ಅರ್ಜುನ್ ತೆಂಡೂಲ್ಕರ್ ಸಾನಿಯಾ ಮೆಹಂದಿ ಸೆರಮನಿ ಮೊದಲ ವಿಡಿಯೋ ಬಹಿರಂಗ, ಸಚಿನ್ ತೆಂಡೂಲ್ಕರ್ ಕುಟುಂಬ, ಆಪ್ತರು, ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅದ್ಧೂರಿ ಕಾರ್ಯಕ್ರಮದ ವಿಡಿಯೋ ಇಲ್ಲಿದೆ.
ಮುಂಬೈ (ಮಾ.03) ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ವಿವಾಹ ಮಾರ್ಚ್ 5ರಂದು ನಡೆಯಲಿದೆ. ಇದಕ್ಕೂ ಮೊದಲು ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿದೆ. ಇಂದು ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಂದೋಕ್ ಮೆಹಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಮುಂಬೈನಲ್ಲಿ ಆಯೋಜಿಸಿರುವ ಈ ಅದ್ಧೂರಿ ಮೆಹಂದಿ ಕಾರ್ಯಕ್ರಮ ಕುಟುಂಬಸ್ಥರು, ಆಪ್ತರು, ಆಹ್ವಾನಿತರಿಗಷ್ಟೇ ಸೀಮಿತವಾಗಿತ್ತು. ಅರ್ಜುನ್ ಸಾನಿಯಾ, ಸಚಿನ್ ತೆಂಡೂಲ್ಕರ್ ಸೇರಿದಂತೆ ಇಡೀ ಕುಟುಂಬ ಈ ಕಾರ್ಯಕ್ರಮದಲ್ಲಿ ಅತ್ಯಾಕರ್ಷಕ ಕೇಂದ್ರ ಬಿಂದುವಾಗಿತ್ತು. ಇತ್ತೀಚೆಗೆ ಜಾಮ್ನಗರದಲ್ಲಿ ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಂದೋಕ್ ಜೋಡಿಗೆ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬ ಪೂಜೆ ಹಾಗೂ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಳೆದ ಕೆಲ ದಿನಗಳಿಂದ ಅರ್ಜುನ್ ಸಾನಿಯಾ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ನಡೆಯುತ್ತಿದೆ.
ಪ್ರೀ ವೆಡ್ಡಿಂಗ್ನಲ್ಲಿ ಕುಣಿದು ಕುಪ್ಪಳಿಸಿದ್ದ ಶುಬಮನ್ ಗಿಲ್
ಇತ್ತೀಚೆಗೆ ನಡೆದ ಅರ್ಜುನ್ ಸಾನಿಯಾ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಶುಬಮನ್ ಗಿಲ್ ಈ ಕಾರ್ಯಕ್ರಮದಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿ ಮಿಂಚಿದ್ದರು. ಈ ವಿಡಿಯೋಗಳು ಎಲ್ಲೆಡೆ ಹರಿದಾಡಿತ್ತು. ಸಚಿನ್ ತೆಂಡೂಲ್ಕರ್ ಕುಟುಂಬಸ್ಥರು, ಆಪ್ತರ ಜೊತೆ ಗಿಲ್ ಡ್ಯಾನ್ಸ್ ಮಾಡಿದ್ದರು.
ಮಗ ದೊಡ್ಡವನಾಗಿದ್ದಾನೆ ಎಂದರ್ಥ
ಮುಕೇಶ್ ಅಂಬಾನಿ ಕಾರ್ಯಕ್ರಮದಲ್ಲಿ ನವ ಜೋಡಿಗಳಿಗೆ ಅಂಬಾನಿ ಕುಟುಂಬ ಶುಭ ಹಾರೈಸಿತ್ತು. ಇದೇ ವೇಳೆ ಸಚಿನ್ ತೆಂಡೂಲ್ಕರ್ ಅರ್ಜುನ್ ಹಾಗೂ ಸಾನಿಯಾ ಕುರಿತು ಮಾತನಾಡಿದ್ದರು. ಮಗ ಯಾವಾಗ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದು ಪರಿಚಯ ಮಾಡಿಸುತ್ತಾನೆ, ಆವಾಗ ಮಗ ದೊಡ್ಡವನಾಗಿದ್ದಾನೆ ಎಂದರ್ಥ ಎಂದಿದ್ದರು. ಅರ್ಜುನ್ ತೆಂಡೂಲ್ಕರ್ ಬಗ್ಗೆ ಹೆಮ್ಮೆ ಇದೆ. ಉತ್ತಮ ಸಂಗಾತಿ ಆತನ ಜೊತೆಯಾಗಿದ್ದಾಳೆ ಎಂದಿದ್ದರು.
ಮಾರ್ಚ್ 5ಕ್ಕೆ ಮದುವೆ, ಹಲವು ಗಣ್ಯರು ಹಾಜರು
ಮಾರ್ಚ್ 5 ರಂದು ಮುಂಬೈನಲ್ಲಿ ಅರ್ಜುನ್ ಸಾನಿಯಾ ಮದುವೆ ನಡೆಯಲಿದೆ. ಅದ್ಧೂರಿ ಮದುವೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಇತ್ತ ಟೀಂ ಹಾಲಿ, ಮಾಜಿ ಕ್ರಿಕೆಟಿಗರು, ಆಪ್ತರು ಈ ಮದುವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.


