ಸೆಲ್ಫಿಗಾಗಿ ಹುಷಾರು ತಪ್ಪಿದ ಚಿರತೆಯ ಬೆನ್ನಟ್ಟಿ ಕಿರುಕುಳ: ಜನರ ವರ್ತನೆಗೆ IFS ಅಧಿಕಾರಿ ಆಕ್ರೋಶ
ಇಲ್ಲೊಂದು ಕಡೆ ಜನ ಮಾನವೀಯತೆ ಮರೆತು, ಅನಾರೋಗ್ಯಕ್ಕೀಡಾಗಿದ್ದ ಚಿರತೆಯೊಂದನ್ನು ಗ್ರಾಮಸ್ಥರು ಸೆಲ್ಫಿಗಾಗಿ ಛೇಸ್ ಮಾಡಿದ್ದು ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ಇದು ಸಾಮಾಜಿಕ ಜಾಲತಾಣಗಳ ಯುಗವಾಗಿದ್ದು, ಇಲ್ಲಿ ಪ್ರಚಾರ ಗಿಟ್ಟಿಸಲು ಕೆಲವರು ಎಂತಹ ಕೆಳ ಮಟ್ಟಕ್ಕೂ ಇಳಿಯುತ್ತಾರೆ. ಒಂದು ಸೆಲ್ಫಿ ಒಂದು ಶೇರ್ ಒಂದು ಕಾಮೆಂಟ್ಗಾಗಿ ಕೆಲವರು ಮುಗ್ದ ಪ್ರಾಣಿಗಳಿಗೂ ಕಿರುಕುಳ ನೀಡುತ್ತಾರೆ. ವೀಡಿಯೋ ಮಾಡುವುದಕ್ಕಾಗಿ ಮನೆಯಲ್ಲೇ ಹಾವು ಸಾಕಿದ್ದ ಯೂಟ್ಯೂಬರ್ (Youtuber) ಓರ್ವನನ್ನು ವರ್ಷದ ಹಿಂದೆ ಪೊಲೀಸರು ಬಂಧಿಸಿದ್ದರು. ಕೆಲ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ವೀಡಿಯೋಗಾಗಿ ಈ ರೀತಿ ಮಾಡುತ್ತಿದ್ದರೆ, ಮತ್ತೆ ಕೆಲ ಜನ ಸಾಮಾನ್ಯರು ವಿಭಿನ್ನ ಎನಿಸಿದ ಸೆಲ್ಫಿಗಾಗಿ ಮೂಕ ಪ್ರಾಣಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ ಜನ ಮಾನವೀಯತೆ ಮರೆತು, ಅನಾರೋಗ್ಯಕ್ಕೀಡಾಗಿದ್ದ ಚಿರತೆಯೊಂದನ್ನು ಗ್ರಾಮಸ್ಥರು ಸೆಲ್ಫಿಗಾಗಿ ಛೇಸ್ ಮಾಡಿದ್ದು ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ (IFS Officer) ಪರ್ವಿನ್ ಕಸ್ವಾನ್ ಅವರು ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಜನರ ವರ್ತನೆ ಆಕ್ರೋಶಕ್ಕೆ ಕಾರಣವಾಗಿದೆ. 11 ಸೆಕೆಂಡ್ಗಳ ವೀಡಿಯೋದಲ್ಲಿ ಚಿರತೆ ಸಾಗುತ್ತಿದ್ದರೆ ಅದರ ಬೆನ್ನು ಸವರುತ್ತ ಓರ್ವ ಹೋಗುತ್ತಿದ್ದರೆ, ಅವನ ಜೊತೆಗೆ ಊರವರು ಕೂಡ ಸಾಗುತ್ತಿದ್ದಾರೆ. ಯುವಕ ಚಿರತೆಯ ಬೆನ್ನ ಮೇಲೆ ಕೈ ಹಾಕಿ ಹಿಡಿದುಕೊಂಡಿರುವ ಕಾರಣಕ್ಕೆ ಚಿರತೆಗೆ ನಡೆಯಲು ಕಷ್ಟವಾಗುತ್ತಿದ್ದು, ಅದು ಕಾಲೆಳೆಯುತ್ತಾ ಮುಂದೆ ಸಾಗುತ್ತಿದೆ. ಅಲ್ಲೇ ಇದ್ದ ಕೆಲವರು ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಚಿರತೆಗೇ ಹುಟ್ಟುಹಬ್ಬ ಮಾಡಿದ ಡಾ.ಬ್ರೋ: ಅಬ್ಬಬ್ಬೋ ಅಂತಿದ್ದಾರೆ ಫ್ಯಾನ್ಸ್!
ವೀಡಿಯೋ ಪೋಸ್ಟ್ ಮಾಡಿರುವ ಕಸ್ವಾನ್ (Parveen Kaswan) ಅವರು, ಈ ವೀಡಿಯೋದಲ್ಲಿ ಮನುಷ್ಯರನ್ನು ಗುರುತಿಸಿ ಎಂದು ವ್ಯಂಗ್ಯವಾಗಿ ಬರೆದು ಮನುಷ್ಯರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ವನ್ಯಜೀವಿಗಳಿಗೆ ತೊಂದರೆ ನೀಡಬೇಡಿ ಅವುಗಳು ಸಿಟ್ಟಿಗೆದ್ದರೆ ಬಲು ಅಪಾಯಕಾರಿ ಎಂದು ಕಸ್ವಾನ್ ಬರೆದಿದ್ದಾರೆ. ಮಧ್ಯಪ್ರದೇಶದ ಮಲ್ವಾ ಪ್ರದೇಶದ ದೇವಸ್ನಲ್ಲಿ ಈ ಘಟನೆ ನಡೆದಿದೆ.
ವೀಡಿಯೋ ನೋಡಿದ ಅನೇಕರು ಮನುಷ್ಯರ ಈ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಲ್ಲಿ ಪ್ರಾಣಿ ಮನುಷ್ಯರಂತೆ (Wild Animal) ವರ್ತಿಸಿದರೆ ಮನುಷ್ಯರು ಪ್ರಾಣಿಗಳಂತೆ ವರ್ತಿಸುತ್ತಿದ್ದಾರೆ. ಇಲ್ಲಿ ಚಿರತೆ ಏಕೆ ಇಷ್ಟೊಂದು ಸಮಾಧಾನದಿಂದ ಇದೆ ಎಂಬುದು ಅರ್ಥವಾಗುತ್ತಿಲ್ಲ, ಆದರೆ ಅದು ಮನುಷ್ಯರಿಗೆ ಆಟವಾಡಲು ಬಿಟ್ಟಿರುವುದಂತು ಅಲ್ಲ, ಬಹುಶಃ ಅದು ಗಾಯಗೊಂಡಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ದೃಶ್ಯ ನೋಡಲು ತುಂಬಾ ಬೇಸರವಾಗುತ್ತಿದೆ. ಈ ಚಿರತೆಗೇನಾಯಿತು ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಚಿರತೆ ಹೇಗೆ ಇಷ್ಟು ಸಮಾಧಾನದಿಂದ ಇರಲು ಸಾಧ್ಯ ಎಂದು ಅಚ್ಚರಿಯಾಗುತ್ತಿದೆ, ಬಹುಶಃ ಇದು ಗಾಯಗೊಂಡಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಚಿರತೆ ಬಾಯಿಗೆ ಹೂಸು ಬಿಟ್ಟು ಪ್ರಾಣ ಉಳಿಸಿಕೊಂಡ ಕಾಡುಕತ್ತೆ: ವಿಡಿಯೋ ವೈರಲ್