ಕಳೆದ ನಾಲ್ಕು ದಶಕಗಳಲ್ಲಿ 20,000 ಭಾರತೀಯರು ಪಾಕಿಸ್ತಾನದ ಭಯೋತ್ಪಾದನೆಗೆ ಬಲಿಯಾಗಿದ್ದಾರೆ ಎಂದು ಭಾರತದ ಪ್ರತಿನಿಧಿ ವಿಶ್ವಸಸ್ಥೆಯಲ್ಲಿ ಹೇಳಿದ್ದಾರೆ. 

ವಿಶ್ವಸಂಸ್ಥೆ: ಸಿಂಧು ಜಲ ಒಪ್ಪಂದಕ್ಕೆ ಬದ್ಧವಾಗಿ ಭಾರತವು ಪಾಕಿಸ್ತಾನಕ್ಕೆ ನೀರು ಕೊಟ್ಟರೂ ಕಳೆದ 4 ದಶಕಗಳಲ್ಲಿ 20 ಸಾವಿರ ಭಾರತೀಯರನ್ನು ಭಯೋತ್ಪಾದನೆ ಮೂಲಕ ಕೊಂದಿದೆ. ಈ ಮೂಲಕ ಕೃತಘ್ಞತೆ ಮೆರೆದಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ವಾಗ್ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಶುಕ್ರವಾರ ರಾತ್ರಿ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, ಭಾರತವು 65 ವರ್ಷಗಳ ಹಿಂದೆ ಉತ್ತಮ ನಂಬಿಕೆಯಿಂದ ಸಿಂಧು ಜಲ ಒಪ್ಪಂದವನ್ನು ಮಾಡಿಕೊಂಡಿತ್ತು. ಬಳಿಕ ಭಾರತದ ಮೇಲೆ 3 ಯುದ್ಧಗಳು ಮತ್ತು ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಪಾಕಿಸ್ತಾನ ವಿಶ್ವಾಸದ್ರೋಹ ಎಸಗಿದೆ. ಕಳೆದ 4 ದಶಕಗಳಲ್ಲಿ 20,000ಕ್ಕೂ ಹೆಚ್ಚು ಭಾರತೀಯ ಜೀವಗಳು ಬಲಿಯಾಗಿವೆ. ಅದರಲ್ಲಿ ಇತ್ತೀಚಿನದು ಪಹಲ್ಗಾಂ ಭಯೋತ್ಪಾದಕ ದಾಳಿ ಎಂದು ಕಿಡಿಕಾರಿದರು.

ಭಾರತವು ಇಷ್ಟಾಗಿಯೂ ಅಸಾಧಾರಣ ತಾಳ್ಮೆ ಮತ್ತು ಉದಾರತೆಯನ್ನು ತೋರಿಸಿದೆ. ಆದರೆ ಪಾಕ್‌ ಮಾತ್ರ ಸರ್ಕಾರಿ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆ ನಡೆಸಿ ನಮ್ಮ ನಾಗರಿಕರ ಜೀವಗಳನ್ನು ಮತ್ತು ಆರ್ಥಿಕತೆಯನ್ನೇ ಒತ್ತೆಯಾಗಿರಿಸಿಕೊಳ್ಳಲು ಯತ್ನಿಸುತ್ತಿದೆ ಎಂದರು.

ಸಿಂಧು ಒಪ್ಪಂದದಲ್ಲಿ ಅನುಮತಿಸಲಾಗಿದ್ದರೂ ಸಾಕಷ್ಟು ಸಿಂಧು ಕಾಮಗಾರಿಗಳಿಗೆ ಪಾಕ್‌ ತಡೆಯೊಡ್ಡುತ್ತಿದೆ. ಇವು ಎಲ್ಲರಿಗೂ ಪ್ರಯೋಜನಕಾರಿಯಾಗುವ ಯೋಜನೆಗಳಾಗಿದ್ದವು. ಆದಾಗ್ಯೂ ಪಾಕ್‌ ಕೃತಘ್ಞತೆ ತೋರುತ್ತಿರುವ ಕಾರಣ ಸಿಂಧು ಒಪ್ಪಂದಕ್ಕೆ ತಡೆ ಒಡ್ಡಲಾಗಿದೆ. ಸಿಂಧು ಜಲ ಒಪ್ಪಂದವನ್ನು ಉಲ್ಲಂಘಿಸುತ್ತಿರುವುದು ಭಾರತವಲ್ಲ, ಪಾಕಿಸ್ತಾನ ಎಂಬುದು ಸ್ಪಷ್ಟವಾಗಿದೆ ಎಂದರು.

ಗುಜರಾತ್: ಗಡಿ ದಾಟಲು ಬಂದ ಪಾಕ್ ನುಸುಳುಕೋರ ಹತ್ಯೆ

ಅಹಮದಾಬಾದ್‌: ಗುಜರಾತ್‌ನಲ್ಲಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ದಾಟಲು ಯತ್ನಿಸುತ್ತಿದ್ದ ಪಾಕ್ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಈ ಬಗ್ಗೆ ಗಡಿ ಭದ್ರತಾ ಪಡೆ ಮಾಹಿತಿ ನೀಡಿದ್ದು, ಶುಕ್ರವಾರ ರಾತ್ರಿ ಬನಾಸ್‌ಕಂಠಾದಲ್ಲಿ ಅಂತಾರಾಷ್ಟ್ರೀಯ ಗಡಿ ಬೇಲಿಯ ಕಡೆಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಬರುತ್ತಿರುವುದನ್ನು ಬಿಎಸ್‌ಎಫ್‌ ಯೋಧರು ಗಮನಿಸಿದ್ದಾರೆ. ಆತನಿಗೆ ಎಚ್ಚರಿಕೆ ನೀಡಿದರೂ ಆತ ಒಳನುಗ್ಗಲು ಯತ್ನಿಸುತ್ತಿದ್ದ. ಹೀಗಾಗಿ ಈ ವೇಳೆ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದಿದೆ.

ಸಿಂಧು ಒಪ್ಪಂದವನ್ನು ಉಲ್ಲಂಘಿಸಿದ್ದೇ ಪಾಕ್‌

ಸಿಂಧು ಒಪ್ಪಂದದಲ್ಲಿ ಅನುಮತಿಸಲಾಗಿದ್ದರೂ ಸಾಕಷ್ಟು ಕಾಮಗಾರಿಗಳಿಗೆ ಪಾಕ್‌ ತಡೆಯೊಡ್ಡುತ್ತಿದೆ. ಇವು ಎಲ್ಲರಿಗೂ ಪ್ರಯೋಜನಕಾರಿಯಾಗುವ ಯೋಜನೆಗಳಾಗಿದ್ದವು. ಆದಾಗ್ಯೂ ಪಾಕ್‌ ಕೃತಘ್ಞತೆ ತೋರುತ್ತಿರುವ ಕಾರಣ ಸಿಂಧು ಒಪ್ಪಂದಕ್ಕೆ ತಡೆ ಒಡ್ಡಲಾಗಿದೆ. ಸಿಂಧು ಜಲ ಒಪ್ಪಂದವನ್ನು ಉಲ್ಲಂಘಿಸುತ್ತಿರುವುದು ಭಾರತವಲ್ಲ, ಪಾಕಿಸ್ತಾನ ಎಂಬುದು ಸ್ಪಷ್ಟವಾಗಿದೆ.

- ಪರ್ವತನೇನಿ ಹರೀಶ್, ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ