ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಆರೋಗ್ಯದ ಕಾರಣದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಹಲವರು ಧನ್ಕಕರ್ ದಿಢೀರ್ ರಾಜೀನಾಮೆ ಹಿಂದೆ ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ರಾಜೀನಾಮೆಗೆ ಆರೋಗ್ಯ ಕಾರಣವಾಗಿದೆಯಾ, ಕಳೆದ ತಿಂಗಳು ಏನಾಗಿತ್ತು?

ನವದೆಹಲಿ (ಜು.22) ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರಾಜೀನಾಮೆ ನೀಡಿದ್ದಾರೆ. ಇನ್ನು ಸರಿಸುಮಾರು 2 ವರ್ಷಗಳ ಕಾಲ ಉಪರಾಷ್ಟ್ರಪತಿ ಅವಧಿ ಬಾಕಿ ಇದ್ದರೂ ಧನ್ಕರ್ ಆರೋಗ್ಯದ ಕಾರಣದಿಂದ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಬರೆದ ರಾಜೀನಾಮೆ ಪತ್ರದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಸಲಹೆಗಳಿಂದ ಈ ತಕ್ಷಣದಿಂದ ರಾಜೀನಾಮೆ ನೀಡುವುದಾಗಿ ಉಲ್ಲೇಖಿಸಿದ್ದಾರೆ. ಮಳೆಗಾಲದ ಅಧಿವೇಶನನ ಆರಂಭಗೊಂಡಿದೆ. ಇದು ಸಭಾಪತಿಯಾಗಿ ಜವಾಬ್ದಾರಿ ನಿರ್ವಹಿಸಿದ್ದ ಜಗದೀಪ್ ಧನ್ಕರ್ ರಾತ್ರಿ ವೇಳೆಗೆ ರಾಜೀನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಹಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಧನ್ಕರ್ ರಾಜೀನಾಮೆಗೆ ನಿಖರ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

Add Asianetnews Kannada as a Preferred SourcegooglePreferred

ಧನ್ಕರ್ ಮೇಲ್ನೋಟಕ್ಕೆ ಆರೋಗ್ಯವಾಗಿರುವಂತೆ ಕಾಣುತ್ತಿದೆ. ಹಲವು ಕಾರ್ಯಕ್ರಮಗಳಲ್ಲೂ ಧನ್ಕರ್ ಪಾಲ್ಗೊಳ್ಳುತ್ತಿದ್ದಾರೆ. ಹೀಗಿರುವಾಗ ಧನ್ಕರ್ ರಾಜೀನಾಮೆಗೆ ಅಸಲಿ ಕಾಣವೇನು ಎಂದು ಪ್ರಶ್ನಿಸುತ್ತಿದ್ದಾರೆ. ಬಿಜೆಪಿಯ ಮೊದಲ ವಿಕೆಟ್ ಪತನ ಎಂದು ಬಿಂಬಿಸಲಾಗುತ್ತಿದೆ. ಆದರೆ ಕಳೆದ ತಿಂಗಳ ಘಟನೆ ಈ ಸಂದರ್ಭದಲ್ಲಿ ಚರ್ಚೆಯಾಗುತ್ತಿದೆ.

ಜೂನ್ ತಿಂಗಳಲ್ಲಿ ನಡೆದ ಘಟನೆ ಏನು?

ದೇಶದ ಪ್ರಸಿದ್ಧ ಗಿರಿಧಾಮ ನೈನಿತಾಲ್‌ಗೆ ಕಳೆದ ತಿಂಗಳು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಭೇಟಿ ನೀಡಿದ್ದರು. ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ಧನ್ಕರ್ ಭಾಷಣ ಮಾಡಿದ್ದರು. ಆದರೆ ಭಾಷಣದ ಮಾಡಿದ ಬಳಿಕ ಕುಸಿದು ಬಿದ್ದರು. ಧನ್ಕರ್ ಜೊತೆಗಿದ್ದ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದರು. ಸ್ವಲ್ಪ ಸಮಯದಲ್ಲೇ ಅವರು ಚೇತರಿಸಿಕೊಂಡಿದ್ದರು. ಕುಸಿದು ಬಿದ್ದ ಬೆನ್ನಲ್ಲೇ ತಕ್ಷಣವೇ ಚಿಕಿತ್ಸೆ ನೀಡಲಾಗಿತ್ತು. ಬಳಿಕ ರಾಜಭವನಕ್ಕೆ ಕರೆದೊಯ್ಯಲಾಗಿತ್ತು. ಉಪರಾಷ್ಟ್ರಪತಿಯವರ ಅಸ್ವಸ್ಥತೆಯಿಂದ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಆತಂಕ ಮೂಡಿತ್ತು. ಇದೇ ವೇಳೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರು.

ಅಂದು ಏನಾಯ್ತು?

ಕುಮಾವೂನ್ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿಯವರ ಜೊತೆಗೆ ಮಾಜಿ ಸಂಸದ ಮತ್ತು ಉತ್ತರಾಖಂಡ ಹೈಕೋರ್ಟ್‌ನ ವಕೀಲ ಮಹೇಂದ್ರ ಸಿಂಗ್ ಪಾಲ್ ಕೂಡ ಹಾಜರಿದ್ದರು. 1989 ರಲ್ಲಿ ಧನ್ಕರ್ ಮತ್ತು ಮಹೇಂದ್ರ ಇಬ್ಬರೂ ಸಂಸದರಾಗಿದ್ದರು. ನೈನಿತಾಲ್‌ನಿಂದ ಮಹೇಂದ್ರ ಮತ್ತು ರಾಜಸ್ಥಾನದ ಝುನ್‌ಝುನುನಿಂದ ಧನ್ಕರ್ ಆಯ್ಕೆಯಾಗಿದ್ದರು. ಅಂದಿನಿಂದ ಅವರಿಬ್ಬರೂ ಗೆಳೆಯರು. ತಮ್ಮ ಹಳೆಯ ಗೆಳೆಯನನ್ನು ನೋಡಿದ ಧನ್ಕರ್ ಭಾವುಕರಾದರು. ಮಾತನಾಡುವಾಗ ತಮ್ಮ ಗೆಳೆಯನ ಭುಜದ ಮೇಲೆ ತಲೆ ಇಟ್ಟು ಕುಸಿದು ಬಿದ್ದರು. ತಕ್ಷಣ ವೈದ್ಯರು ಚಿಕಿತ್ಸೆ ನೀಡಲಾಗಿತ್ತು.

ಮೂರು ದಿನಗಳ ನೈನಿತಾಲ್ ಪ್ರವಾಸ

ಮೂರು ದಿನಗಳ ಪ್ರವಾಸಕ್ಕಾಗಿ ನೈನಿತಾಲ್‌ಗೆ ಬಂದ ಉಪರಾಷ್ಟ್ರಪತಿಯವರು ಮೊದಲ ದಿನವೇ ಅಸ್ವಸ್ಥರಾದರು. ಆದರೆ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿರಲಿಲ್ಲ. ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದರು. ಕುಸಿದು ಬಿದ್ದ ಕಾರಣ ಬಹಿರಂಗವಾಗಿರಲಿಲ್ಲ. 74 ವರ್ಷದ ಧನ್ಕರ್ 2019 ರಿಂದ 2022 ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದರು. ಅದಕ್ಕೂ ಮೊದಲು 1989 ರಿಂದ 1991 ರವರೆಗೆ ಝುನ್‌ಝುನುನಿಂದ ಸಂಸದರಾಗಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿಯೂ ಕೆಲಸ ಮಾಡಿದ್ದರು.