ಜೋಶಿಮಠದಲ್ಲಿ ಎರಡು ಐಷಾರಾಮಿ ಹೋಟೆಲ್ ನೆಲಸಮ, ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್!
ಮುಳುಗಡೆ ವಲಯ ಎಂದು ಘೋಷಣೆಯಾಗಿರುವ ಜೋಶಿಮಠದಲ್ಲಿ ಎರಡು ಐಷಾರಾಮಿ ಹೋಟೆಲ್ಗಳನ್ನು ನೆಲಸಮ ಮಾಡುವ ಕಾರ್ಯ ಆರಂಭವಾಗಿದೆ. ಅದಕ್ಕಾಗಿ ಎರಡು ಬುಲ್ಡೋಜರ್ಗಳು ಕೂಡ ಬಂದಿವೆ. ಈ ನಡುವೆ ಸುಪ್ರೀಂ ಕೋರ್ಟ್ ಪ್ರಕರಣದ ತುರ್ತು ವಿಚಾರಣೆಯನ್ನು ನಿರಾಕರಿಸಿದೆ.
ಡೆಹ್ರಾಡೂನ್ (ಜ.10): ಭೂಕುಸಿತ ವಲಯ ಎಂದು ಘೋಷಣೆಯಾಗಿರುವ ಉತ್ತರಾಖಂಡದ ಜೋಶಿಮಠದಲ್ಲಿ ಎರಡು ಹೋಟೆಲ್ಗಳನ್ನು ನೆಲಸಮ ಮಾಡುವ ಕೆಲಸ ಮಂಗಳವಾರ ಆರಂಭವಾಗಿದೆ. ಇಲ್ಲಿನ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಜ್ಞರ ತಂಡ ಈ ನಿರ್ಧಾರ ಕೈಗೊಂಡಿದೆ. ಐಷಾರಾಮಿ ಹೋಟೆಲ್ಗಳಾದ ಮಲಾರಿ ಇನ್ ಮತ್ತು ಹೋಟೆಲ್ ಮೌಂಟ್ ವ್ಯೂ ಪೈಕಿ ಮಲಾರಿ ಇನ್ ಅನ್ನು ಮೊದಲು ಕೆಡವಲಾಗುತ್ತದೆ. ಇವೆರಡೂ 5-6 ಅಂತಸ್ತಿನ ಹೋಟೆಲ್ಗಳಾಗಿವೆ. ಬುಲ್ಡೋಜರ್ಗಳೊಂದಿಗೆ ತಂಡಗಳು ಸ್ಥಳಕ್ಕೆ ತಲುಪಿವೆ. ಅವುಗಳನ್ನು ಕೆಡವುವ ಕೆಲಸವನ್ನು ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್ಐ) ಮೇಲ್ವಿಚಾರಣೆಯಲ್ಲಿ ಮಾಡಲಾಗುತ್ತದೆ. ಎಸ್ಡಿಆರ್ಎಫ್ ತಂಡವೂ ಸ್ಥಳದಲ್ಲಿಯೇ ಇದೆ.
ಎರಡು ಹೋಟೆಲ್ಗಳನ್ನು ಕೆಡವಲು ಕ್ರಿಯಾ ಯೋಜನೆ ಸಿದ್ಧ ಮಾಡಿದ ಎಸ್ಡಿಆರ್ಎಫ್: ಮಲಾರಿ ಇನ್ ಮತ್ತು ಹೋಟೆಲ್ ಮೌಂಟ್ ವ್ಯೂ ಅನ್ನು ಭೂಕುಸಿತ ಹಿನ್ನಲೆಯಲ್ಲಿ ಕೆಡವಲಾಗುತ್ತದೆ. ಮಂಗಳವಾರ ಹೋಟೆಲ್ ಮಲಾರಿ ಇನ್ ಅನ್ನು ಕೆಡವಲು ತಂಡ ನಿರ್ಧರಿಸಿದೆ ಎಂದು ಎಸ್ಡಿಆರ್ಎಫ್ ಕಮಾಂಡೆಂಟ್ ಮಣಿಕಾಂತ್ ಮಿಶ್ರಾ ಹೇಳಿದ್ದಾರೆ. ಮೊದಲು ಮೇಲಿನ ಭಾಗವನ್ನು ಕೆಡವಲಾಗುತ್ತದೆ. ಎರಡೂ ಹೋಟೆಲ್ಗಳು ಒಂದಕ್ಕೊಂದು ಹತ್ತಿರ ಬಂದಿವೆ. ಸುತ್ತಲೂ ಮನೆಗಳಿದ್ದು, ಇದನ್ನು ನೆಲಸಮ ಮಾಡುವುದು ಅನಿವಾರ್ಯವಾಗಿದೆ. ಹೋಟೆಲ್ ಮತ್ತಷ್ಟು ಬಿರುಕುಬಿಟ್ಟರೆ, ಅದು ತಾನಾಗಿಯೇ ಕುಸಿಯುತ್ತದೆ. ಎಸ್ಡಿಆರ್ಎಫ್ ಅನ್ನು ನಿಯೋಜಿಸಲಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಧ್ವನಿವರ್ಧಕಗಳ ಮೂಲಕ ಜನರಿಗೆ ಸೂಚನೆ ನೀಡಲಾಗುತ್ತಿದೆ.
ಅದರೊಂದಿಗೆ ಇಂದು ಗೃಹ ಸಚಿವಾಲಯದ ತಂಡ ಜೋಶಿಮಠಕ್ಕೆ ಆಗಮಿಸಿ ಭೂಕುಸಿತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಲನೆ ಮಾಡಲಿದೆ. ಅದರ ನಡುವೆ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಯ, ಜನವರಿ 16ರಂದು ವಿಚಾರಣೆ ನಡೆಯಲಿದ್ದು, ಜನವರಿ 22ರಿಂದ ಸ್ವಾಮಿಯೂ ಯಾಗ ಕೂಡ ನಡೆಸಲಿದ್ದಾರೆ. 478 ಮನೆಗಳು ಮತ್ತು 2 ಹೋಟೆಲ್ಗಳನ್ನು ಕೆಡವಲು ಗುರುತಿಸಲಾಗಿದೆ. ಇಲ್ಲಿಯವರೆಗೆ 81 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್: ಮಂಗಳವಾರದಂದು ಜೋಶಿಮಠ ಭೂ ಕುಸಿತದ ಘಟನೆಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಮತ್ತು ಜನವರಿ 16 ರಂದು ವಿಚಾರಣೆಯನ್ನು ಮುಂದೂಡಿದೆ. ಮುಖ್ಯವಾದ ಎಲ್ಲ ವಿಚಾರಗಳಿಗೂ ಸುಪ್ರೀಂ ಕೋರ್ಟ್ಗೆ ಬರಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ.
ಜೋಶಿಮಠದಲ್ಲಿ ಮತ್ತೆ 68 ಮನೆಗಳು ಬಿರುಕು: ಊರು ಬಿಡಲು ನಿವಾಸಿಗಳ ಹಿಂದೇಟು; 4000 ಜನರು ಶಿಫ್ಟ್
‘ಜನರ ಅನುಕೂಲಕ್ಕಾಗಿ ಕಟ್ಟಡ ಕೆಡವಬೇಕಾದರೆ ನಾನು ಖಂಡಿತವಾಗಿ ಸರ್ಕಾರದ ಜೊತೆಗೆ ಇದ್ದೇನೆ. ಅದು ಸಣ್ಣ ಬಿರುಕು ಆಗಿದ್ದರೂ, ನೆಲಸಮ ಮಾಡುವುದೇ ಸೂಕ್ತ' ಎಂದು ಹೋಟೆಲ್ ಮಲಾರಿ ಇನ್ ಮಾಲೀಕ ಠಾಕೂರ್ ಸಿಂಗ್ ರಾಣಾ ತಿಳಿಸಿದ್ದಾರೆ. ಆದರೆ, ನನಗೆ ಇದಕ್ಕಾಗಿ ನೋಟಿಸ್ ನೀಡಬೇಕಿತ್ತು. ಹೋಟೆಲ್ನ ಸ್ಥಿತಿಗತಿ ಬಗ್ಗೆ ಮೌಲ್ಯಮಾಪನ ಮಾಡೋಣ. ಅದನ್ನು ಮಾಡುವಂತೆಯೂ ಹೇಳಿದ್ದೇನೆ. ಆ ಬಳಿಕ ನಾನೂ ಕೂಡ ಇಲ್ಲಿಂದ ಹೊರಡುತ್ತೇನೆ' ಎಂದು ಹೇಳಿದ್ದಾರೆ.
ಜೋಶಿಮಠ ಮುಳುಗಡೆಗೆ ಕಾರಣವಾಯ್ತಾ ಎನ್ಟಿಪಿಸಿ ಯೋಜನೆ?
ಜೋಶಿಮಠವನ್ನು ಮೂರು ವಲಯಗಳಾಗಿ ವಿಂಗಡಣೆ: ಜೋಶಿಮಠವನ್ನು ಮೂರು ವಲಯಗಳಾಗಿ ವಿಂಗಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಪಾಯ, ಬಫರ್ ಮತ್ತು ಸುರಕ್ಷಿತ ವಲಯ ಎಂದು ವಿಂಗಡಣೆ ಮಾಡಲಾಗಿದೆ. ಅತ್ಯಂತ ಶಿಥಿಲವಾಗಿರುವ ಮತ್ತು ವಾಸಕ್ಕೆ ಯೋಗ್ಯವಲ್ಲದ ಇಂತಹ ಮನೆಗಳು ಅಪಾಯದ ವಲಯದಲ್ಲಿ ಇರುತ್ತವೆ. ಅಂತಹ ಮನೆಗಳನ್ನು ಕೈಯಾರೆ ಕೆಡವಲಾಗುತ್ತದೆ, ಆದರೆ ಸುರಕ್ಷಿತ ವಲಯದಲ್ಲಿರುವವರು ಸೌಮ್ಯವಾದ ಬಿರುಕುಗಳನ್ನು ಹೊಂದಿರುತ್ತಾರೆ ಮತ್ತು ಕುಸಿಯುವ ಸಾಧ್ಯತೆ ಕಡಿಮೆ. ಬಫರ್ ಝೋನ್ನಲ್ಲಿರುವ ಮನೆಗಳು ಸಣ್ಣ ಬಿರುಕುಗಳನ್ನು ಹೊಂದಿರುತ್ತವೆ ಆದರೆ ಬಿರುಕು ದಿನ ಕಳೆದಂತೆ ಇನ್ನಷ್ಟು ಹೆಚ್ಚಾಗುತ್ತದೆ. ಬಿರುಕು ಬಿಟ್ಟಿರುವ ಮನೆಗಳನ್ನು ಕೆಡವಲು ತಜ್ಞರ ತಂಡ ಶಿಫಾರಸು ಮಾಡಿದೆ.