Asianet Suvarna News Asianet Suvarna News

Republic Day: 170 ಬಿಲಿಯನ್‌ ಡಾಲರ್‌ ಸಾಲದಲ್ಲಿರುವ ಈಜಿಪ್ಟ್‌ ದೇಶದ ಅಧ್ಯಕ್ಷರನ್ನು ಭಾರತ ಅತಿಥಿಯಾಗಿ ಆಹ್ವಾನಿಸಿದ್ದೇಕೆ?

ದೇಶದ ಮೇಲೆ 170 ಬಿಲಿಯನ್‌ ಡಾಲರ್‌ ಸಾಲ, ದೇಶದಲ್ಲಿ ಶೇ. 25ರಷ್ಟು ಹಣದುಬ್ಬರ ಇವೆಲ್ಲದರ ನಡುವೆಯೂ ಈಜಿಪ್ಟ್‌ ದೇಶದ ಅಧ್ಯಕ್ಷರನ್ನು ನರೇಂದ್ರ ಮೋದಿ ಸರ್ಕಾರ, ಈ ಬಾರಿಯ ಗಣರಾಜ್ಯೋತ್ಸವದ ಅತಿಥಿಯಾಗಿ ಆಹ್ವಾನಿಸಿದೆ. ಈ ಆಹ್ವಾನ ಕಾಟಾಚಾರದ್ದಲ್ಲ, ಸಾಲದ ಹೊರೆಯಲ್ಲಿರುವ ಈಜಿಪ್ಟ್‌ನಿಂದ ಭಾರತ ಕೂಡ ಪ್ರಮುಖ ಸಹಾಯವೊಂದನ್ನು ಬಯಸಿದೆ.
 

Why the President of Egypt Abdelfattah Elsis is the Chief Guest on Republic Day Know what India wants san
Author
First Published Jan 25, 2023, 4:03 PM IST

ನವದೆಹಲಿ (ಜ.25): ಈ ವರ್ಷ ನವದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿ ಮಮ್ಮಿಗಳ ನಾಡು ಈಜಿಪ್ಟ್‌. ಅಂದರೆ ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಅಲ್‌ ಸಿಸಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾರತದ ಆಹ್ವಾನದ ಮೇರೆಗೆ ಅತಿಥಿಯಾಗಿ ಆಗಮಿಸಲಿದ್ದಾರೆ. ಕೋವಿಡ್‌-19 ದೇಶಕ್ಕೆ ಅಪ್ಪಳಿಸುವುದರೊಂದಿಗೆ ಈಜಿಪ್ಟ್‌ ದೇಶ ಬಹುತೇಕ ದಿವಾಳಿಯ ಅಂಚಿಗೆ ಬಂದು ತಲುಪಿದೆ. ದೇಶದ ಒಟ್ಟು ವಿದೇಶಿ ಸಾಲ 170 ಶತಕೋಟಿ ಡಾಲರ್‌ ಆಗಿದ್ದರೆ, ಹಣದುಬ್ಬರ ದರವು ಸುಮಾರು 25% ಆಗಿದೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತವು ಅಂತಹ ಮಹತ್ವದ ಸಂದರ್ಭದಲ್ಲಿ ಅಲ್ ಸಿಸಿಯನ್ನು ಮುಖ್ಯ ಅತಿಥಿಯಾಗಿ ಏಕೆ ಆರಿಸಿತು ಎಂಬುದು ಅನೇಕ ಜನರ ಮನಸ್ಸಿನಲ್ಲಿರುವ ಪ್ರಶ್ನೆ. ದಿವಾಳಿಯ ಅಂಚಿನಲ್ಲಿರುವ ಈಜಿಪ್ಟ್‌ ದೇಶದಿಂದ ಭಾರತ ಏನು ಬಯಸಿದೆ ಎನ್ನುವುದನ್ನೇ ಡಿಕೋಡ್‌ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಈಜಿಪ್ಟ್‌ನಿಂದ ಭಾರತಕ್ಕೆ ಆಗುವ ಪ್ರಯೋಜನವೇನು ಎನ್ನುವುದರ ವಿವರ ಇಲ್ಲಿದೆ. 

ಇತಿಹಾಸದ ಪುಟಗಳನ್ನು ತಿರುವಿ ನೋಡುವುದಾದರೆ, ಗಣರಾಜ್ಯೋತ್ಸವದ ಸಮಾರಂಭಗಳಿಗೆ ಭಾರತವು ಸಾಮಾನ್ಯವಾಗಿ ಇಂಗ್ಲೆಂಡ್‌, ಅಮೆರಿಕ, ಫ್ರಾನ್ಸ್‌, ಜಪಾನ್‌ ದೇಶಗಳು ಇಲ್ಲವೆ ನೆರೆಹೊರೆಯ ದೇಶದ ಅಧ್ಯಕ್ಷರನ್ನು ಅತಿಥಿಯಾಗಿ ಆಹ್ವಾನ ಮಾಡುತ್ತಿತ್ತು. ಇದೇ ಮೊದಲ ಬಾರಿಗೆ ಈಜಿಪ್ಟ್‌ ದೇಶದ ಅಧ್ಯಕ್ಷರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇಡೀ ಅರಬ್‌ ರಾಷ್ಟ್ರಗಳಲ್ಲಿ ಈಜಿಪ್ಟ್‌ ದೇಶದ ಜನಸಂಖ್ಯೆಯೇ ಅಧಿಕ. ಅಂದಾಜು 109.3 ಮಿಲಿಯನ್‌ ಜನಸಂಖ್ಯೆ ಈಜಿಪ್ಟ್‌ನಲ್ಲಿದೆ. ಭಾರತದ ಪ್ರತಿ ಹೆಜ್ಜೆಗೂ ತಿವಿದು ಮಾತನಾಡುವ ಇಸ್ಲಾಮಿಕ್‌ ರಾಷ್ಟ್ರಗಳ ಒಕ್ಕೂಟ (ಓಐಸಿ)ದಲ್ಲಿ ಈಜಿಪ್ಟ್‌ ಅತೀದೊಡ್ಡ ರಾಷ್ಟ್ರವಾಗಿರುವುದು ಮಾತ್ರವಲ್ಲ ಭಯೋತ್ಪಾದನೆ ಹಾಗೂ ಉಗ್ರವಾದದ ವಿರುದ್ಧ ಓಐಸಿಯಲ್ಲಿ ದೊಡ್ಡ ದನಿಯಾಗಿದೆ. ಭಾರತ ಮತ್ತು ಈಜಿಪ್ಟ್ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ 75 ವರ್ಷಗಳೂ ಆಗಿವೆ.

ಅರಬ್ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಭಾರತೀಯ ಮೂಲದ ಸಮೂಗಳು ಇಲ್ಲಿ ಬಲಿಷ್ಠವಾಗಿರುವುದಲ್ಲದೆ, ಬಹಳಷ್ಟು ಗೌರವಿಸಲ್ಪಡುತ್ತಾರೆ. ಸೌದಿ ಅರೇಬಿಯಾ ಮತ್ತು ಯುಎಇ ನಂತರ, ಭಾರತವು ಈಗ ಇಡೀ ಅರಬ್ ಜಗತ್ತಿನಲ್ಲಿ ವಿಶ್ವಾಸಾರ್ಹತೆಯನ್ನು ಸೃಷ್ಟಿಸಲು ಬಯಸಿದೆ. ಭಾರತವು ಎಲ್ಲಾ ಗಲ್ಫ್ ರಾಷ್ಟ್ರಗಳೊಂದಿಗೆ ಮತ್ತು ವಿಶೇಷವಾಗಿ ಸೌದಿ ಅರೇಬಿಯಾ, ಯುಎಇ ಮತ್ತು ಬಹ್ರೇನ್‌ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಈಜಿಪ್ಟ್ ಜೊತೆಯಲ್ಲೂ ಭಾರತ ನಿಕಟ ಸಂಬಂಧವನ್ನು ಹೊಂದಿದೆ. ಆದ್ದರಿಂದ, ಭಾರತವು ಗಲ್ಫ್ ರಾಷ್ಟ್ರಗಳಲ್ಲಿ ಪ್ರಮುಖ ಮಿಲಿಟರಿ, ಐಟಿ ಮತ್ತು ಟೆಕ್ನೋ ಪವರ್ ಆಗಬಹುದು. ಚೀನಾ ಕೂಡ ಇಲ್ಲಿ ತನ್ನ ಕಾಲು ಚಾಚಲು ಪ್ರಯತ್ನಿಸುತ್ತಿದೆ, ಆದರೆ ಅಮೆರಿಕ ಮತ್ತು ಯುರೋಪಿಯನ್ ದೇಶಗಳು ಇಲ್ಲಿ ಭಾರತ ದೊಡ್ಡ ಪಾತ್ರವನ್ನು ವಹಿಸಬೇಕೆಂದು ಬಯಸಿವೆ.

ಈಜಿಪ್ಟ್ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಅದರ ಹದಗೆಡುತ್ತಿರುವ ಆರ್ಥಿಕತೆಯಾಗಿದೆ. ಇತ್ತೀಚೆಗೆ, ಇದು ಐಎಂಎಫ್‌ನಿಂದ $3 ಶತಕೋಟಿ ಬೇಲ್ಔಟ್ ಪ್ಯಾಕೇಜ್ ಅನ್ನು ತೆಗೆದುಕೊಂಡಿದೆ. ಸೌದಿ ಅರೇಬಿಯಾ ಮತ್ತು ಯುಎಇ, ಈಜಿಪ್ಟ್ ಜೊತೆ ದೃಢವಾಗಿ ನಿಂತಿವೆ. ರಷ್ಯಾ-ಉಕ್ರೇನ್ ಯುದ್ಧದಿಂದ ಈಜಿಪ್ಟ್ ನಲ್ಲಿ ಆಹಾರ ಬಿಕ್ಕಟ್ಟು ಉಂಟಾದಾಗ ಭಾರತ 61 ಸಾವಿರ ಟನ್ ಗೋಧಿಯನ್ನು ರಫ್ತು ಮಾಡಿತ್ತು. ಸೌದಿ ಅರೇಬಿಯಾ ಇತ್ತೀಚೆಗೆ ಈಜಿಪ್ಟ್‌ಗೆ ಹೊಸ ಸಾಲವಾಗಿ $ 5 ಬಿಲಿಯನ್ ನೀಡಿದೆ. ಮಾರ್ಚ್ 2022 ರಿಂದ ಈಜಿಪ್ಟ್‌ನ ಕರೆನ್ಸಿ ಪೌಂಡ್ 50% ರಷ್ಟು ಕುಸಿತ ಕಂಡಿದೆ, ಆದರೆ ಸ್ನೇಹಪರ ದೇಶಗಳು ಅದನ್ನು ಡೀಫಾಲ್ಟ್ ಮಾಡಲು ಅನುಮತಿಸಲಿಲ್ಲ. ಹಣದುಬ್ಬರ ದರವು ಸುಮಾರು 25% ಆಗಿದೆ. ಡಿಸೆಂಬರ್ 2022 ರಲ್ಲಿ, ವಿದೇಶಿ ಸಾಲವು $ 170 ಶತಕೋಟಿ ಡಾಲರ್‌ಗೆ ತಲುಪಿದೆ. ವಿಶ್ವದ ದೇಶಗಳು ಈಜಿಪ್ಟ್‌ಗೆ ಬಹಿರಂಗವಾಗಿ ಸಹಾಯ ಮಾಡಲು ಮುಂದೆ ಬಂದಿವೆ ಏಕೆಂದರೆ ಅದು ವಿಶ್ವಾಸಾರ್ಹ ದೇಶವೆಂದು ಪರಿಗಣಿಸಲ್ಪಟ್ಟಿದೆ. ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಉಗ್ರವಾದದ ವಿರುದ್ಧ ಈಜಿಪ್ಟ್ ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. 

ಗಣತಂತ್ರದ ದಿನ ಕರ್ನಾಟಕ ಸ್ತಬ್ಧ ಚಿತ್ರ ಪ್ರದರ್ಶನ: ನಾರಿಶಕ್ತಿಯನ್ನು ಅಭಿನಂದಿಸಿದ ಜೋಶಿ

ಅದರೊಂದಿಗೆ ಈಜಿಪ್ಟ್‌ಗೆ ರಕ್ಷಣಾ ಕ್ಷೇತ್ರದಲ್ಲಿ ಯುದ್ದೋಪಕರಣಗಳ ಅಗತ್ಯ ಬಹಳವಾಗಿ ಇದೆ. ಭಾರತದಿಂದ ಈ ಸಹಾಯ ಸಿಗಬೇಕು ಎನ್ನುವ ನಿರೀಕ್ಷೆಯಲ್ಲಿ ಈಜಿಪ್ಟ್‌ ದೇಶವಿದೆ. ಸ್ವತಃ ಅಲ್‌ ಸಿಸಿ, ಸೇನಾ ಪಡೆಯಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿ ಆಗಿದ್ದಾರೆ. ಟರ್ಕಿಯಂಥ ಬಲಾಢ್ಯ ದೇಶಗಳನ್ನು ಎದುರಿಸಬೇಕಾದರೆ, ಸೇನಾ ಶಕ್ತಿ ಬಲಿಷ್ಠವಾಗಿರಬೇಕು ಎನ್ನುವುದು ಸಿಸಿಗೂ ತಿಳಿದಿದೆ. ಹಾಗಾಗಿ ಭಾರತದ ಸಹಾಯ ಕೂಡ ಈಜಿಪ್ಟ್‌ಗೆ ಅಗತ್ಯವಿದೆ.

ಬೆಂಗ್ಳೂರಲ್ಲಿ ಗಣರಾಜ್ಯೋತ್ಸವ: ಮಾಣಿಕ್ ಷಾ ಗ್ರೌಂಡ್‌ನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

ಇಂಥ ದೇಶವನ್ನು ಮತ್ತಷ್ಟು ಆಪ್ತವಾಗಿಸಿಕೊಂಡರೆ, ಭವಿಷ್ಯದ ದಿನಗಳಲ್ಲಿ ಇಸ್ಲಾಮಿಕ್‌ ರಾಷ್ಟ್ರಗಳ ಒಕ್ಕೂಟದಲ್ಲಿ ಭಾರತ ಪರ ನಿಲುವು ತಳೆಯಲು ಸಹಾಯವಾಗಬಹುದು ಎನ್ನುವುದು ಭಾರತದ ಯೋಚನೆಯಾಗಿದೆ. ಆ ಕಾರಣದಿಂದಾಗಿ ಈಜಿಪ್ಟ್‌ ದೇಶವನ್ನು ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾರತ ಅತಿಥಿಯಾಗಿ ಆಹ್ವಾನಿಸಿದೆ.

Follow Us:
Download App:
  • android
  • ios