Asianet Suvarna News Asianet Suvarna News

ಹಸುವಿಗೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾದ ವಂದೇಭಾರತ್‌ ಎಕ್ಸ್‌ಪ್ರೆಸ್‌!

ಭಾರತದಲ್ಲಿ ಈವರೆಗಿನ ಹೈಸ್ಪೀಡ್‌ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಗುರುವಾರ ಬೆಳಗ್ಗೆ ಹಸುಗಳ ಹಿಂಡಿಗೆ ಡಿಕ್ಕಿಯಾಗಿ ನುಜ್ಜುಗುಜ್ಜಾಗಿದೆ. ಡಿಕ್ಕಿಯಾದ ರಭಸಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಸಂಪೂರ್ಣ ಮುಂಭಾಗ ಪುಡಿಪುಡಿಯಾಗಿದ್ದು, ಇದರಿಂದಾಗಿ 20 ನಿಮಿಷಗಳ ಕಾಲ ರೈಲು ಟ್ರ್ಯಾಕ್‌ನಲ್ಲಿಯೇ ನಿಂತಿತ್ತು. ಪ್ರಸ್ತುತ ರೈಲಿನಲ್ಲಿ ನುಜ್ಜುಗುಜ್ಜಾದ ಬಲಭಾಗದ ಭಾಗವನ್ನು ರಿಪೇರಿ ಮಾಡಲಾಗಿದೆ.
 

Victim of Vande Bharat Express accident front part damaged after hitting animal san
Author
First Published Oct 6, 2022, 4:33 PM IST

ಅಹಮದಾಬಾದ್‌(ಅ.6):  ಭಾರತದ ಅತ್ಯಂತ ಆಧುನಿಕ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿರುವ ಹೊಸ ತಲೆಮಾರಿನ ಹೈ ಸ್ಪೀಡ್ ವಂದೇ ಭಾರತ್ ರೈಲು ಗುರುವಾರ ಬೆಳಗ್ಗೆ 11.18ಕ್ಕೆ ಅಪಘಾತಕ್ಕೀಡಾಗಿದೆ. ಈ ರೈಲು ವತ್ವಾ ಮತ್ತು ಮಣಿನಗರ ನಿಲ್ದಾಣಗಳ ಬಳಿ ಪ್ರಾಣಿಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಈ ರೈಲು ಮುಂಬೈನಿಂದ ಅಹಮದಾಬಾದ್‌ಗೆ ಹೋಗುವ ವೇಳೆ ಘಟನೆ ನಡೆದಿದೆ. ಅಪಘಾತದ ವೇಳೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂಭಾಗದ ಭಾಗ ನುಜ್ಜುಗುಜ್ಜಾಗಿದೆ. ಅಹಮದಾಬಾದ್ ರೈಲ್ವೆ ಪಿಆರ್‌ಒ ಜಿತೇಂದ್ರ ಜಯಂತ್ ಪ್ರಕಾರ, ಈ ಅಪಘಾತವು ಬೆಳಿಗ್ಗೆ 11.15 ರ ಸುಮಾರಿಗೆ ಸಂಭವಿಸಿದೆ. ಅಪಘಾತದ ನಂತರ ರೈಲು 20 ನಿಮಿಷಗಳ ಕಾಲ ರೈಲು ಟ್ರ್ಯಾಕ್‌ನಲ್ಲಿಯೇ ನಿಂತಿತ್ತು. ಸದ್ಯ ರೈಲನ್ನು ದುರಸ್ತಿ ಮಾಡಿ ಕಳುಹಿಸಲಾಗಿದೆ. ಈ ವಂದೇ ಭಾರತ್ ರೈಲನ್ನು ಸೆಪ್ಟೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು. ಈ ರೈಲು ಗಂಟೆಗೆ 180 ರಿಂದ 200 ಕಿಮೀ ವೇಗದಲ್ಲಿ ಚಲಿಸಲಿದ್ದು, ಪ್ರಸ್ತುತ ದೇಶದಲ್ಲಿ ಮೂರು ವಂದೇ ಭಾರತ್‌ ರೈಲುಗಳು ಸಂಚಾರದಲ್ಲಿವೆ. ಈವರೆಗೂ ದೇಶದಲ್ಲಿ ವಂದೇ ಭಾರತ್ ರೈಲುಗಳು ನವದೆಹಲಿ ಮತ್ತು ವಾರಣಾಸಿ ಮತ್ತು ನವದೆಹಲಿ ಮತ್ತು ಮಾತಾ ವೈಷ್ಣೋ ದೇವಿ ಕತ್ರಾ ನಡುವೆ ಓಡುತ್ತಿವೆ. ಈ ರೈಲು ಗಾಂಧಿನಗರದಿಂದ ಮುಂಬೈಗೆ ಅಹಮದಾಬಾದ್ ಮೂಲಕ ಹೋಗುತ್ತದೆ ಮತ್ತು ನಂತರ ಈ ಮಾರ್ಗವಾಗಿ ಗಾಂಧಿನಗರಕ್ಕೆ ಹಿಂತಿರುಗುತ್ತದೆ.

ದೇಶದಲ್ಲಿ ಇನ್ನೂ 400 ವಂದೇ ಭಾರತ್‌ ರೈಲುಗಳು: ದೇಶದಾದ್ಯಂತ 400 ವಂದೇ ಭಾರತ್ ಹೈಸ್ಪೀಡ್‌ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಸಿದ್ಧತೆ ನಡೆಸಿದೆ. ವಂದೇ ಭಾರತ್ ರೈಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ರೈಲುಗಳಾಗಿದೆ.   ಇವುಗಳಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆಗಳು, ಸಿಸಿಟಿವಿ ಕ್ಯಾಮೆರಾಗಳು, ನಿರ್ವಾತ ಆಧಾರಿತ ಜೈವಿಕ ಶೌಚಾಲಯಗಳು, ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಪ್ರತಿ ಕೋಚ್‌ನಲ್ಲಿ ನಾಲ್ಕು ತುರ್ತು ಪುಶ್ ಬಟನ್‌ಗಳು ಸೇರಿವೆ.

Vande Bharat Express Train: ಬೆಂಗಳೂರು- ಹುಬ್ಬಳ್ಳಿ ನಡುವೆ ಅತಿವೇಗದ ವಂದೇ ಭಾರತ್‌ ರೈಲು

ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಸೆಪ್ಟೆಂಬರ್ 30 ರಂದು ಅನಾವರಣ ಮಾಡಿದರು. ಅದರಲ್ಲಿ ಗಾಂಧಿನಗರದಿಂದ (Gandhinagar) ಅಹಮದಾಬಾದ್‌ಗೂ (Ahemadabad) ಪ್ರಯಾಣಿಸಿದ್ದಾರೆ. ಈ ರೈಲಿನ (Vande Bharath Train) ಪ್ರತಿಯೊಂದು ಕೋಚ್‌ನಲ್ಲಿ ಬ್ಯಾಕ್ಟೀರಿಯಾ ಮುಕ್ತ ಹವಾನಿಯಂತ್ರಣ ವ್ಯವಸ್ಥೆ ಇರಲಿದೆ. ಪ್ರತಿ ಕೋಚ್‌ನಲ್ಲಿ ತುರ್ತು ಪರಿಸ್ಥಿತಿಗಳಿಗಾಗಿ ನಾಲ್ಕು ದೀಪಗಳಿವೆ. ಅದೇ ಸಮಯದಲ್ಲಿ, ಲೊಕೊಪೈಲಟ್ ಮತ್ತು ಪ್ರಯಾಣಿಕರ ನಡುವೆ ಸಂವಹನದ ಸೌಲಭ್ಯವೂ ಇದೆ.ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸುಮಾರು 1600 ಕೋಚ್‌ಗಳನ್ನು ಮರಾಠವಾಡ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಪ್ರತಿಯೊಂದು ಕೋಚ್‌ಗೆ 8 ರಿಂದ 9 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಕಾರಣದಿಂದಾಗಿ, ಕಾರ್ಖಾನೆಯಲ್ಲಿ ಅಗತ್ಯ ಬದಲಾವಣೆಗಳು ಪ್ರಾರಂಭವಾಗಿವೆ. 

Indian Railways: ರೈಲು ಪ್ರಯಾಣದ ಅನುಭವ ಹೆಚ್ಚಿಸಲು ಸಿದ್ಧವಾದ ವಂದೇ ಭಾರತ್ 2..! ವೈಶಿಷ್ಟ್ಯಗಳು ಹೀಗಿವೆ..

ವತ್ವಾ ಬಳಿಯ ಮಾರ್ಗದಲ್ಲಿ ಎದುರಿನ ಪ್ರದೇಶ ಕಾಣಿಸಿದಂಥ ಒಂದು ತಿರುವಿನ ಪ್ರದೇಶವಿದೆ. ಈ ವೇಳೆ ಹಸುಗಳ ಹಿಂಡು ಹಳಿಯ ಮೇಲಿತ್ತು. ರೈಲು ಅಂದಾಜು 100 ಕಿಲೋಮೀಟರ್‌ ವೇಗದಲ್ಲಿತ್ತು. ವೇಗವಾಗಿ ಈ ಹಿಂಡಿಗೆ ರೈಲು ಬಡಿದಿದೆ. ಇದರಿಂದಾಗಿ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (Integral Coach Factory) ನಿರ್ಮಾಣ ಮಾಡಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ಫೈಬರ್‌ ವಿನ್ಯಾಸಗಳು ಹಾನಿಗೆ ಒಳಗಾಗಿವೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಘಟನೆಯಲ್ಲಿ ರೈಲಿನ ಚಲನೆಗೆ ಹಾನಿಯಾಗುವಂತ ಯಾವುದೇ ಅಪಾಯ ಸಂಭವಿಸಿಲ್ಲ. ಸಾವಿಗೀಡಾದ ಹಸುಗಳ ಮೃತದೇಹಗಳನ್ನು ಪಕ್ಕಕ್ಕೆ ಸರಿಸಿದ ಬಳಿಕ ರೈಲು ಮುಂದುವರಿಯಿತು. ಇದರಿಂದಾಗಿ 20 ನಿಮಿಷಗಳ ಕಾಲ ತಡವಾದರೂ, ನಿಗದಿತ ಪ್ರದೇಶಕ್ಕೆ ರೈಲು ನಿಗದಿತ ಸಮಯದಲ್ಲಿ ಹೋಗಿ ಮುಟ್ಟಿರುವುದು ವಿಶೇಷ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಅದಲ್ಲದೆ, ಸ್ಥಳೀಯ ಗ್ರಾಮಸ್ಥರಿಗೆ ಹಸುಗಳನ್ನು ರೈಲ್ವೇ ಟ್ರ್ಯಾಕ್‌ನ ಬಳಿ ಬಿಡದಂತೆ ಮನವಿಯನ್ನೂ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಡಿದ್ದಾರೆ.

Follow Us:
Download App:
  • android
  • ios