ಮನೆಯ ಬಾತ್‌ರೂಂನಲ್ಲಿ ಯುವ ಜಡ್ಜ್ ಶವ ಪತ್ತೆ, ಅನುಮಾನ ಮೂಡಿಸಿದ ಪ್ರಕರಣ, ದೆಹಲಿಯ ಮನೆಯಲ್ಲೇ ಘಟನೆ ನಡೆದಿದೆ. ಪೊಲೀಸರು ಕೆಲ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ. 

ದೆಹಲಿ (ಮೇ.03) ಮೂವತ್ತು ವರ್ಷದ ನ್ಯಾಯಾಧೀಶರೊಬ್ಬರು ದಕ್ಷಿಣ ದೆಹಲಿಯ ಗ್ರೀನ್‌ ಪಾರ್ಕ್‌ನಲ್ಲಿನ ತಮ್ಮ ಮನೆಯ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಯವ ಜಡ್ಜ್ ಬದುಕು ಅಂತ್ಯಗೊಳಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ನ್ಯಾ. ಅಮನ್ ಕುಮಾರ್ ಶರ್ಮಾ ಮೃತರು. ಶರ್ಮಾ 2021ರ ಜೂ.19ರಂದು ದೆಹಲಿ ನ್ಯಾಯಾಂಗ ಸೇವೆಗೆ ಸೇರಿದ್ದರು. 2018ರಲ್ಲಿ ಪುಣೆಯ ಸಿಂಬಿಯೋಸಿಸ್ ಕಾನೂನು ಶಾಲೆಯಿಂದ ಕಾನೂನು ಪದವಿ ಪಡೆದಿದ್ದರು.

ತಮ್ಮ ಸೇವಾ ಅವಧಿಯಲ್ಲಿ, ಹಲವಾರು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದರು. 2025ರ ಅಕ್ಟೋಬರ್‌ನಿಂದ ಅವರನ್ನು ಈಶಾನ್ಯ ಜಿಲ್ಲೆಯ ಕರ್ಕಾರ್ಡೂಮಾ ಕೋರ್ಟ್‌ನ ಡಿಎಲ್‌ಎಸ್‌ಎಯಲ್ಲಿ ಪೂರ್ಣ ಸಮಯದ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

ಬಾತ್‌ರೂಂ ಬಾಗಿಲು ಒಡೆದು ಪೊಲೀಸರು ಒಳ ಪ್ರವೇಶ

ಮಧ್ಯಾಹ್ನ 1.45ರ ವೇಳೆ ಅಮನ್ ಕುಮಾರ್ ಶರ್ಮಾ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಬಾತ್‌ರೂಂಗೆ ತೆರಳಿದ ಅಮನ್ ಕುಮಾರ್ ಶರ್ಮಾ ಕೆಲ ಹೊತ್ತಾದರೂ ಹೊರಬರಲಿಲ್ಲ. ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ ಆತಂಕಗೊಂಡ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ತುರ್ತು ಕರೆ ಹಿನ್ನೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು, ಬಾತ್‌ರೂಂ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ನೆಲದ ಮೇಲೆ ಬಿದ್ದಿದ್ದ ಅಮನ್ ಕುಮಾರ್ ಶರ್ಮಾ ಅವರನ್ನು ತಕ್ಷಣವೆ ಸಫ್ದರಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪ್ರಯೋಜನವಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇತ್ತ ಕುಟುಬಸ್ಥರಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತದ್ದಾರೆ. ಇತ್ತ ಅಮನ್ ಕುಮಾರ್ ಶರ್ಮಾ ಮೊಬೈಲ್ ಫೋನ್ ಸೇರಿದಂತೆ ಇತರ ಕೆಲ ದಾಖಲೆಗಳನ್ನು ಪಶಪಡಿಸಿಕೊಂಡಿದ್ದಾರೆ.