ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗೋ ದಿನ ದೂರವಿಲ್ಲ, ಅಸಾದುದ್ದೀನ್ ಓವೈಸಿ ನೀಡಿದ ಹೇಳಿಕೆ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ದೇಶದಲ್ಲಿ ಸದ್ಯ ನಡೆಯುತ್ತಿರುವ ಡೆಮೋಗ್ರಫಿ ಬದಲಾವಣೆ ಓವೈಸಿ ಮಾತನ್ನು ಪುಷ್ಠೀಕರಿಸುತ್ತಿದೆ. 

ಸೋಲಾಪುರ(ಜ.10) ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಹುನ್ನಾರ ನಡೆಯುತ್ತಿದೆ ಅನ್ನೋ ವಾದ ಒಂದೆಡೆಯಾದರೆ, ಮತ್ತೊಂದೆಡೆ ಹಿಂದೂ ರಾಷ್ಟ್ರ ಅನ್ನೋ ವಾದವೂ ಇದೆ. ಇದರ ನಡುವೆ ಇದೀಗ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನೀಡಿದ ಹೇಳಿಕೆ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುವ ದಿನ ದೂರವಿಲ್ಲ ಎಂದು ಓವೈಸಿ ಹೇಳಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಮಾತನಾಡಿದ ಓವೈಸಿ, ಮಹಾಯುತಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಅಜಿತ್ ಪವಾರ್‌ಗೆ ಮತ ನೀಡಿದರೆ ಅದು ನೇರವಾಗಿ ಪ್ರಧಾನಿ ಮೋದಿ ಬೆಂಬಲಿಸಿದ ರೀತಿ. ಅಂದರೆ ನೀವು ವಕ್ಫ್ ವಿರುದ್ದ ಮತ ನೀಡಿದಂತೆ ಎಂದು ಹೊಸ ದಾಳ ಪ್ರಯೋಗಿಸಿದ್ದಾರೆ.

ಹಿಜಾಬ್ ಮಹಿಳೆಯೇ ಭಾರತದ ಪ್ರಧಾನಿ

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಸಂವಿಧಾನ ಶ್ರೇಷ್ಠವಾಗಿದೆ, ಭಾರತದ ಸಂವಿಧಾನದ ಪ್ರಕಾರ ಯಾರು ಬೇಕಾದರು ಪ್ರಧಾನಿಯಾಗಬಹುದು. ಸದ್ಯ ನಮ್ಮ ಶಕ್ತಿ, ಒಗ್ಗಟ್ಟು ನೋಡಿದರೆ ಶೀಘ್ರದಲ್ಲೇ ಹಿಜಾಬ್ ಧರಿಸಿದ ಮಹಿಳೆ ಪ್ರಧಾನಿಯಾಗಲಿದ್ದಾರೆ ಎಂದಿದ್ದಾರೆ. ಭವಿಷ್ಯದಲ್ಲಿ ಹಿಜಾಬ್ ಧರಿಸಿದ ಮಹಿಳೆ ಭಾರತ ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಓವೈಸಿ ಹೇಳಿಕೆ ಇದೀಗ ಕೋಲಾಹಲಕ್ಕೆ ಕಾರಣವಾಗಿದೆ. ದೇಶದಲ್ಲಿ ಈಗಾಗಲೇ ಡೆಮಾಗ್ರಫಿಕ್ ಬದಲಾವಣೆಯಾಗುತ್ತಿದೆ. ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಿದೆ. ಇತ್ತ ಹೊರ ದೇಶಗಳಿಂದ ಅಕ್ರಮವಾಗಿ ಒಳ ನುಸುಳಿರುವ ಮುಸ್ಲಿಮರು ಸಂಖ್ಯೆಯೂ ಹೆಚ್ಚುತ್ತಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನಾತ್ಮಕ ದೇಶವನ್ನು ಮುಗಿಸಲಿದೆ ಎಂದು ಹಲವರು ಎಚ್ಚರಿಸಿದ್ದಾರೆ. ಇದಕ್ಕೆ ಪಾಕಿಸ್ತಾನ, ಬಾಂಗ್ಲಾದೇಶಗಳ ಉದಾಹರಣೆಯನ್ನು ನೀಡಿದ್ದಾರೆ. ಪಾಕಿಸ್ತಾನ, ಭಾಂಗ್ಲಾದೇಶದಲ್ಲೂ ಹಿಂದೂಗಳಿದ್ದರು. ಆದರೆ ಇದೀಗ ಹುಡುಕಬೇಕು. ಅಲ್ಲಿನ ಸಂವಿಧಾನ, ನ್ಯಾಯಾಂಗದ ಮೇಲೆ ಯಾವ ದೇಶಕ್ಕೆ ನಂಬಿಕೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಸ್ಥಾನ ಎಲ್ಲಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಭಾರತ ದೇಶ ಭಾರತವಾಗಿಯೇ ಉಳಿಯಲು ಈ ರೀತಿಯ ಷಡ್ಯಂತ್ರಗಳನ್ನು ಮಟ್ಟಹಾಕಬೇಕು ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ವಕ್ಫ್ ಉಳಿಸಲು ಹೋರಾಟ

ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೋರೇಶನ್ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಸತತ ಸಭೆಗಳನ್ನು ಮಾಡುತ್ತಿರುವ ಓವೈಸಿ ಮುಸ್ಲಿಮ್ ಮತಗಳನ್ನು ಕ್ರೋಢಿಕರಿಸಲು ಮುಂದಾಗಿದ್ದಾರೆ. ವಕ್ಫ್ ವಿರೋಧಿ ನೀತಿ, ಹಾಗೂ ಹಿಂದುತ್ವ ಹೇರುವಿಕೆ ವಿರುದ್ದ ಮತ ನೀಡಲು ಓವೈಸಿ ಮನವಿ ಮಾಡಿದ್ದಾರೆ. "ಅಜಿತ್ ಪವಾರ್ ಇಂದು ಮೋದಿಯ ಮಡಿಲಲ್ಲಿ ಹೋಗಿ ಕುಳಿತಿದ್ದಾರೆ. ಅವರಿಗೆ ಮಸೀದಿ ಮತ್ತು ದರ್ಗಾಗಳ ಬಗ್ಗೆ ಯಾವುದೇ ಗೌರವ ಇಲ್ಲ. ನೆನಪಿಡಿ, ನೀವು ಅವರಿಗೆ ನೀಡುವ ಒಂದೊಂದು ಮತವೂ ಮೋದಿ ತಂದ ವಕ್ಫ್ ಕಾಯ್ದೆಗೆ ಶಕ್ತಿ ನೀಡುತ್ತದೆ. ಈ ಮಹಾಯುತಿ ನಿಮ್ಮ ಕಣ್ಣಿಗೆ ಮಣ್ಣೆರಚುವ 'ತ್ರಿಮೂರ್ತಿ'ಯಾಗಿದೆ. ಸೋಲಾಪುರದ ಮಣ್ಣು ಎಂಐಎಂಗೆ ಯಾವಾಗಲೂ ಬೆಂಬಲ ನೀಡಿದೆ. ಇದು ಹೊಸ ಜೀವನ. ಈ ಸೋಲಾಪುರ ಪ್ರದೇಶವನ್ನು ನಿರ್ನಾಮ ಮಾಡಲು ಹೊರಟವರಿಗೆ ನಾವು ಮತದಾನದ ಮೂಲಕ ಪಾಠ ಕಲಿಸಬೇಕು ಎಂದು ಓವೈಸಿ ಕರೆ ನೀಡಿದ್ದಾರೆ. ನಾನು ಕೇವಲ ಭಾಷಣ ಮಾಡಲು ಬಂದಿಲ್ಲ. ಇಲ್ಲಿನ ಪ್ರತಿಯೊಂದು ಸಮಸ್ಯೆಗೆ ಪರಿಹಾರ ನೀಡಲು ಆಗಮಿಸಿದ್ದೇನೆ ಎಂದು ಓವೈಸಿ ಹೇಳಿದ್ದಾರೆ.

ಸೋಲಾಪುರ ಜನರಿಗೆ ಓವೈಸಿ ಭರವಸೆ

  • 16 ಇಂಚಿನ ನೀರಿನ ಪೈಪ್‌ಲೈನ್ ಮತ್ತು ರಸ್ತೆ ದುರಸ್ತಿ ಭರವಸೆ.
  • ಬಡವರಿಗೆ ಆಂಬುಲೆನ್ಸ್ (Ambulance) ಒದಗಿಸುವುದು.
  • ಪ್ರಾಪರ್ಟಿ ಕಾರ್ಡ್ ಮತ್ತು ಜಾಗದ ಮಾಲೀಕತ್ವದ ಹಕ್ಕಿನ ಸಮಸ್ಯೆಗಳನ್ನು ಬಗೆಹರಿಸುವುದು.
  • ಶಿಕ್ಷಣದ ಮಹತ್ವ: ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರ ಕಾರ್ಯದ ಪರಂಪರೆಯನ್ನು ಉಲ್ಲೇಖಿಸಿ, ಮುಸ್ಲಿಂ ಸಮುದಾಯದ ಹುಡುಗ-ಹುಡುಗಿಯರ ಶಿಕ್ಷಣಕ್ಕೆ ಒತ್ತು ನೀಡಿದರು.

ರಾಜಕೀಯ ಸವಾಲು: ಓವೈಸಿ ಅವರು ಅಜಿತ್ ಪವಾರ್‌ಗೆ ನೇರ ಚರ್ಚೆಯ ಸವಾಲು ಹಾಕಿದ್ದಾರೆ. ತಮ್ಮ ಶೇರ್ವಾನಿ ಬಗ್ಗೆ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಈ ಎಲ್ಲಾ ಟೀಕೆಗಳಿಗೆ ಸೋಲಾಪುರ ಜನರು ಉತ್ತರಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.