ಒಂದೆಡೆ ನೀಟ್ ಪ್ರತಿಭಟನೆ, ಶಿ್ಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸೇರಿದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಮೇಲೆ ಒತ್ತಡ ತೀವ್ರಗೊಳ್ಳುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಇದೀಗ ಸಚಿವ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ ನೀಡಿದ್ದಾರೆ.

ನವದೆಹಲಿ (ಜು.24) ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ, ಸೋನಂ ವಾಂಗ್ಚುಕ್ ಹೋರಾಟ, ವಿಪಕ್ಷಗಳ ಗದ್ದಲದಿಂದ ಕೇಂದ್ರ ಸರ್ಕಾರ ಹಲವು ಸವಾಲು ಎದುರಿಸುತ್ತಿದೆ. ಮುಂಗಾರು ಅಧಿವೇಶನ ಗದ್ದಲದ ಗೂಡಾಗಿದೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಒತ್ತಡ ತೀವ್ರಗೊಳ್ಳುತ್ತಿದೆ. ಬೇಡಿಕೆ ಪತ್ರಗಳು ಸರ್ಕಾರ ತಲುಪುತ್ತಿದೆ. ಮತ್ತೊಂದೆಡೆ ಪರೀಕ್ಷಾ ಮಾದರಿ, ಎಜೆನ್ಸಿ ಒಳಗಿನ ಅಕ್ರಮ ತಡೆಯಲು ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕೇಂದ್ರ ರೈಲ್ವೆ ಹಾಗೂ ಆಹಾರ ಸಂಸ್ಕರಣಾ ಉದ್ಯಮಗಳ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ ನೀಡಿದ್ದಾರೆ.

ರನ್ವೀತ್ ಸಿಂಗ್ ಬಿಟ್ಟು ರಾಜೀನಾಮೆ ಯಾಕೆ?

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹ ಹೆಚ್ಚಾಗುತ್ತಿದ್ದಂತೆ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ ಯಾಕೆ ಅನ್ನೋ ಪ್ರಶ್ನೆಗಳು ಎದುರಾಗಿದೆ. ರವನೀತ್ ಸಿಂಗ್ ಬಿಟ್ಟು ಪಂಜಾಬ್‌ನ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ ರವನೀತ್ ಸಿಂಗ್ ಬಿಟ್ಟು ಸ್ಪರ್ಧಿಸುತ್ತಿದ್ದಾರೆ ಎಂಬ ಮಾಹಿತಿಗಳು ಹೊರಬಿದ್ದಿದೆ. ಇದರ ತಯಾರಿಗಾಗಿ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ್ದ ನಾಯಕ

ಪಂಜಾಬ್ ಮಾಜಿಮುಖ್ಯಮಂತ್ರಿ ಬಿಯಂತ್ ಸಿಂಗ್ ಅವರ ಮೊಮ್ಮಗನಾಗಿರುವ ರವನೀತ್ ಸಿಂಗ್ ಬಿಟ್ಟು ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರಿಕೊಂಡಿದ್ದರು. ಕಾಂಗ್ರೆಸ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ರವನೀತ್ ಸಿಂಗ್ ಬಿಜೆಪಿ ಸೇರಿಕೊಂಡು ಲೋಕಸಭೆಗೆ ಸ್ಪರ್ಧಿಸಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ರವನೀತ್ ಸಿಂಗ್ ಅವರನ್ನು ರಾಜ್ಯಸಭೆ ಮೂಲಕ ಆಯ್ಕೆ ಮಾಡಿ ಕೇಂದ್ರ ಸಚಿವರನ್ನಾಗಿ ಮಾಡಲಾಗಿತ್ತು. ಇದೀಗ ಬಿಜೆಪಿ ಪಂಜಾಬ್‌ನಲ್ಲಿ ಕಮಲ ಅರಳಿಸಲು ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ರವನೀತ್ ಸಿಂಗ್ ರಾಜೀನಾಮೆ ಪಡೆದು ಪಂಜಾಬ್ ವಿಧಾನಸಭಾ ಚುನಾವಣೆ ಹೊಣೆ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.

ಆಮ್ ಆದ್ಮಿ ಪಾರ್ಟಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇತ್ತ ಕಾಂಗ್ರೆಸ್ ಒಳಜಗಳದಿಂದ ಹರಿದು ಹಂಚಿಹೋಗಿದೆ. ಹೀಗಾಗಿ ಪಂಜಾಬ್‌ನಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಇದು ಸೂಕ್ತ ಸಮಯ ಎಂದೇ ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾಡಲು ಹಲವು ನಾಯಕರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ಮೋದಿ ಸಂಪುಟದಲ್ಲಿ ಸರ್ಜರಿ

ರನ್ವೀತ್ ಸಿಂಗ್ ಬಿಟ್ಟು ರಾಜೀನಾಮೆಯಿಂದ ಇದೀಗ ಪ್ರಧಾನಿ ಮೋದಿ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ನಡೆಯುವ ಸಾಧ್ಯತೆ ದಟ್ಟವಾಗಿದ್ದು ಮಾತ್ರವಲ್ಲ ಶೀಘ್ರದಲ್ಲೇ ನಡೆಯಲಿದೆ ಅನ್ನೋ ಸೂಚನೆಯೂ ಸಿಕ್ಕಿದೆ. ಪುನಾರಚನೆಯಾದರೆ ಕೆಲ ಸಚಿವರ ಸ್ಥಾನ ಪಲ್ಲಟ ಮಾತ್ರವಲ್ಲ, ಕೆಲವರಿಗೆ ಕೊಕ್ ಸಿಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.