Asianet Suvarna News Asianet Suvarna News

ಟೈಲರ್ ಕನ್ಹಯ್ಯ ಲಾಲ್‌ ಹಂತಕರಿಗೆ ಬಿಜೆಪಿ ನಂಟು: ಅಶೋಕ್ ಗೆಹ್ಲೋಟ್ ಸ್ಫೋಟಕ ಆರೋಪ

ಉದಯಪುರ ಟೈಲರ್‌ ಕನ್ಹಯ್ಯ ಲಾಲ್‌ ಹಂತಕರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬದಲಿಗೆ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಪ್ರಕರಣವನ್ನು ನಿರ್ವಹಿಸಿದ್ದರೆ, ತನಿಖೆ ತಾರ್ಕಿಕ ತೀರ್ಮಾನದ ಕಡೆಗೆ ಸಾಗುತ್ತಿತ್ತು ಎಂದು ರಾಜಸ್ಥಾನ ಸಿಎಂ ಹೇಳಿದ್ದಾರೆ.

udaipur tailor s killers linked to bjp ashok gehlot s big charge ash
Author
First Published Nov 13, 2023, 12:08 PM IST

ಜೋಧ್‌ಪುರ (ರಾಜಸ್ಥಾನ) (ನವೆಂಬರ್‌ 13, 2023): ರಾಜಸ್ಥಾನದ ಉದಯಪುರ ಟೈಲರ್ ಕನ್ಹಯ್ಯ ಲಾಲ್ ತೇಲಿಯ ಹಂತಕರು ಬಿಜೆಪಿಯೊಂದಿಗೆ ನಂಟು ಹೊಂದಿದ್ದಾರೆ ಎಂದು ಅಲ್ಲಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ನವೆಂಬರ್ 25 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕೇಸರಿ ಪಕ್ಷವು ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದೂ ರಾಜಸ್ಥಾನ ಸಿಎಂ ಹೇಳಿಕೊಂಡಿದ್ದಾರೆ.

ಭಾನುವಾರ ಜೋಧ್‌ಪುರಕ್ಕೆ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಸ್ಥಾನ ಮುಖ್ಯಮಂತ್ರಿ, ಉದಯಪುರ ಟೈಲರ್‌ ಕನ್ಹಯ್ಯ ಲಾಲ್‌ ಹಂತಕರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬದಲಿಗೆ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಪ್ರಕರಣವನ್ನು ನಿರ್ವಹಿಸಿದ್ದರೆ, ತನಿಖೆ ತಾರ್ಕಿಕ ತೀರ್ಮಾನದ ಕಡೆಗೆ ಸಾಗುತ್ತಿತ್ತು ಎಂದೂ ಹೇಳಿದರು. 

ಇದನ್ನು ಓದಿ: ಈ ರಾಜ್ಯದಲ್ಲಿ 450 ರೂ. ಗೆ ಸಿಗುತ್ತೆ ಗ್ಯಾಸ್‌ ಸಿಲಿಂಡರ್‌: ಬಿಜೆಪಿ ಘೋಷಣೆ

ಕಳೆದ ವರ್ಷ ಜೂನ್ 28 ರಂದು ಅಮಾನತುಗೊಂಡಿರುವ ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ ಆರೋಪದ ಮೇಲೆ ಕನ್ಹಯ್ಯ ಲಾಲ್ ಎಂಬ ಟೈಲರ್ ಅನ್ನು ಉದಯಪುರದ ತನ್ನ ಅಂಗಡಿಯೊಳಗೆ ಇಬ್ಬರು ದುಷ್ಕರ್ಮಿಗಳು ಹಗಲು ಹೊತ್ತಿನಲ್ಲಿ ಶಿರಚ್ಛೇದ ಮಾಡಿದ್ದರು. ಪ್ರವಾದಿ ಮೊಹಮ್ಮದ್‌ ವಿರುದ್ಧ ವಾಗ್ದಾಳಿ ನಡೆಸಿದ ಆರೋಪದಲ್ಲಿ ನೂಪುರ್‌ ಶರ್ಮಾ ರನ್ನು ಬಿಜೆಪಿಯಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಈ ಘಟನೆ ನಡೆದಿತ್ತು.

ಉದಯಪುರ ಟೈಲರ್‌ನ ಶಿರಚ್ಛೇದವು ದೇಶಾದ್ಯಂತ ಆಘಾತ ಉಂಟು ಮಾಡಿದ್ದರ ಜತೆಗೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು. ಈ ಪ್ರಕರಣವನ್ನು ಆರಂಭದಲ್ಲಿ ಉದಯಪುರದ ಧನ್ಮಂಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಆದರೆ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜೂನ್ 29, 2022 ರಂದು ಕೇಸ್‌ ವಹಿಸಿಕೊಂಡಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತು ಪಿಎಚ್‌ಡಿ ಮಾಡಿದ ಮೊದಲ ಮುಸ್ಲಿಂ ಮಹಿಳೆ!

ಈ ಸಂಬಂಧ ರಾಜಸ್ಥಾನದ ಜೋಧಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಿಎಂ ಅಶೋಕ್‌ ಗೆಹ್ಲೋಟ್‌, ಇದೊಂದು ದುರದೃಷ್ಟಕರ ಘಟನೆಯಾಗಿತ್ತು ಮತ್ತು ನಾನು ನನ್ನ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಘಟನೆ ಬಗ್ಗೆ ತಿಳಿದ ತಕ್ಷಣ ಉದಯಪುರಕ್ಕೆ ಹೊರಟೆ. ಆದರೆ, ಉದಯಪುರ ಘಟನೆಯ ಬಗ್ಗೆ ತಿಳಿದ ನಂತರವೂ ಬಿಜೆಪಿಯ ಹಲವಾರು ಉನ್ನತ ನಾಯಕರು ಹೈದರಾಬಾದ್‌ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಿರ್ಧರಿಸಿದ್ದರು ಎಂದೂ ಅಶೋಕ್‌ ಗೆಹ್ಲೋಟ್ ಹೇಳಿದ್ದಾರೆ. 

ಘಟನೆ ನಡೆದ ದಿನವೇ ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ರಾಜ್ಯ ಸರ್ಕಾರ ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದೂ ಅವರು ಹೇಳಿದರು. ಆದರೆ, ಎನ್‌ಐಎ ಏನು ಕ್ರಮ ಕೈಗೊಂಡಿದೆ ಎಂಬುದು ಯಾರಿಗೂ ತಿಳಿದಿಲ್ಲ. ನಮ್ಮ ಎಸ್‌ಒಜಿ ಪ್ರಕರಣವನ್ನು ಮುಂದುವರಿಸಿದ್ದರೆ, ಅಪರಾಧಿಗಳಿಗೆ ಇಷ್ಟು ಹೊತ್ತಿಗೆ ಶಿಕ್ಷೆಯಾಗುತ್ತಿತ್ತು ಎಂದೂ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್ ಭಾನುವಾರ ಹೇಳಿದ್ದಾರೆ.

ಜೂನ್ 28 ರಂದು ಉದಯಪುರದ ಮಾಲ್ದಾಸ್ ಪ್ರದೇಶದಲ್ಲಿ ಈ ಕ್ರೂರ ಹತ್ಯೆ ನಡೆದಿತ್ತು. ಅಪರಾಧ ಮಾಡಿದ ತಕ್ಷಣ, ಇಬ್ಬರು ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ "ತಲೆದಂಡದ" ಬಗ್ಗೆ ಹೆಮ್ಮೆಪಡುವ ವಿಡಿಯೋ ಪೋಸ್ಟ್ ಮಾಡಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದರು. 

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದಾಳಿಕೋರರು ವಿಡಿಯೋದಲ್ಲಿ ತಮ್ಮನ್ನು ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಎಂದು ಗುರುತಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ದಿನಗಳ ಮೊದಲು, ಮತ್ತೊಂದು ಪ್ರಕರಣದಲ್ಲಿ ಪೊಲೀಸರು ದಾಳಿಕೋರರನ್ನು ಬಂಧಿಸಿದ್ದರು ಮತ್ತು ಅವರನ್ನು ಬಿಡುಗಡೆ ಮಾಡಲು ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಬಂದರು ಎಂದು ರಾಜಸ್ಥಾನ ಮುಖ್ಯಮಂತ್ರಿ ಹೇಳಿದರು. ಅಪರಾಧಿಗಳು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಘಟನೆಯ ದಿನಗಳ ಮೊದಲು, ಪೊಲೀಸರು ಈ ಆರೋಪಿಗಳನ್ನು ಬೇರೆ ಯಾವುದೋ ಪ್ರಕರಣದಲ್ಲಿ ಬಂಧಿಸಿದಾಗ, ಕೆಲವು ಬಿಜೆಪಿ ನಾಯಕರು ಅವರನ್ನು ಬಿಡುಗಡೆ ಮಾಡಲು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು ಎಂದೂ ಅಶೋಕ್‌ ಗೆಹ್ಲೋಟ್ ಹೇಳಿದ್ದಾರೆ.

Follow Us:
Download App:
  • android
  • ios