20 ರೂಗೆ 22 ವರ್ಷಗಳ ಸುಧೀರ್ಘ ಹೋರಾಟ: ರೈಲ್ವೆ ವಿರುದ್ಧ ಗೆದ್ದು ಬೀಗಿದ ವಕೀಲ
ಉತ್ತರಪ್ರದೇಶದ ವ್ಯಕ್ತಿಯೊಬ್ಬರು, ರೈಲ್ವೆ ಟಿಕೆಟ್ಗೆ ಹೆಚ್ಚು ದರ ಪಡೆದಿದ್ದಕ್ಕೆ ಬರೋಬರಿ 22 ವರ್ಷಗಳ ಕಾಲ ಹೋರಾಡಿ ಅದರಲ್ಲಿ ಜಯ ಸಾಧಿಸಿದ್ದಾರೆ.
ಲಕ್ನೋ: ಸಾಮಾನ್ಯವಾಗಿ ಸಣ್ಣ ಪುಟ್ಟ ವಸ್ತುಗಳ ಖರೀದಿ ವಿಚಾರವಾಗಿರಬಹುದು ಅಥವಾ ಇನ್ನಾವುದೇ ವಿಚಾರವಾಗಿರಬಹುದು ಬೆಲೆಗಳಲ್ಲಿ ಅನ್ಯಾಯ ಆದಾಗ ಅದರ ವಿರುದ್ಧ ಬಹುತೇಕರು ಮಾತನಾಡುವುದಾಗಲಿ ಕಾನೂನು ಹೋರಾಟ ನಡೆಸುವುದಾಗಲಿ ಮಾಡುವುದೇ ಇಲ್ಲ. ಹೋಗಲಿ ಬಿಡು ಯಾರೂ ಕೋರ್ಟ್ ಕೇಸ್ ಅಂತ ಅಲೆದಾಡುವುದು ನೆಮ್ಮದಿಯೂ ಕೆಡುವುದು ಹಣವೂ ಹೆಚ್ಚು ಖರ್ಚಾಗುವುದು ಎಂಬುದು ಬಹುತೇಕ ಜನರ ಮನಸ್ಥಿತಿ. ಆದರೆ ಉತ್ತರಪ್ರದೇಶದ ವ್ಯಕ್ತಿಯೊಬ್ಬರು, ರೈಲ್ವೆ ಟಿಕೆಟ್ಗೆ ಹೆಚ್ಚು ದರ ಪಡೆದಿದ್ದಕ್ಕೆ ಬರೋಬರಿ 22 ವರ್ಷಗಳ ಕಾಲ ಹೋರಾಡಿ ಅದರಲ್ಲಿ ಜಯ ಸಾಧಿಸಿದ್ದಾರೆ.
ಉತ್ತರಪ್ರದೇಶದ ತುಂಗನಾಥ್ ಚತುರ್ವೇದಿ ಅವರೇ ಭಾರತೀಯ ರೈಲ್ವೆ ವಿರುದ್ಧ ಈ ಸುಧೀರ್ಘ ಕಾನೂನು ಹೋರಾಟ ನಡೆಸಿ ಜಯ ಸಾಧಿಸಿದವರು. 1999 ರಲ್ಲಿ ಚತುರ್ವೇದಿ ಅವರು ಖರೀದಿಸಿದ ಹೆಚ್ಚಿನ ದರದ ಟಿಕೆಟ್ಗೆ ಸಂಬಂಧಿಸಿದಂತೆ ಈ ಮೊಕದ್ದಮೆಯನ್ನು ದಾಖಲಿಸಲಾಗಿತ್ತು. ವೃತ್ತಿಯಲ್ಲಿ ವಕೀಲರೂ ಆಗಿರುವ ತುಂಗನಾಥ್ ಅವರು ಮಥುರಾದಿಂದ ಮೊರಾದಾಬಾದ್ಗೆ ಪ್ರಯಾಣಿಸುತ್ತಿದ್ದಾಗ ಮಥುರಾ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ಬಹಿರಂಗಪಡಿಸಿದರು. ದುರದೃಷ್ಟವಶಾತ್, ಟಿಕೆಟ್ ಬುಕಿಂಗ್ ಕೇಂದ್ರದ ಗುಮಾಸ್ತರೊಬ್ಬರು, ಚತುರ್ವೇದಿಯವರು ಆ ಸಮಯದಲ್ಲಿ ಖರೀದಿಸಿದ ಎರಡು ಟಿಕೆಟ್ಗಳಿಗೆ 20 ರೂ. ಹೆಚ್ಚು ಹಣ ಪಡೆದಿದ್ದರೆನ್ನಲಾಗಿದೆ.
ಬಿಬಿಸಿ ಪ್ರಕಾರ, ಆಗ ಪ್ರತಿ ಟಿಕೆಟ್ನ ಬೆಲೆ 35 ರೂಪಾಯಿಗಳು. ಆದರೆ ಚತುರ್ವೇದಿ, ಗುಮಾಸ್ತನಿಗೆ 100 ರೂಪಾಯಿಯ ನೋಟು ನೀಡಿದಾಗ, ಅವರು ಕೇವಲ 10 ರೂಪಾಯಿಗಳನ್ನಷ್ಟೇ ವಾಪಸ್ ನೀಡಿದ್ದಾರೆ. (35 +35+ 70) ಎರಡು ಟಿಕೆಟ್ಗಳ ಬೆಲೆ 70 ರೂ. ಆದರೆ ಚತುರ್ವೇದಿಯವರಿಂದ ಗುಮಾಸ್ತ 90 ರೂ ವಸೂಲಿ ಮಾಡಿದರು. ಆದರೆ ಈ ಬಗ್ಗೆ ಕೇಳಿದಾಗ ಅವರ ಮನವಿಯನ್ನು ತಿರಸ್ಕರಿಸಿದ ಗುಮಾಸ್ತ 20 ರೂ. ವಾಪಸ್ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ವಕೀಲ ಚತುರ್ವೇದಿ ಗುಮಾಸ್ತ ಹಾಗೂ ರೈಲ್ವೆ ಇಲಾಖೆಗೆ ಪಾಠ ಕಲಿಸಲು ನಿರ್ಧರಿಸಿದ್ದಾರ.ಇದಕ್ಕಾಗಿ ಮಥುರಾದ ಗ್ರಾಹಕ ನ್ಯಾಯಾಲಯದಲ್ಲಿ ಅಧಿಕಾರಿಗಳ ವಿರುದ್ಧ ಅಧಿಕೃತ ದೂರು ಸಲ್ಲಿಸಲು ನಿರ್ಧರಿಸಿದರು. ಇದಾದ ನಂತರ 100 ಕ್ಕೂ ಹೆಚ್ಚು ಭಾರಿ ನ್ಯಾಯಾಲಯದ ವಿಚಾರಣೆಗೆ ಹಾಜರಾದ ಚತುರ್ವೇದಿಯವರಿಗೆ ಈಗ ಸಂಭ್ರಮಿಸುವ ಕ್ಷಣ ಬಂದಿದ್ದು, ಗ್ರಾಹಕ ನ್ಯಾಯಾಲಯವು ಅಂತಿಮವಾಗಿ ವಕೀಲರ ಪರವಾಗಿ ತೀರ್ಪು ನೀಡಿದೆ.
ತಾಂತ್ರಿಕ ದೋಷವಿದ್ದ ಮಿಕ್ಸರ್ ಗ್ರೈಂಡರ್ ಮಾರಾಟ; ನೊಂದ ಮಹಿಳೆಗೆ 20,000 ಪರಿಹಾರ ನೀಡಲು ಕೋರ್ಟ್ ಆದೇಶ
ಬಿಬಿಸಿಗೆ 22 ವರ್ಷಗಳ ಸುದೀರ್ಘ ಪ್ರಕರಣದ ಬಗ್ಗೆ ಮಾತನಾಡಿದ ಚತುರ್ವೇದಿ, ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 100 ಕ್ಕೂ ಹೆಚ್ಚು ವಿಚಾರಣೆಗಳಿಗೆ ಹಾಜರಾಗಿದ್ದೇನೆ. ಆದರೆ ಈ ಪ್ರಕರಣದ ಹೋರಾಟದಲ್ಲಿ ನಾನು ಕಳೆದುಕೊಂಡಿರುವ ಶಕ್ತಿ ಮತ್ತು ಸಮಯಕ್ಕೆ ನೀವು ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರಕರಣಗಳ ಅಧಿಕ ಹೊರೆಯಿಂದಾಗಿ ಭಾರತದಲ್ಲಿ ಗ್ರಾಹಕ ನ್ಯಾಯಾಲಯಗಳ ನಿಧಾನಗತಿಯ ವೇಗವನ್ನು ಅವರು ಎತ್ತಿ ತೋರಿಸಿದರು. ಇಂತಹ ಸರಳ ಪ್ರಕರಣವನ್ನೇ ಪರಿಹರಿಸಲು ಹಲವು ವರ್ಷ ತೆಗೆದುಕೊಳ್ಳುತ್ತದೆ ಎಂದಾದರೆ ದೊಡ್ಡ ದೊಡ್ಡ ಪ್ರಕರಣಗಳ ಕತೆ ಏನು ಎಂಬುದನ್ನು 66 ವರ್ಷ ವಯಸ್ಸಿನ ಚತುರ್ವೇದಿ ಹೇಳಿದ್ದಾರೆ. ಆದಾಗ್ಯೂ ಅವರ ಈ ಪ್ರಯಾಣವು ಸುಲಭವಾಗಿರಲಿಲ್ಲ. ಭಾರತೀಯ ರೈಲ್ವೆಯು ಭಾರತದಲ್ಲಿ ರೈಲು ಪ್ರಯಾಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪರಿಹರಿಸಲು ಮಾತ್ರ ಜವಾಬ್ದಾರರು ಎಂದು ಹೇಳುವ ಮೂಲಕ ಅವರ ಪ್ರಕರಣವನ್ನು ವಜಾಗೊಳಿಸಲು ಪ್ರಯತ್ನಿಸಿತ್ತು ಎಂದು ವಕೀಲರು ಬಹಿರಂಗಪಡಿಸಿದರು.
ಕ್ಯಾರಿ ಬ್ಯಾಗ್ಗೆ 12 ರೂ : ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು 21,000 ರೂ. ಪರಿಹಾರ
ರೈಲ್ವೇ ವಿರುದ್ಧದ ದೂರುಗಳನ್ನು ರೈಲ್ವೆ ನ್ಯಾಯಾಧಿಕರಣಕ್ಕೆ ತಿಳಿಸಬೇಕೇ ಹೊರತು ಗ್ರಾಹಕ ನ್ಯಾಯಾಲಯಕ್ಕೆ ಅಲ್ಲ ಎಂದು ಹೇಳುವ ಮೂಲಕ ರೈಲ್ವೇ ಪ್ರಕರಣವನ್ನು ವಜಾಗೊಳಿಸಲು ಪ್ರಯತ್ನಿಸಿತು. ಆದರೆ ಈ ವಿಷಯವನ್ನು ಗ್ರಾಹಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬಹುದು ಎಂದು ಸಾಬೀತುಪಡಿಸಲು ನಾವು 2021 ರ ಸುಪ್ರೀಂಕೋರ್ಟ್ ತೀರ್ಪನ್ನು ಬಳಸಿದ್ದೇವೆ. ಈಗ, ಕಳೆದ ವಾರ ಬಿಡುಗಡೆಯಾದ ತೀರ್ಪಿನ ಆದೇಶದಲ್ಲಿ, ಚತುರ್ವೇದಿಗೆ ರೂ 15,000 ($ 188; £ 154) ದಂಡವನ್ನು ಪಾವತಿಸುವಂತೆ ಗ್ರಾಹಕ ನ್ಯಾಯಾಲಯವು ರೈಲ್ವೆಯನ್ನು ಕೇಳಿದೆ. ಇದರ ಜೊತೆಗೆ, ಚತುರ್ವೇದಿ ಅವರಿಗೆ 1999 ರಿಂದ 2022 ರವರೆಗೆ 20 ರೂಗೆ ಪ್ರತಿ ವರ್ಷಕ್ಕೆ 12% ಬಡ್ಡಿದರದಂತೆ ಮರು ಪಾವತಿ ಮಾಡುವಂತೆ ತಿಳಿಸಿದೆ. 30 ದಿನಗಳಲ್ಲಿ ಷರತ್ತನ್ನು ಪೂರೈಸಲು ರೈಲ್ವೆ ವಿಫಲವಾದರೆ, ಬಡ್ಡಿಯ ದರ 15ಕ್ಕೆ ಹೆಚ್ಚಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಮಾತನಾಡಿದ ಚತುರ್ವೇದಿ, ಈ ವಿಚಾರದಲ್ಲಿ, ಹಣ ಮುಖ್ಯವಲ್ಲ. ಇದು ಯಾವಾಗಲೂ ನ್ಯಾಯಕ್ಕಾಗಿ ಹೋರಾಟ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವಾಗಿದೆ, ಆದ್ದರಿಂದ ಇದು ಯೋಗ್ಯವಾಗಿದೆ. ಅಲ್ಲದೆ, ನಾನು ವಕೀಲನಾಗಿರುವುದರಿಂದ, ನಾನು ವಕೀಲರಿಗೆ ಹಣವನ್ನು ಪಾವತಿಸಬೇಕಾಗಿಲ್ಲ ಅಥವಾ ನ್ಯಾಯಾಲಯಕ್ಕೆ ಪ್ರಯಾಣಿಸುವ ವೆಚ್ಚವನ್ನು ಭರಿಸಬೇಕಾಗಿಲ್ಲ. ಒಂದು ವೇಳೆ ವಕೀಲರನ್ನು ನೇಮಿಸಿ ಪ್ರಕರಣದ ಬಗ್ಗೆ ಹೋರಾಡುವುದಾದರೆ ಅದು ಸಾಕಷ್ಟು ದುಬಾರಿಯಾಗಬಹುದು. ಈ ಹೋರಾಟ ಕಠಿಣವಾಗಿ ಕಂಡರೂ ಬಿಟ್ಟುಕೊಡುವ ಅಗತ್ಯವಿಲ್ಲ ಎಂದು ಸಲಹೆ ನೀಡಿದ ಅವರು ಈ ಪ್ರಕರಣವು ಅನೇಕರಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದ್ದಾರೆ.