ನಲ್ಲಿ ಕಳ್ಳರ ಹಿಡಿಯೋಕೆ ಟಾಯ್ಲೆಟ್ನೊಳಗೆ ಸಿಸಿ ಕ್ಯಾಮೆರಾ ಅಳವಡಿಸಿದ ಕಾಲೇಜು: ವಿದ್ಯಾರ್ಥಿಗಳ ಪ್ರತಿಭಟನೆ
ಉತ್ತರ ಪ್ರದೇಶದ ಅಜಂಗಢದಲ್ಲಿರುವ ಡಿಎವಿ ಪಿಜಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿಯ ಹೊರಗೆ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕಾರಣ ಸಿಸಿ ಕ್ಯಾಮೆರಾ. ನಲ್ಲಿ ಕಳ್ಳನನ್ನು ಹಿಡಿಯುವ ಅನ್ವೇಷಣೆಯಲ್ಲಿ ಕಾಲೇಜು ಅಧಿಕಾರಿಗಳು ಶೌಚಾಲಯದಲ್ಲೇ ಸಿಸಿಟಿವಿಗಳನ್ನು ಸ್ಥಾಪಿಸಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಖನೌ (ಮಾರ್ಚ್ 21, 2023): ಜಗತ್ತಿನಲ್ಲಿ ನಾನಾ ವಿಧದ ಕಳ್ಳರನ್ನು ನಾವು ನೋಡಬಹುದು. ಈ ಪೈಕಿ ಕೆಲವರು ದೊಡ್ಡ ದೊಡ್ಡ ಹಾಗೂ ಬೆಲೆಬಾಳುವ ವಸ್ತುಗಳನ್ನೇ ದರೋಡೆ ಮಾಡಿದ್ರೆ, ಇನ್ನು ಕೆಲವರು ಚಿಕ್ಕ ಚಿಕ್ಕ ಹಾಗೂ ಕಡಿಮೆ ಬೆಲೆಯ ವಸ್ತುಗಳನ್ನೂ ಬಿಡದೆ ಕಳ್ಳತನ ಮಾಡ್ತಾರೆ. ಇದೇ ರೀತಿ ಉತ್ತರ ಪ್ರದೇಶದ ಕಾಲೇಜೊಂದರಲ್ಲಿ ನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ಯಂತೆ. ಇದರಿಂದ ಬೇಸತ್ತ ಕಾಲೇಜಿನ ಭದ್ರತಾ ತಂಡ ಈ ನಲ್ಲಿ ಕಳ್ಳರನ್ನು ಹಿಡಿಯೋಕೆ ಹೋಗಿ ಎಡವಟ್ಟು ಮಾಡಿಕೊಂಡಿದೆ. ಅದೇನಪ್ಪ ಎಡವಟ್ಟು ಅಂತೀರಾ..
ಉತ್ತರ ಪ್ರದೇಶದ ಅಜಂಗಢದಲ್ಲಿರುವ ಡಿಎವಿ ಪಿಜಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿಯ ಹೊರಗೆ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಕಾರಣ ಸಿಸಿ ಕ್ಯಾಮೆರಾ. ನಲ್ಲಿ ಕಳ್ಳನನ್ನು ಹಿಡಿಯುವ ಅನ್ವೇಷಣೆಯಲ್ಲಿ ಕಾಲೇಜು ಅಧಿಕಾರಿಗಳು ಶೌಚಾಲಯದಲ್ಲೇ ಸಿಸಿಟಿವಿಗಳನ್ನು ಸ್ಥಾಪಿಸಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಗೌಪ್ಯತೆಯ ಉಲ್ಲಂಘನೆ, ನಮ್ಮ ಗೌಪ್ಯತೆಯ ಮೇಲೆ ಆಕ್ರಮಣ ನಡೆಯುತ್ತಿದೆ ಎಂದು ಆರೋಪಿಸಿ ಪ್ರೊಟೆಸ್ಟ್ ಮಾಡಿದ್ದಾರೆ.
ಇದನ್ನು ಓದಿ: ಚಾಕು ಹಿಡಿದು ಮಗನನ್ನೇ ದರೋಡೆ ಮಾಡಲು ಹೋದ ತಂದೆ..!
ಶೌಚಾಲಯದ ಬಳಿಯ ಸಿಸಿಟಿವಿಗಳ ಬಗ್ಗೆ ತಿಳಿದ ನಂತರ ವಿದ್ಯಾರ್ಥಿಗಳು ಕೋಪಗೊಂಡಿದ್ದು, ಇದು ಖಾಸಗಿತನದ ಆಕ್ರಮಣ. ಮ್ಯಾನೇಜ್ಮೆಂಟ್ನ ಬುದ್ಧಿಮತ್ತೆ ಭ್ರಷ್ಟಗೊಂಡಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ಷಮೆ ಯಾಚಿಸಿದ ಕಾಲೇಜು ಆಡಳಿತ ಮಂಡಳಿ
ಈ ಬೆಳವಣಿಗೆಗಳ ಬಗ್ಗೆ ಪ್ರತಕ್ರಿಯೆ ನೀಡಿದ ಕಾಲೇಜು ಅಧಿಕಾರಿಗಳು, ಕ್ಯಾಂಪಸ್ನಿಂದ ನಿಯಮಿತವಾಗಿ ನೀರಿನ ನಲ್ಲಿಗಳನ್ನು ಕಳ್ಳತನ ಮಾಡಲಾಗುತ್ತಿದೆ. ಈ ಹಿನ್ನೆಲೆ, ಇದನ್ನು ತಡೆಯಲು ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಒಂದು ಕ್ಯಾಮೆರಾ ತಪ್ಪಾಗಿ ಟಾಯ್ಲೆಟ್ನೊಳಗೆ ಹಾಕಲಾಗಿದೆ. ಅದನ್ನು ತೆಗೆದು ಬೇರೆ ಸ್ಥಳದಲ್ಲಿ ಸ್ಥಾಪಿಸಲು ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 5 ವರ್ಷದ ನಿರಂತರ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಕರ್ನಾಟಕ ಹೈಕೋರ್ಟ್
ಅಲ್ಲದೆ, ಕಳ್ಳತನದ ಮೇಲೆ ನಿಗಾ ಇಡಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಪರಿಸ್ಥಿತಿಯನ್ನು ಅರಿತು ನಾನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಂಡಿದ್ದೇನೆ ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಈ ಮಧ್ಯೆ, ಕಾಲೇಜು ಅಧಿಕಾರಿಗಳು ಟಾಯ್ಲೆಟ್ ಬಳಿಯ ಸಿಸಿ ಕ್ಯಾಮೆರಾ ತೆಗೆಯುವ ಭರವಸೆ ನೀಡಿದ ನಂತರ ಧರಣಿ ನಿರತ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Bengaluru: ಹೀಗೂ ಉಂಟು..! ಪತ್ನಿ ತಡವಾಗಿ ಏಳ್ತಾಳೆ ಎಂದು ಪತಿಯಿಂದ ಪೊಲೀಸರಿಗೆ ದೂರು