ಛತ್ತೀಸ್‌ಗಢದ ಬಿಲಾಸ್ಪುರ್‌ನಲ್ಲಿ, ತನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಇವರಿಬ್ಬರ ನಡುವೆ ಮನಸ್ತಾಪ ಉಂಟಾದಾಗ, ಯುವತಿ ಈ ಕೃತ್ಯ ಎಸಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಬಿಲಾಸ್ಪುರ್: ಛತ್ತೀಸ್‌ಗಢದ ಬಿಲಾಸ್ಪುರ್‌ನಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ತನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ ಅಂತಾ 25 ವರ್ಷದ ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ ಅನ್ನೇ ಕೊ*ಲೆ ಮಾಡಿದ್ದಾಳೆ. ಮೃತ ಯುವಕನನ್ನ 25 ವರ್ಷದ ಕಾಮತ್ ಪ್ರಸಾದ್ ಸೂರ್ಯವಂಶಿ ಅಂತ ಗುರುತಿಸಲಾಗಿದೆ. ಇನ್ನು ತನ್ನ ಬಾಯ್‌ಫ್ರೆಂಡ್ ಕೊ*ಲೆ ಮಾಡಿದವಳು 22 ವರ್ಷದ ರೋಶಿನಿ ಎಂದು ಗುರುತಿಸಲಾಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ, ಪ್ರೀತಿ-ಪ್ರೇಮ

ಹೋಟೆಲ್ ಉದ್ಯೋಗಿಯಾಗಿದ್ದ ಸೂರ್ಯವಂಶಿ ಮತ್ತು ರೋಶಿನಿ ಆರು ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಳೆದ ಎರಡು-ಮೂರು ದಿನಗಳಿಂದ ಕಾಮತ್, ರೋಶಿನಿ ಜೊತೆ ಮಾತುಕತೆ ನಿಲ್ಲಿಸಿದ್ದ. ಆಕೆಯ ನಂಬರ್ ಕೂಡ ಬ್ಲಾಕ್ ಮಾಡಿದ್ದ.

ತನ್ನ ಬಾಯ್‌ಫ್ರೆಂಡ್ ಬೇರೆ ಹುಡುಗಿ ಜೊತೆ ಸುತ್ತಾಡುತ್ತಿದ್ದಾನೆ ಎಂದು ರೋಶಿನಿಗೆ ಅನುಮಾನ ಬಂದಿದೆ. ಇದರಿಂದ ಕೋಪಗೊಂಡ ಆಕೆ, ಒಂದು ಚಾಕು ತೆಗೆದುಕೊಂಡು ನೇರವಾಗಿ ಆತನ ಮನೆಗೆ ಹೋಗಿದ್ದಾಳೆ. ಅಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ, ರೋಶಿನಿ ತಾನು ತಂದಿದ್ದ ಚಾಕುವಿನಿಂದ ಕಾಮತ್‌ನಿಗೆ ಇರಿದಿದ್ದಾಳೆ. ಕಾಮತ್ ಜೊತೆ ವಾಸವಿದ್ದ ಆತನ ರೂಮ್‌ಮೇಟ್, ಗಲಾಟೆ ಕೇಳಿ ಓಡಿ ಬಂದಿದ್ದಾರೆ. ಆಗ ಕಾಮತ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಪೊಲೀಸ್ ಅಧಿಕಾರಿ ಸುಮ್ಮತ್ ಸಾಹು ಈ ಬಗ್ಗೆ ಮಾಹಿತಿ ನೀಡಿದ್ದು, ಯುವತಿಯನ್ನು ಬಂಧಿಸಿ ಕೊ*ಲೆ ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

ಮನೆಯೊಳಗೆ ಬರುತ್ತಿದ್ದಂತೆಯೇ ಕಾಮತ್ ಮೊಬೈಲ್ ಕೇಳಿದ ರೋಶಿನಿ:

ಕಳೆದ ಎರಡು ಮೂರು ದಿನಗಳಿಂದಲೂ ಕಾಮತ್ ಹಾಗೂ ರೋಶಿನಿ ನಡುವೆ ಮನಸ್ತಾಪ ಜೋರಾಗಿತ್ತು. ಇದೇ ಕಾರಣಕ್ಕೆ ಆಕೆಯ ನಂಬರ್ ಬ್ಲಾಕ್ ಮಾಡಿದ್ದ. ಇನ್ನು ಕಾಮತ್ ಇರುವ ಮನೆಗೆ ಬಂದ ರೋಶಿನಿ, ಬಾಗಿಲು ತೆರೆಯುತ್ತಿದ್ದಂತೆಯೇ ಆತನ ಮೊಬೈಲ್ ಕೇಳಿದ್ದಾಳೆ. ಆದರೆ ಕಾಮತ್ ಮೊಬೈಲ್ ನೀಡಲು ನಿರಾಕರಿಸಿದ್ದಾನೆ. ಹೀಗಾಗಿ ಇಬ್ಬರ ನಡುವೆ ಜೋರಾಗಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ರೋಶಿನಿ, ನೇರವಾಗಿ ಚಾಕುವಿನಿಂದ ಕಾಮತ್‌ ಎದೆಗೆ ಇರಿದಿದ್ದಾಳೆ.

ರೋಶಿನಿ ಚಾಕು ಸಮೇತ ಕಾಮತ್ ರೂಮಿಗೆ ಬಂದು, ಆತನ ಫೋನ್ ಕೇಳಿದ್ದಾಳೆ. ಜಗಳದ ಮಧ್ಯೆ ಆತನ ಎದೆಗೆ ಚಾಕುವಿನಿಂದ ಇರಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕ, ಬಿಜೆಪಿ ನಾಯಕ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜೇಶ್ ಸೂರ್ಯವಂಶಿ ಅವರ ಸಂಬಂಧಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಯ್‌ಫ್ರೆಂಡ್‌ಗೆ ಹೆದರಿಸಲು ಮಾತ್ರ ಚಾಕು ತಂದಿದ್ದೆ, ಆದರೆ ಜಗಳದ ತೀವ್ರತೆಗೆ ಇದ್ದಕ್ಕಿದ್ದಂತೆ ಇರಿದುಬಿಟ್ಟೆ ಎಂದು ಯುವತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಇದೀಗ ಮೃತದೇಹವನ್ನು ಪೋಸ್ಟ್‌ಮಾರ್ಟಮ್ ಮಾಡಲು ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.