ಎನ್‌ಕೌಂಟರ್‌ಗೆ ಹೆಸರಾಗಿರುವ ಉತ್ತರಪ್ರದೇಶ ಪೊಲೀಸರು ಎನ್‌ಕೌಂಟರ್‌ಗೆ ಬಲಿಯಾದ ಆರೋಪಿಯೋರ್ವನ ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿ ಮಾನವೀಯತೆ ಮರೆದಿದ್ದಾರೆ.

ಲಕ್ನೋ: ಎನ್‌ಕೌಂಟರ್‌ಗೆ ಹೆಸರಾಗಿರುವ ಉತ್ತರಪ್ರದೇಶ ಪೊಲೀಸರು ಎನ್‌ಕೌಂಟರ್‌ಗೆ ಬಲಿಯಾದ ಆರೋಪಿಯೋರ್ವನ ಮಗಳ ಮದುವೆಯನ್ನು ಅದ್ದೂರಿಯಾಗಿ ನಡೆಸಿ ಮಾನವೀಯತೆ ಮರೆದಿದ್ದಾರೆ. ಪೊಲೀಸರೇ ವೆಚ್ಚ ಹಾಕಿ ನಡೆಸಿಕೊಟ್ಟ ಈ ಅದ್ದೂರಿ ಮದುವೆಯನ್ನು ನೋಡಿದ ವಧುವಿನ ತಾಯಿ ನನ್ನ ಮಗಳ ಮದುವೆ ಇಷ್ಟೊಂದು ಅದ್ದೂರಿಯಾಗಿ ನಡೆಯುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ. ಇಲ್ಲಿ ಪೊಲೀಸರು ಬರೀ ಮದುವೆಯ ವೆಚ್ಚ ಹಾಕಿಲ್ಲ, ಮದುವೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿ ಧಾಂ ಧೂಮ್ ಆಗಿ ಆರೋಪಿಯ ಮಗಳ ಮದ್ವೆ ಮಾಡಿ ಕೊಟ್ಟು ದೊಡ್ಡತನ ಮರೆದಿದ್ದಾರೆ. 

Add Asianetnews Kannada as a Preferred SourcegooglePreferred

ವರ್ಷಗಳ ಹಿಂದೆ ಅಂದರೆ 2023ರ ಮೇ 10 ರಂದು ಉತ್ತರಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ಬೆಡ್ಜಿತ್ ಸಿಂಗ್ ಎಂಬುವವರನ್ನು ದುಷ್ಕರ್ಮಿಗಳು ಒರೈ ಜಿಲ್ಲೆಯ ಕೊತ್ವಾಲಿ ಪೊಲೀಸ್ ಪ್ರದೇಶದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಇದಾಗಿ ನಾಲ್ಕು ದಿನದಲ್ಲೇ ಈ ಹತ್ಯೆ ನಡೆಸಿದ ಪ್ರಮುಖ ಆರೋಪಿಗಳಾದ ರಮೇಶ್ ರೈಕ್ವಾರ್ ಹಾಗೂ ಕಲ್ಲು ಅಹ್ರಿವಾರ್ ಎಂಬುವವರನ್ನು ಸಮೀಪದ ಜಲೌನ್ ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಮುಗಿಸಿದ್ದರು. ಕತೆ ಅಲ್ಲಿಗೆ ಮುಗಿದಿಲ್ಲ,

ಹೀಗೆ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗಿ ಪ್ರಾಣಬಿಟ್ಟ ರಮೇಶ್ ರೈಕ್ವಾರ್ ಮನೆ ಸ್ಥಿತಿ ಮಾತ್ರ ಶೋಚನೀಯವಾಗಿತ್ತು. ಆ ಮನೆಯಲ್ಲಿ ದುಡಿಯುವ ಕೈ ಇರಲಿಲ್ಲ, ಹೊಟ್ಟೆ ತುಂಬಿಸಿಕೊಳ್ಳಲು ಯಾವುದೇ ಸಂಪಾದನೆ ಇರಲಿಲ್ಲ, ಜೊತೆಗೆ ಮದುವೆಯಾಗುವ ವಯಸ್ಸಿಗೆ ಬಂದಿದ್ದ ಇಬ್ಬರು ಹೆಣ್ಣು ಮಕ್ಕಳಿದ್ದರು. ಆರೋಪಿಯ ಕುಟುಂಬದ ಈ ಹಿನ್ನೆಲೆ ಅರಿತ ಪೊಲೀಸರು ಮೃತ ರಮೇಶ್ ರೈಕ್ವಾರ್ ಪತ್ನಿಗೆ, ಪುತ್ರಿಯರ ಮದುವೆ ಸಮಯದಲ್ಲಿ ಸಹಾಯ ಮಾಡುವ ಭರವಸೆ ನೀಡಿದ್ದರು ಎಂದು ಜಲೌನ್ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಸರ್ಕಲ್ ಆಫೀಸರ್ ಶಂಕರ್ ತ್ರಿಪಾಠಿ ಹೇಳಿದ್ದಾರೆ. 

ಇತ್ತೀಚೆಗೆ ಮೃತ ರಮೇಶ್ ಪತ್ನಿ ತಾರಾ ಅವರು ಶಂಕರ್ ತ್ರಿಪಾಠಿ ಅವರನ್ನು ಭೇಟಿಯಾಗಿ ತನ್ನ ಪುತ್ರಿ ಶಿವಾನಿಗೆ ಜಾನ್ಸಿ ಜಿಲ್ಲೆಯಲ್ಲಿ ನಿಶ್ಚಯವಾಗಿದೆ ಏನಾದರು ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಇದಾದ ನಂತರ ನಾವು ಈ ಮದುವೆಗಾಗಿ ಹಣವನ್ನು ಸಂಗ್ರಹಿಸಿದೆವು. ಸಾರ್ವಜನಿಕರು ಹಣ ನೀಡಿ ಸಹಾಯ ಮಾಡಿದರು. ಮದುವೆಗಾಗಿ ಸ್ಥಳವನ್ನು ನಿಗದಿ ಮಾಡಿದೆವು. ಬೈಕ್‌ ಸೇರಿದಂತೆ ಎಲ್ಲಾ ಮನೆ ಸಾಮಗ್ರಿಗಳನ್ನು ಉಡುಗೊರೆಯಾಗಿ ಸಂಗ್ರಹಿಸಿದೆವು ಜೊತೆಗೆ ಮದುವೆಗೆ ಬಂದವರ ಸತ್ಕಾರಕ್ಕಾಗಿ ಆಹಾರದ ವ್ಯವಸ್ಥೆ ಮಾಡಿದೆವು ಜೊತೆಗೆ ವಧುವಿಗೆ ಆಭರಣಗಳನ್ನು ಖರೀದಿಸಿದೆವು ಎಂದು ಅವರು ಹೇಳಿದ್ದಾರೆ. 

Ram temple effect: ರಾಮಚರಿತಮಾನಸ್‌ಗೆ ನಿರೀಕ್ಷೆಗೂ ಮೀರಿದ ಬೇಡಿಕೆ, ಗೀತಾ ಪ್ರೆಸ್‌ ಫುಲ್‌ ಖುಷ್‌!

ನಂತರ ಮಾರ್ಚ್ 2 ರಂದು ಒರೈನ ಜಾನಕಿ ಪ್ಯಾಲೇಸ್‌ನಲ್ಲಿ ಈ ಅದ್ದೂರಿ ಮದ್ವೆ ನಡೆದಿದ್ದು, ಸಮೀಪದ ಜಿಲ್ಲೆಯ ಪೊಲೀಸರು ಕೂಡ ಈ ಮದ್ವೆಗೆ ಸಾಕ್ಷಿಯಾದರು. ಬರಾತಿಗಳನ್ನು(ದಿಬ್ಬಣ ಬಂದವ ವರನ ಕಡೆಯವರನ್ನು) ಅದ್ದೂರಿಯಾಗಿ ಸ್ವಾಗತಿಸಿದ ಪೊಲೀಸರು ನವಜೋಡಿಗೆ ಆಶೀರ್ವಾದ ಮಾಡಿದರು. ಯುಪಿ ಪೊಲೀಸರ ಈ ಮುಖವನ್ನು ನಾನು ಎಂದೂ ನೋಡಿರಲಿಲ್ಲ, ಜಲೂನ್ ಪೊಲೀಸರ ಜೊತೆ ಎನ್‌ಕೌಂಟರ್‌ನಲ್ಲಿ ನನ್ನ ಪತಿ ತೀರಿಕೊಂಡಾಗ ನಾನು ಜೀವನವನ್ನು ಅಂತ್ಯಗೊಳಿಸಬೇಕು ಎಂದು ಯೋಚಿಸಿದ್ದೆ ಏಕೆಂದರೆ ನಮ್ಮಲ್ಲಿ ಅಷ್ಟೊಂದು ತೀರಾ ಬಡತನವಿತ್ತು. ಮದುವೆಯಾಗುವ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ ಜಲೂನ್ ಪೊಲೀಸರಿಗೆ ಧನ್ಯವಾದಗಳು. ಅವರು ನಮ್ಮ ಪರ ನಿಂತು ನಮಗೆ ಸಂಪೂರ್ಣ ಸಹಾಯ ಮಾಡಿದರು. ಕೇವಲ ಹಣದ ಸಹಾಯ ಮಾಡಿದ್ದೂ ಮಾತ್ರವಲ್ಲ, ಮದುವೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಅವರು ಮಾಡಿದರು. ಈ ಮೂಲಕ ಅವರು ನೀಡಿದ ಭರವಸೆಯನ್ನು ಪೂರ್ಣಗೊಳಿಸಿದರು ಎಂದು ವಧುವಿನ ತಾಯಿ ಹೇಳಿದ್ದಾರೆ.