ಶೀಘ್ರ ಕ್ರಮ ಕೈಗೊಳ್ಳಿ: ಯುಪಿ ಪೊಲೀಸರಿಗೆ ನಖ್ವಿ ಆದೇಶ ಏನು?
ಯುಪಿ ಪೊಲೀಸರಿಗೆ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಆದೇಶ| ಅಲ್ಪಸಂಖ್ಯಾತರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದ ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ| ಎಸ್ಪಿ ಅಖಿಲೇಶ್ ನಾರಾಯಣ್ ಸಿಂಗ್ ವಿರುದ್ಧ ಕ್ರಮಕ್ಕೆ ನಖ್ವಿ ಆಗ್ರಹ| 'ಶಾಂತಿಭಂಗ ಮಾಡುವ ಪ್ರತಿಭಟನಾಕಾರರನ್ನು ಹತ್ತಿಕ್ಕುವುದು ಪೊಲೀಸರ ಕರ್ತವ್ಯ'|
ಲಕ್ನೋ(ಡಿ.29): ಅಲ್ಪಸಂಖ್ಯಾತರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಆಗ್ರಹಿಸಿದ್ದಾರೆ.
ಈ ಕುರಿತು ಯುಪಿ ಪೊಲೀಸ್ ಮುಖ್ಯಸ್ಥರಿಗೆ ಮನವಿ ಮಾಡಿರುವ ನಖ್ವಿ, ಅಲ್ಪಸಂಖ್ಯಾತರು ವಾಸಿಸುವ ಪ್ರದೇಶದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿ ದುರ್ವರ್ತನೆ ತೋರಿದ್ದು ಖಂಡನೀಯ ಎಂದು ಹೇಳಿದ್ದಾರೆ.
ಪೊಲೀಸರ ಕರ್ತವ್ಯ ಶಾಂತಿಭಂಗ ಮಾಡುವ ಪ್ರತಿಭಟನಾಕಾರರನ್ನು ಹತ್ತಿಕ್ಕುವುದೇ ಹೊರತು ಜನರಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವುದಲ್ಲ ಎಂದು ನಖ್ವಿ ಹರಿಹಾಯ್ದಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದವರಲ್ಲಿ ಭಯ ಹುಟ್ಟಿಸಲು ಪ್ರಯತ್ನ ನಡೆಸಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಖ್ವಿ ಆಗ್ರಹಿಸಿದ್ದಾರೆ.
ಮುಸ್ಲಿಮರ ಬಸ್ತಿಯಲ್ಲಿ ಎಸ್ಪಿ ಕುಸ್ತಿ: ಪಾಕಿಸ್ತಾನಕ್ಕೆ ಹೋಗಿ ಎಂದ ಅಧಿಕಾರಿ!
ಅಲ್ಪಸಂಖ್ಯಾತ ಸಮುದಾಯದವರ ಪ್ರದೇಶದಲ್ಲಿ ಕರ್ತವ್ಯನಿರತ ಎಸ್ಪಿ ಅಖಿಲೇಶ್ ನಾರಾಯಣ್ ಸಿಂಗ್, ಮುಸ್ಲಿಮರೆಲ್ಲಾ ಪಾಕಿಸ್ತಾನಕ್ಕೆ ಹೋಗಿ ಎಂದು ಏರು ಧ್ವನಿಯಲ್ಲಿ ಬೆದರಿಕೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.