ಪಿಯುಸಿ ಉತ್ತೀರ್ಣರಿಗೆ ಉದ್ಯೋಗಾವಕಾಶ: ವಾಯುಪಡೆಗೆ ನೇರ ನೇಮಕಾತಿ
ಕರ್ನಾಟಕದ ಪಿಯುಸಿ ಉತ್ತೀರ್ಣರಾದವರಿಗೆ ವಾಯುಪಡೆಯಲ್ಲಿ ಸೇವೆ ಸಲ್ಲಿಸುವ ಅವಕಾಶವಿದೆ. ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಜು. 22ರವರೆಗೆ ನಡೆಯುವ ವಾಯು ಪಡೆ ನೇರ ನೇಮಕಾತಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದಾಗಿದೆ. ಅರ್ಹತೆ ಪಡೆದ ಎಲ್ಲರಿಗೂ ನೌಕರಿ ಸಿಗಲಿದ್ದು, ಕನಿಷ್ಠ 30,000 ರು. ವೇತನವಿರಲಿದೆ.
ಬೆಂ.ಗ್ರಾಮಾಂತರ (ಜು.18): ಕರ್ನಾಟಕದ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಲಭ್ಯವಾಗಿದೆ ಎಂದು ದೇವನಹಳ್ಳಿಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ ನಾರಾಯಣಪ್ಪ ತಿಳಿಸಿದ್ದಾರೆ.
ಸೇನೆಯಲ್ಲಿ 21 ವರ್ಷ ಸೇವೆ ಸಲ್ಲಿಸಿರುವ ನಾರಾಣಪ್ಪ ಮಾಧ್ಯಮದವರಿಗೆ ಈ ಬಗ್ಗೆ ಮಾಹಿತಿ ನೀಡಿ, ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದ್ವಿತೀಯ ಪಿಯುಸಿ ಆಗಿರುವ ಆರೋಗ್ಯವಂತ ವಿದ್ಯಾರ್ಥಿಗಳು ತಮ್ಮ ಎಲ್ಲ ದಾಖಲೆಗಳೊಂದಿಗೆ (ಆಧಾರ್ಕಾರ್ಡ್, ಶಾಲಾ ದಾಖಲಾತಿ ಪತ್ರಗಳೊಂದಿಗೆ) ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಜು. 22ರವರೆಗೆ ನಡೆಯುವ ವಾಯು ಪಡೆ ನೇಮಕಾತಿ ಸಂದರ್ಶನದಲ್ಲಿ ಭಾಗವಹಿಸಬೇಕೆಂದು ಅಲ್ಲಿನ ಡಿಸಿಕೆ.ಎ. ದಯಾನಂದ್ ಮನವಿ ಮಾಡಿದ್ದಾರೆ. ಅರ್ಹತೆಗೊಂಡ ಎಲ್ಲರಿಗೂ ನೌಕರಿ ಸಿಗುತ್ತದೆ ಎಂದು ತಿಳಿಸಿದ್ದಾರೆ ಎಂದರು.
ಪರೀಕ್ಷೆ, ಸಂದರ್ಶನಕ್ಕೆ ಬೆಂಗಳೂರಿಗೆ ಬರುವ ಮಹಿಳೆಯರಿಗೆ ಫ್ರೀ ಹಾಸ್ಟೆಲ್! ಇಲ್ಲಿದೆ ಫುಲ್ ಲಿಸ್ಟ್
ವಾಯುಪಡೆಗೆ ಸೇರ್ಪಡೆಯಾದವರಿಗೆ ಕನಿಷ್ಠ 30 ಸಾವಿರ ರು. ವೇತನ ದೊರಕುವುದಲ್ಲದೆ ದೇಶಕ್ಕೆ ವೀರ ಯೋಧನಾಗಿ ಸೇವೆ ಸಲ್ಲಿಸುವ ಅವಕಾಶ ಹಾಗೂ ಮನೆಯ ಆರ್ಥಿಕ ಪರಿಸ್ಥಿತಿಗೆ ನೆರವಾಗಲು ಸಾಧ್ಯ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಸೇವಾವಧಿ ಮುಗಿದಮೇಲೆ ಸಮಾಜ ಗೌರವದಿಂದ ಕಾಣುತ್ತದೆ ಎಂದು ನಾರಾಯಣಪ್ಪ ತಿಳಿಸಿದರು.