ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧಿತರಾದವರೂ ಜಾಮೀನು ಪಡೆಯಲು ಅರ್ಹರು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಜಾಮೀನು ನೀಡುವುದು ನಿಯಮ, ಜೈಲು ವಿನಾಯಿತಿ ಎಂಬುದು ಸಂವಿಧಾನದ ಮೂಲಭೂತ ತತ್ವ ಎಂದು ನ್ಯಾಯಾಲಯ ಹೇಳಿದೆ.
ನವದೆಹಲಿ (ಮೇ.19): ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧಿತರಾದವರೂ ಜಾಮೀನು ಪಡೆಯಲು ಅರ್ಹರು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಜಾಮೀನು ನೀಡುವುದೇ ನಿಯಮ, ಜೈಲು ವಿನಾಯಿತಿ ಎಂಬುದು ಕೇವಲ ಖಾಲಿ ಮಾತಲ್ಲ, ಇದು ಸಂವಿಧಾನದ ಮೂಲಭೂತ ತತ್ವ ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ನ್ಯಾ. ಬಿ.ವಿ. ನಾಗರತ್ನ ಮತ್ತು ನ್ಯಾ. ಉಜ್ಜಲ್ ಭುಯಾನ್ ಅವರ ವಿಭಾಗೀಯ ಪೀಠವು ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಜೊತೆಗೆ ಕಾಶ್ಮೀರದ ಸಯ್ಯದ್ ಇಫ್ತಿಖಾರ್ ಅಂದ್ರಾಬಿಗೆ ಇದೇ ಕಾರಣಕ್ಕೆ ಜಾಮೀನು ನೀಡಿದೆ. ಅಂದ್ರಾಬಿ ವಿಷಯದಲ್ಲಿ, ಆರೋಪಿಯ ಬಳಿ ಹಣ ಅಥವಾ ಮಾದಕವಸ್ತು ಪತ್ತೆಯಾಗಿಲ್ಲ, ಹಿಂದೆ ಅಪರಾಧ ಮಾಡಿದ ಇತಿಹಾಸವಿಲ್ಲ ಮತ್ತು ಪೊಲೀಸ್ ಹೇಳಿಕೆಗಳು ಮಾತ್ರ ಪುರಾವೆಯಾಗಿ ಬಳಕೆಯಾಗುತ್ತಿವೆ ಎಂದಿರುವ ಕೋರ್ಟ್, ಆತನಿಗೆ ಜಾಮೀನು ನೀಡಿದೆ.
ಇದೇ ವೇಳೆ ಸುಪ್ರೀಂ ತನ್ನದೇ ಮತ್ತೊಂದು ಪೀಠದ ತೀರ್ಪನ್ನು ಪ್ರಶ್ನಿಸಿದೆ. ದೆಹಲಿ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಂಗೆ 2025ರ ಜ.5ರಂದು ಜಾಮೀನು ನಿರಾಕರಿಸಿದ್ದ ತೀರ್ಪಿನಲ್ಲಿ ತಪ್ಪಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.


