Asianet Suvarna News Asianet Suvarna News

ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ : 42 ಕಂಪನಿಗಳಿಂದ ನೇರ ನೇಮಕಾತಿ

  • ಉದ್ಯೋಗ ಮಾಡುವ ಮನಸ್ಸಿರುವ ಯುವಜನರಿಗೆ ಸರಕಾರವೇ ಕೌಶಲ್ಯ ತರಬೇತಿ ನೀಡಿ ಉದ್ಯೋಗವೂ ಸಿಗುವ ಹಾಗೆ ಮಾಡುತ್ತಿದೆ 
  • ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ
job fair in Bangalore Direct recruitment from 42 companies snr
Author
Bengaluru, First Published Sep 3, 2021, 12:14 PM IST

ಬೆಂಗಳೂರು (ಸೆ.03): ಉದ್ಯೋಗ ಮಾಡುವ ಮನಸ್ಸಿರುವ ಯುವಜನರಿಗೆ ಸರಕಾರವೇ ಕೌಶಲ್ಯ ತರಬೇತಿ ನೀಡಿ ಉದ್ಯೋಗವೂ ಸಿಗುವ ಹಾಗೆ ಮಾಡುತ್ತಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. 

ಬೆಂಗಳೂರಿನ ಮಲ್ಲೇಶ್ವದಲ್ಲಿ ಇಂದು ಬೆಳಗ್ಗೆ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಬೆಂಗಳೂರು ಮಹಾನಗರ ಹಾಗೂ ಕರ್ನಾಟಕದಲ್ಲಿ ಉದ್ಯೋಗಗಳಿಗೆ ಕೊರತೆ ಇಲ್ಲ. ವಿಪುಲ ಉದ್ಯೋಗಾವಕಾಶಗಳು ಲಭ್ಯವಿದ್ದು, ಕೆಲಸ ಮಾಡಲು ಯುವಜನರು ಮುಂದೆ ಬರಬೇಕು ಎಂದು ಕರೆ ನೀಡಿದರು. 

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಶೀಘ್ರವೇ ದಿನಾಂಕ ನಿಗದಿ, 5 ಲಕ್ಷ ಉದ್ಯೋಗ ಸೃಷ್ಟಿ

ರಾಜ್ಯದಲ್ಲಿ ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಕುಶಲ ಸಂಪನ್ಮೂಲ ಒದಗಿಸುವುದು ಸರಕಾರದ ಉದ್ದೇಶ. ಈ ನಿಟ್ಟಿನಲ್ಲಿ ಎಷ್ಟೇ ಪ್ರಮಾಣದ ಉದ್ಯೋಗಾಂಕ್ಷಿಗಳು ಬಂದರೂ ಸೂಕ್ತ ತರಬೇತಿ, ಭಾಷಾ ಜ್ಞಾನ, ಕೌಶಲ್ಯ ಕಲಿಸಿ ಕೆಲಸ ಕೊಡಿಸಲಾಗುವುದು. ಕುಶಲತೆಯನ್ನು ರೂಢಿಸಿಕೊಳ್ಳದ ಹೊರತು ಉದ್ಯೋಗದ ಪ್ರಶ್ನೆ ಬರುವುದಿಲ್ಲ ಎಂದು ಅವರು ಹೇಳಿದರು. 

ವಿದೇಶಗಳಲ್ಲಿ ಕೆಲಸ ಮಾಡುತ್ತೇವೆ ಎಂದರೂ ಅದಕ್ಕೂ ನಮ್ಮಲ್ಲಿ ಅವಕಾಶವಿದೆ. ಸರಕಾರ ಅಂತರರಾಷ್ಟ್ರೀಯ ವಲಸೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಅದರ ಮೂಲಕ ರಾಜ್ಯದ ಕುಶಲ ಯುವಜನರಿಗೆ ಹೊರ ದೇಶಗಳಲ್ಲೂ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಅನೇಕರು ಉದ್ಯೋಗ ಪಡೆದುಕೊಂಡು ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆಂದು ಸಚಿವರು ಹೇಳಿದರು. 

ಬೃಹತ್ ಜಾಬ್ ಮೇಳ: 

ಈ ಉದ್ಯೋಗ ಮೇಳದಲ್ಲಿ 2,000ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯ ಇವೆ. ಆದರೆ ನೋಂದಣಿ ಮಾಡಿಕೊಂಡಿರುವುದು 1300 ಜನ. 30 ಕಂಪನಿಗಳು ನೇರವಾಗಿ, ಅಂದರೆ ಭೌತಿಕವಾಗಿ ಅಭ್ಯರ್ಥಿಗಳನ್ನು ಸ್ಥಳದಲ್ಲಿಯೇ ಆಯ್ಕೆ ಮಾಡಿಕೊಳ್ಳುತ್ತಿವೆ. ಇನ್ನೂ 12 ಕಂಪನಿಗಳು ಆನ್ ಲೈನ್ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿವೆ. ಒಟ್ಟು 42 ಕಂಪನಿಗಳು ಈ ಮೇಳದಲ್ಲಿ ಭಾಗಿಯಾಗಿವೆ ಎಂದರು. 

ಇವೆಲ್ಲ ದೇಶದ ಪ್ರತಿಷ್ಟಿತ ಕಂಪನಿಗಳಾಗಿದ್ದು, ನಮ್ಮ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿವೆ. ಇಂಥ ಕಂಪನಿಗಳಲ್ಲಿ ಅವಕಾಶ ಸಿಕ್ಕಿದ ಮೇಲೆ ಉತ್ತಮವಾಗಿ ಕೆಲಸ ಮಾಡಿ ಹಾಗೂ ನೀವು ಬೆಳೆಯುವುದರ ಜತೆಗೆ ಕಂಪನಿಯನ್ನೂ ಬೆಳೆಸಿ ಆ ಮೂಲಕ ಆರ್ಥಿಕ ವೃದ್ಧಿಗೆ ಕಾಣಿಕೆ ನೀಡಿ ಎಂದು ಸಚಿವರು ಉದ್ಯೋಗಾಂಕ್ಷಿಗಳಿಗೆ ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಅನೇಕ ಅಧಿಕಾರಿಗಳು, ವಿವಿಧ ಕಂಪನಿಗಳ ಅಧಿಕಾರಿಗಳು ಹಾಜರಿದ್ದರು

Follow Us:
Download App:
  • android
  • ios