ಮತ್ತೆ ತನ್ನ ಹಳೇ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ವಿಧಾನಸಭೆಗೆ ಸ್ಪರ್ಧೆ!
* ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವ ಸಾಧ್ಯತೆ
* ಈ ಮೊದಲು ಇದೇ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದ ಮಮತಾ
* ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದ ಮಮತಾ
ಕೋಲ್ಕತ್ತಾ(ಮೇ.22): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರೂ, ಸಿಎಂ ಹುದ್ದೆಗೇರಿರುವ ಮಮತಾ ಬ್ಯಾನರ್ಜಿ ಅಧಿಕೃತವಾಗಿ ವಿಧಾನಸಭೆ ಪ್ರವೇಶಿಸಲು ವೇದಿಕೆ ಸಿದ್ಧವಾಗಿದೆ. ಮಮತಾ ಬ್ಯಾನರ್ಜಿ ಅವರು ಭವಾನಿಪುರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಮೊದಲು ಮಮತಾ ಇದೇ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದರು. ಇದಕ್ಕೆ ಪೂರ್ವಭಾವಿಯಾಗಿ, ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಟಿಎಂಸಿ ಶಾಸಕ ಸೋಬನ್ದೇಬ್ ಚಟ್ಟೋಪಾಧ್ಯಾಯ ತಮ್ಮ ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.
'ಪ್ರಜಾಪ್ರಭುತ್ವಕ್ಕೆ ಮಮತಾ ಅಪಾಯಕಾರಿ, ಹಿಂಸೆ ಇದೆಯೇ ಹೊರತು ಅಭಿವೃದ್ಧಿ ಅಲ್ಲ!'
ಇನ್ನು ರಾಜೀನಾಮೆ ಸಲ್ಲಿಸಿರುವ ಸೋಬನ್ ಇದು ಪಕ್ಷದ ನಿರ್ಧಾರವಾಗಿದೆ. ನಾನು ಅದನ್ನು ಸಂತಸದಿಂದ ಪಾಲಿಸುತ್ತೇನೆ. ಭವಾನಿಪುರ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮಮತಾ, ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದರು. ನಿಯಮದ ಪ್ರಕಾರ, ಸರ್ಕಾರದಲ್ಲಿ ಮುಖ್ಯಮಂತ್ರಿ ಅಥವಾ ಬೇರೆ ಯಾವುದೇ ಸಚಿವ ಸ್ಥಾನಕ್ಕೆ ಆಯ್ಕೆಯಾದ ವ್ಯಕ್ತಿ, ಪದಗ್ರಹಣ ಮಾಡಿದ ಆರು ತಿಂಗಳ ಒಳಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಥವಾ ವಿಧಾನಪರಿಷತ್ ಮೂಲಕ ಶಾಸಕರಾಗಿ ಆಯ್ಕೆಯಾಗಬೇಕು. ಈ ನಿಟ್ಟಿನಲ್ಲಿ ಮಮತಾ ಈ ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ವಿಧಾನಸಭೆಗೆ ಪ್ರವೇಶಿಸಲು ಸಜ್ಜಾಗಿದ್ದಾರೆ.
ಮೋದಿ ಸಭೆಯಲ್ಲಿ ಡಿಎಂಗೆ ಮಾತನಾಡಲು ಬಿಡದೇ, ಕೇಂದ್ರ ಅವಮಾನಿಸಿದೆ ಎಂದ ದೀದೀ!
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಭಾರಿ ಬಹುಮತ ಪಡೆದಿದ್ದರೂ ಸಿಎಂ ಮಮತಾ ಬ್ಯಾನರ್ಜಿ ಸೋಲು ಟಿಎಂಸಿಗೆ ಮುಜುಗರ ಉಂಟುಮಾಡಿತ್ತು. ಅಲ್ಲದೇ ಮಮತಾ ಹುದ್ದೆಯನ್ನು ಉಳಿಸಿಕೊಳ್ಳಲು ಮತ್ತೆ ಚುನಾವಣೆ ಎದುರಿಸುವುದು ಅನಿವಾರ್ಯವಾಗಿತ್ತು. ಹೀಗಿರುವಾಗ ಅವರಿಗಾಗಿ ಯಾರು ತಮ್ಮ ಸ್ಥಾನ ತ್ಯಜಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿತ್ತು.