ಅಮೃತಾ ಎಂಬ ಮಹಿಳೆ ಮಸ್ಕತ್‌ನಲ್ಲಿರುವ ತನ್ನ ಪತಿಯನ್ನು ನೋಡಲು ಮೇ 8 ರಂದು ಟಿಕೆಟ್ ಕಾಯ್ದಿರಿಸಿದ್ದಳು, ಆದರೆ ತಿರುವನಂತಪುರಂನ ವಿಮಾನ ನಿಲ್ದಾಣವನ್ನು ತಲುಪಿದಾಗ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ರದ್ದುಗೊಳಿಸಿದ್ದ ಮಾಹಿತಿ ಸಿಕ್ಕಿತ್ತು.

ನವದೆಹಲಿ (ಮೇ.14): ಹೃದಯವಿದ್ರಾವಕ ಘಟನೆಯೊಂದರಲ್ಲಿ, ಸಾಯುವ ಕೊನೆ ಕ್ಷಣದಲ್ಲಿ ಪತಿ ಜೊತೆಗಿರುವ ಭಾಗ್ಯವನ್ನು ಮಹಿಳೆ ತಪ್ಪಿಸಿಕೊಂಡಿದ್ದಾಳೆ. ಏರ್‌ ಇಂಡಿಯಾ ತನ್ನ ವಿಮಾನವನ್ನು ಹಠಾತ್‌ ಆಗಿ ರದ್ದು ಮಾಡಿದ್ದರಿಂದ ಒಮಾನ್‌ನ ಆಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಪತಿಯನ್ನು ನೋಡುವ ಅವಕಾಶ ಹಾಗೂ ಆತ ಜೀವಂತವಾಗಿರುವ ಕೊನೇ ಬಾರಿಗೆ ನೋಡುವ ಅವಕಾಶ ತಪ್ಪಿ ಹೋಗಿದೆ. ಪತಿ ಸಾವು ಕಾಣುವ ಮೊದಲು ಕೊನೇ ಬಾರಿಗೆ ಆತನನ್ನು ನೋಡುವ ಸಲುವಾಗಿ ಮಹಿಳೆ ಮಸ್ಕತ್‌ಗೆ ಹೊರಟಿದ್ದಳು. ಇದಕ್ಕಾಗಿ ಮೇ 8 ರಂದು ಟಿಕೆಟ್‌ ಬುಕ್‌ ಕೂಡ ಮಾಡಿದ್ದಳು. ಆದರೆ, ಏರ್‌ ಇಂಡಿಯಾ ವಿಮಾನ ರದ್ದು ಮಾಡಿದ್ದರಿಂದ ಈ ಭಾಗ್ಯ ಅವಳಿಗೆ ತಪ್ಪಿದೆ ಎಂದು ಕುಟುಂಬ ಆರೋಪಿಸಿದೆ.

ಅಮೃತಾ ಎಂಬ ಮಹಿಳೆ ಮಸ್ಕತ್‌ಗೆ ಟಿಕೆಟ್‌ ಬುಕ್‌ ಮಾಡಿದ್ದಳು, ಆದರೆ, ತಿರುವನಂತಪುರ ಏರ್‌ಪೋರ್ಟ್‌ಗೆ ಬಂದಾಗಲೇ ವಿಮಾನ ರದ್ದಾಗಿರುವುದು ಆಕೆಗೆ ಗೊತ್ತಾಗಿದೆ. ಈ ವೇಳೆ ಟಿಕೆಟ್‌ ಬೇಕೇ ಬೇಕು ಎಂದು ಹಠಾ ಹಿಡಿದ ಆಕೆಗೆ ಮರು ದಿನದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಟಿಕೆಟ್‌ ಸಿಕ್ಕಿತ್ತು. ದುರಾದೃಷ್ಟವಶಾತ್‌ ಈ ವಿಮಾನ ಕೂಡ ರದ್ದಾಗಿದ್ದರಿಂದ ಆಕೆ ಪ್ರಯಾಣ ಮಾಡುವ ಸಂಪೂರ್ಣ ಪ್ಲ್ಯಾನ್‌ ಅನ್ನೇ ರದ್ದು ಮಾಡಬೇಕಾಯಿತು.

ಸೋಮವಾರದ ವೇಳೆಗೆ ಆಕೆಯ ಪತಿ ಓಮಾನ್‌ನಲ್ಲಿ ಸಾವು ಕಂಡಿದ್ದಾರೆ ಎನ್ನುವ ಸುದ್ದಿ ತಲುಪಿತ್ತು. 'ಕೊನೆಯ ಬಾರಿಗೆ ಗಂಡನ ಮುಖವನ್ನು ನೋಡಲು ಕೂಡ ಆಕೆಗೆ ಸಾಧ್ಯವಾಗಿಲ್ಲ. ಇದು ನ್ಯಾಯವಲ್ಲ. ನಾವು ಅವನನ್ನು ಕೊನೆಯ ಬಾರಿಗೆ ನೋಡಲು ಸಾಧ್ಯವಾಗುವಂತೆ ಬೇರೆ ವಿಮಾನದಲ್ಲಿ ಈಕೆಗೆ ಅವಕಾಶ ಕಲ್ಪಿಸುವಂತೆ ನಾವು ವಿಮಾನಯಾನ ಸಂಸ್ಥೆಯನ್ನು ಬೇಡಿಕೊಂಡೆವು. ಆದರೆ ಅವರು ಏನನ್ನೂ ಮಾಡಲಿಲ್ಲ'' ಎಂದು ಅಮೃತಾ ಅವರ ತಾಯಿ ಟಿವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಅಮೃತಾಳ ಪತಿ ಕೂಡ ಸಾವು ಕಾಣುವ ಮುನ್ನ ಕೊನೆಯ ಬಾರಿಗೆ ಹೆಂಡತಿ ಹಾಗೂ ಮಕ್ಕಳನ್ನು ನೋಡಬೇಕು ಎಂದು ಬಯಸಿದ್ದರು. ಅದಕ್ಕಾಗಿಯೇ, ಅವರು ಟಿಕೆಟ್‌ ಕಾಯ್ದಿರಿಸಿದ್ದರು ಎಂದು ಅಮೃತಾ ಅವರ ತಾಯಿ ತಿಳಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಮೃತಾ, ಎರಡನೇ ವಿಮಾನವೂ ರದ್ದಾದ ನಂತರ, ವಿಮಾನಯಾನ ಸಂಸ್ಥೆ ಏನೂ ಮಾಡಲಾಗದು ಎಂದು ಹೇಳಿತ್ತು ಎಂದಿದ್ದಾರೆ. "ಮುಂದಿನ ನಾಲ್ಕು ದಿನಗಳ ಕಾಲ ತಮ್ಮ ವಿಮಾನಗಳು ತುಂಬಿವೆ ಮತ್ತು ಅವರು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು" ಎಂದು ಅಮೃತಾ ತಿಳಿಸಿದ್ದಾರೆ. ಆಕೆಯ ಪತಿ ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. "ನಾನು ಅವರೊಂದಿಗೆ ಫೋನ್ ಮೂಲಕ ಮಾತನಾಡಿದೆ. ನನಗೆ ಸಾಧ್ಯವಾದರೆ ನಾನು ಅಲ್ಲಿಗೆ ತಲುಪಲು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳಿದರು.

ಏರ್‌ ಇಂಡಿಯಾ ಸಂಚಾರ ನಾಳೆ ಸಂಪೂರ್ಣ ಸಹಜ: ಆದರೂ 75 ವಿಮಾನ ಹಾರಾಟ ರದ್ದು

ವಿಮಾನಯಾನ ಸಂಸ್ಥೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಟಾಟಾ ಗ್ರೂಪ್ ಒಡೆತನದ ಏರ್‌ಲೈನ್‌ನಲ್ಲಿ ಕ್ಯಾಬಿನ್ ಸಿಬ್ಬಂದಿಗಳ ಕೊರತೆಯಿಂದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಳೆದ ವಾರ "ಸ್ಕೋರ್ ಆಫ್ ಫ್ಲೈಟ್‌ಗಳನ್ನು" ರದ್ದುಗೊಳಿಸಿತ್ತು.

ವೀಲ್‌ಚೇರ್‌ ಸೇವೆ ಇಲ್ಲದೆ ವೃದ್ಧ ಸಾವು, ಏರ್‌ಇಂಡಿಯಾಗೆ 30 ಲಕ್ಷ ದಂಡ ವಿಧಿಸಿದ ಡಿಜಿಸಿಎ!