ಕೂಡಿ ಉಂಡರೆ ಸ್ವರ್ಗ: ಬಡವನ ಜೊತೆ ಉಂಡ ಪೊಲೀಸ್, ವಿಡಿಯೋ ವೈರಲ್!
ಉಪವಾಸ ಸತ್ಯಾಗ್ರಹ| ಹಸಿದಿದ್ದ ವ್ಯಕ್ತಿಯೊಂದಿಗೆ ಊಟ ಹಂಚಿಕೊಂಡ ಪೊಲೀಸ್| ವೈರಲ್ ಆಯ್ತು ವಿಡಿಯೋ
ತಿರುವನಂತಪುರಂ[ಡಿ.19]: ಕೇರಳ ಪೊಲೀಸ್ ಅಧಿಕಾರಿ ಎಸ್ ಎಸ್ ಶ್ರೀಜಿತ್ ರವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ಪೊಲೀಸ್ ಅಧಿಕಾರಿಯನ್ನು ದಿನ ಬೆಳಗಾಗುವಷ್ಟರಲ್ಲಿ ಹೀರೋ ಆಗಿಸಿದೆ.
30 ವರ್ಷದ ಪೊಲೀಸ್ ಅಧಿಕಾರಿಯೊಬ್ಬರು, ಉಪವಾಸ ಸತ್ಯಾಗ್ರಹದಂದು ವ್ಯಕ್ತಿಯೊಬ್ಬರೊಂದಿಗೆ ತಮ್ಮ ಮಧ್ಯಾಹ್ನದ ಊಟ ಹಂಚಿ ತಿನ್ನುತ್ತಿರುವ ವಿಡಿಯೋ ಇದಾಗಿದೆ. ಸೋಮವಾರದಂದು ತಿರುವನಂತಪುರಂನಲ್ಲಿ ಉಪವಾಸ ಸತ್ಯಾಗ್ರಹ ನಡೆದಿತ್ತು. ಇದೇ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. 'ಸ್ಟೇಟ್ ಪೊಲೀಸ್ ಮೀಡಿಯಾ ಸೆಂಟರ್, ಕೇರಳ' ಈ ಫೆಸ್ಟ ಬುಕ್ ಖಾತೆಯಿಂದ ವಿಡಿಯೋ ಶೇರ್ ಮಾಡಲಾಗಿದೆ.
ಕೇರಳದ ರಾಜ್ಯ ಪೊಲೀಸ್ ನಿರ್ದೇಶಕ ಜನರಲ್ ಲೋಕನಾಥ್ ಬೆಹ್ರಾ ಇಂತಹ ಮಾನವೀಯತೆ ಮೆರೆದ ಶ್ರೀಜಿತ್ ರನ್ನು ಅಭಿನಂದಿಸಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಶ್ರೀಜಿತ್ 'ನಾನು ಊಟದ ಪ್ಯಾಕೆಟ್ ತೆರೆಯಬೇಕು ಎನ್ನುವಷ್ಟರಲ್ಲಿ ಒಬ್ಬ ವ್ಯಕ್ತಿ ನನ್ನನ್ನೇ ನೋಡುತ್ತಿರುವುದು ಗಮನಕ್ಕೆ ಬಂತು. ಅವರು ಹಸಿವಿನಿಂದಿದ್ದಾರೆಂದು ನನಗೆ ತಿಳಿಯಿತು. ನಿಮಗೆ ಹಸಿವಾಗಿದೆಯಾ ಎಂದು ಕೇಳಿದಾಗ ಹೌದು ಎಂದಿದ್ದಾರೆ. ಹೀಗಾಗಿ ನನ್ನೊಂದಿಗೆ ಊಟ ಮಾಡಲು ಹೇಳಿದೆ. ಮೊದಲು ಆತ ಹಿಂಜರಿದ ಆದರೆ ನಾನು ಒತ್ತಾಯಿಸಿದಾಗ ಊಟ ಮಾಡಿದ' ಎಂದಿದ್ದಾರೆ.