ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ರೌಡಿ ಶೀಟರ್ ಮನೆ ಧ್ವಂಸಗೊಳಿಸಿದ ಯೋಗಿ ಸರ್ಕಾರ!
ಉತ್ತರ ಪ್ರದೇಶದಲ್ಲಿ ಬಲ್ಡೋಜರ್ ಕ್ರಮ ಹೊಸದೇನಲ್ಲ. ಇದೇ ಕಾರಣದಿಂದ ಸಿಎಂ ಯೋಗಿ ಆದಿತ್ಯನಾಥ್ ಬುಲ್ಡೋಜರ್ ಬಾಬಾ ಎಂದೇ ಜನಪ್ರಿಯರಾಗಿದ್ದಾರೆ. ಇದೀಗ ಯೋಗಿ ನಾಡಿನಲ್ಲಿ ಮತ್ತೆ ಬುಲ್ಡೋಜರ್ ಸದ್ದು ಮಾಡಿದೆ. ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ರೌಡಿ ಶೀಟರ್ ಮನೆಯನ್ನೇ ಧ್ವಂಸ ಮಾಡಲಾಗಿದೆ.
ಲಖನೌ(ಜ.04 ) ಉತ್ತರ ಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಸದ್ದು ಮಾಡಿದೆ. ಇತ್ತೀಚೆಗೆ ರೌಡಿ ಶೀಟರ್ ಅಶೋಕ್ ಯಾದವ್ ಅಲಿಯಾಸ್ ಮುನ್ನಾ ಯಾದವ್ ಅರೆಸ್ಟ್ ಮಾಡಲು ಹೋದ ಪೊಲೀಸರ ಮೇಲೆ ಗುಂಡಿನ ಸುರಿಮಳೆಗೈದಿದ್ದ. ಈ ದಾಳಿಯಲ್ಲಿ ಓರ್ವ ಪೊಲೀಸ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಘಟನೆ ನಡೆದ 9 ದಿನಕ್ಕೆ ಇದೀಗ ರೌಡಿ ಶೀಟರ್ ಮುನ್ನಾ ಯಾದವ್ ಮೇಲೆ ಬುಲ್ಡೋಜರ್ ಹತ್ತಿದೆ. ಸಂಪೂರ್ಣ ಮನೆ ಧ್ವಂಸಗೊಳಿಸಲಾಗಿದೆ. ಕನೌಜ್ನಲ್ಲಿದ್ದ ಮುನ್ನಾ ಯಾದವ್ ಮನೆಯನ್ನು ಸಂಪೂರ್ಣವಾಗಿ ಧ್ವಂಸ ಮಾಡಲಾಗಿದೆ. ಈ ಮನೆಯನ್ನು ಅನುಮತಿ ಇಲ್ಲದೆ ಕಟ್ಟಲಾಗಿದೆ. ಹೀಗಾಗಿ ಧ್ವಂಸಗೊಳಿಸಲಾಗಿದೆ.
ಮನೆಧ್ವಂಸಗೊಳಿಸುವ ಮೊದಲು ಬಾರಿ ಪೊಲೀಸ್ ಭದ್ರತೆಯನ್ನು ನಿಯೋಜನೆ ಮಾಡಲಾಗಿತ್ತು. ಬಳಿಕ ನೇರವಾಗಿ ಬುಲ್ಡೋಜರ್ ಹತ್ತಿಸಿ ಮನೆ ಧ್ವಂಸಗೊಳಿಸಲಾಗಿದೆ. ಡಿಸೆಂಬರ್ 25 ರಂದು ರೌಡಿ ಶೀಟರ್ ಮುನ್ನಾ ಯಾದವ್ ಬಂಂಧಿಸಲು ಪೊಲೀಸರ ತಂಡ ಧರಣಿ ಧೀರಪುರ ನಗಾರಿಯಾ ಗ್ರಾಮಕ್ಕೆ ತೆರಳಿದ್ದರು. ಆದರೆ ಪೊಲೀಸರು ಆಗಮಿಸಿದ ಮಾಹಿತಿ ತಿಳಿದ ಮುನ್ನಾ ಯಾದವ್ ಗುಂಡಿನ ದಾಳಿ ನಡೆಸಿದ್ದ. ಇದಕ್ಕೆ ಮುನ್ನ ಯಾದವ್ ಪುತ್ರ ಕೂಡ ನೆರವು ನೀಡಿದ್ದ.
UP, MP ಬಳಿಕ ರಾಜಸ್ಥಾನದಲ್ಲಿ ಬುಲ್ಡೋಜರ್ ಘರ್ಜನೆ, ಕರಣಿ ಸೇನೆ ಅಧ್ಯಕ್ಷನ ಹತ್ಯೆ ಆರೋಪಿ ಮನೆ ಧ್ವಂಸ!
ಮುನ್ನಾ ಯಾದವ್ ತನ್ನ ಧರಣಿ ಧೀರಪುರ ಗ್ರಾಮದಲ್ಲಿನ ಬಂಗಲೆಯ ಸುತ್ತ ಸಿಸಿಟಿವಿ ಅಳವಡಿಸಿದ್ದ. ಹೀಗಾಗಿ ಪೊಲೀಸರ ಪ್ರತಿಯೊಂದು ಹೆಜ್ಜೆಯೂ ಆತನಿಗೆ ಸಿಸಿಟಿವಿ ಮೂಲಕ ತಿಳಿಯುತ್ತಿತ್ತು. ಹೀಗಾಗಿ ಪೊಲೀಸರ ವಿರುದ್ಧ ಸುಲಭವಾಗಿ ಫೈರಿಂಗ್ ಮಾಡಿದ್ದ. ಮುನ್ನಾ ಯಾದವ್ ದಾಳಿಯಲ್ಲಿ ಪೊಲೀಸ್ ಪೇದೆ ಸಚಿನ್ ರಾತಿ ತೀವ್ರವಾಗಿ ಗಾಯಗೊಂಡಿದ್ದರು. ಸಚಿನ್ ರಾತಿಯನ್ನು ಆಸ್ಪತ್ರೆ ದಾಖಲಿಸಿದರೆ, ಇತ್ತ ಪೊಲೀಸರು ಪ್ರತಿ ದಾಳಿ ನಡೆಸಿದ್ದರು. ತೀವ್ರ ಗುಂಡಿನ ಚಕಮಕಿ ನಡೆದಿತ್ತು. ಬಳಿಕ ಮುನ್ನಾ ಯಾದವ್ ಹಾಗೂ ಆತನ ಪುತ್ರ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
ಆಸ್ಪತ್ರೆ ದಾಖಲಿಸಿದ್ದ ಪೊಲೀಸ್ ಪೇದೆ ಸಚಿನ್ ರಾತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಡಿಸೆಂಬರ್ 25 ರಂದು ಈ ಗುಂಡಿನ ಚಕಮಕಿ ನಡೆದಿತ್ತು. ಬಳಿಕ ಪೊಲೀಸರು ಮುನ್ನಾ ಯಾದವ್ ಜಾತಕ ತೆಗೆದು ಆಸ್ತಿ ವಿವರ, ಮನೆ ಸೇರಿದಂತೆ ಎಲ್ಲಾ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಕನ್ನೌಜ್ ಬಳಿ ಇರುವ ಮನೆ ಅನುಮತಿ ಇಲ್ಲದೆ ಕಟ್ಟಿರುವ ಮಾಹಿತಿ ಬೆಳಕಿಗೆ ಬಂದಿದೆ. ಬುಲ್ಡೋಜರ್ ಮೂಲಕ ಕನ್ನೌಜ್ ವಲಯಕ್ಕೆ ಎಂಟ್ರಿಕೊಟ್ಟ ಪೊಲೀಸರು ಮುನ್ನಾ ಯಾದವ್ ಮನೆಯನ್ನು ಧ್ವಂಸಗೊಳಿಸಿದ್ದಾರೆ.
ಗೋವಿಗೆ ಚಿತ್ರಹಿಂಸೆ ನೀಡಿ ಕೊಂದ ಆರೋಪಿಗಳ ಮನೆ ಧ್ವಂಸಗೊಳಿಸಿ ಮಧ್ಯಪ್ರದೇಶ ಸರ್ಕಾರ!