ಈ ಸಲ ಕಪ್ ನಮ್ದೇ ಅಂದ RCB ಅಭಿಮಾನಿ: ವಾರ್ನರ್ನಿಂದ ಕೂಲ್ ರಿಯಾಕ್ಷನ್..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಯೊಬ್ಬ ಈ ಸಲ ಕಪ್ ನಮ್ದೇ ಎಂದು ಹೇಳಿದ್ದಕ್ಕೆ ಆಸೀಸ್ ಆರಂಭಿಕ ಬ್ಯಾಟ್ಸ್ಮನ್ ಕೂಲ್ ರಿಯಾಕ್ಷನ್ ನೀಡಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏನಂದ್ರು ಅನ್ನೋದನ್ನು ನೀವೇ ನೋಡಿ.
ಮೆಲ್ಬರ್ನ್(ಆ.08): ಕೊರೋನಾ, ಲಾಕ್ಡೌನ್ನಿಂದ ಕಂಗೆಟ್ಟಿದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಗೂ ಬಿಸಿಸಿಐ ಗುಡ್ ನ್ಯೂಸ್ ನೀಡಿದೆ. ಹಲವು ಸರ್ಕಸ್ಗಳ ಬಳಿಕ ಬರುವ ಸೆಪ್ಟೆಂಬರ್ 19ರಿಂದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದೆ.
ಐಪಿಎಲ್ ಯಾವಾಗ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಈ ಸುದ್ದಿ ಕುಣಿದು ಕುಪ್ಪಳಿಸುವಂತೆ ಮಾಡಿದೆ. ಇದೀಗ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಐಪಿಎಲ್ ಜ್ವರ ನಿಧಾನವಾಗಿ ಕಾವೇರಲಾರಂಭಿಸಿದೆ. ಐಪಿಎಲ್ ಟೂರ್ನಿ ಆಯೋಜನೆ ಖಚಿತವಾಗುತ್ತಿದ್ದಂತೆ ಹಲವು ಪ್ರಮುಖ ಆಟಗಾರರು ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿದ್ದರು.
ವಿರಾಟ್ ನೇತೃತ್ವದ RCB ಪರ ಆಡಲು ತುದಿಗಾಲಿ ನಿಂತಿದ್ದೇನೆ ಎಂದ ವಿಸ್ಫೋಟಕ ಬ್ಯಾಟ್ಸ್ಮನ್..!
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರು ಆಸೀಸ್ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಐಪಿಎಲ್ ಟ್ರೋಫಿಯ ಭಾವಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಈ ವರ್ಷ ಯಾರು ಈ ಪ್ರಶಸ್ತಿಯನ್ನು ಗೆಲ್ಲುತ್ತಾರೆ ಎಂದು ಅಭಿಮಾನಿಗಳಲ್ಲಿ ಪ್ರಶ್ನಿಸಿದ್ದಾರೆ.
ವಾರ್ನರ್ ಪ್ರಶ್ನೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿ ಈ ಸಲ ಕಪ್ ನಮ್ದೇ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ತಣ್ಣಗೆ ಪ್ರತಿಕ್ರಿಯಿಸಿರುವ ವಾರ್ನರ್, ಒಳ್ಳೆಯದಾಗಲಿ(ಗುಡ್ ಲಕ್) ಎಂದು ಹೇಳಿದ್ದಾರೆ.
ಕಳೆದ 12 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಒಮ್ಮೆ ಕೂಡಾ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ RCB ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ತಂಡವನ್ನು ಹುರಿದುಂಬಿಸಲಾರಂಭಿಸಿದ್ದಾರೆ. ಇಷ್ಟಾಗಿಯೂ ತಂಡಕ್ಕೆ ಕಪ್ ಎತ್ತಿಹಿಡಿಯುವ ಭಾಗ್ಯ ಸಿಕ್ಕಿಲ್ಲ. RCB ತಂಡಕ್ಕೆ ಕಪ್ ಗೆಲ್ಲಲು ಆಗಲ್ಲ, ಚಿಪ್ಪೇ ಗತಿ ಎಂದು ಹಲವರು ಟ್ರೋಲ್ ಮಾಡುವ ಮಟ್ಟಿಗೆ ಈ ಸ್ಲೋಗನ್ ಕುಖ್ಯಾತಿಗೆ ಪಾತ್ರವಾಗಿದೆ. ಇಷ್ಟಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ತಂಡವನ್ನು ಎಂದಿಗಿಂತ ಹೆಚ್ಚಾಗಿಯೇ ಬೆಂಬಲಿಸುತ್ತಲೇ ಬಂದಿದ್ದಾರೆ. ಈ ಹಿಂದೆ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ RCB ಅಭಿಮಾನಿಗಳಿಗೆ ಶರಣು ಎಂದಿದ್ದರು. ಒಟ್ಟಿನಲ್ಲಿ ಈ ಸಲನಾದ್ರೂ RCB ಕಪ್ ಗೆದ್ದ ಟ್ರೋಲರ್ ಹಾಗೂ ಟೀಕಾಕಾರರು ಬಾಯಿ ಮುಚ್ಚಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.