ್‌ಗಳಿದೆ. ಕೆಲವರು ಮಳೆಗಾಲ ಮುಗಿದ ನಂತರ ಬಸ್‌ ಆರಂಭಿಸುವ ಚಿಂತನೆ ಮಾಡಿದ್ದಾರೆಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್‌ ಜೋಯಪ್ಪ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.

 

ಕೊಡಗು ಜಿಲ್ಲೆಯಲ್ಲಿ 115 ರೂಟ್‌ಗಳಿದ್ದು, 30 ರೂಟ್‌ಗಳಲ್ಲಿ ಮಾತ್ರ ಬಸ್‌ಗಳು ಸಂಚರಿಸುತ್ತಿವೆ. ಪ್ರಯಾಣಿಕರ ಪ್ರತಿಕ್ರಿಯೆಯನ್ನು ನೋಡಿಕೊಂಡು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಸ್‌ಗಳನ್ನು ಬಿಡಲಾಗುತ್ತಿದೆ. ಪ್ರಯಾಣಿಕರ ಕೊರತೆಯಿಂದಾಗಿ ದಿನಕ್ಕೆ ರು.2 ಲಕ್ಷ ಮಾತ್ರ ಹಣ ಸಂಗ್ರಹವಾಗುತ್ತಿದ್ದು, ರು.10 ಲಕ್ಷ ನಷ್ಟವನ್ನು ಉಂಟಾಗುತ್ತಿದೆ ಎಂದು ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ ಎರಡು ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಕೆಲವು ಬಸ್‌ಗಳು ಆರಂಭವಾಗಬಹುದು. ಬಸ್‌ ಸಂಚಾರ ಆರಂಭಿಸಿದರೂ ಆದಾಯ ಸಿಗುವುದು ಕಷ್ಟ. ಆದ್ದರಿಂದ ಈ ಬಗ್ಗೆ ಮಂಗಳವಾರ ಸಭೆ ನಡೆಯಲಿದ್ದು, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ರಮೇಶ್‌ ಜೋಯ್ಯಪ್ಪ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

Follow Us:
Download App:
  • android
  • ios