ವಕ್ಫ್ ತಿದ್ದುಪಡಿ ಮಸೂದೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್, ಎಐಎಂಐಎಂ ಸಂಸದರು, ಆಪ್ ಶಾಸಕ ಹಾಗೂ ಎನ್‌ಜಿಒ ಅರ್ಜಿ ಸಲ್ಲಿಸಿವೆ. ಮಸೂದೆಯು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಮುಸ್ಲಿಮರ ಧಾರ್ಮಿಕ ಸ್ವಾಯತ್ತತೆಯನ್ನು ಮೊಟಕುಗೊಳಿಸುತ್ತದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ನವದೆಹಲಿ (ಏ.6): ಉಭಯ ಸದನಗಳಲ್ಲಿ ಅಂಗೀಕರಿಸಲಾದ ವಕ್ಫ್‌ ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್‌ ಹಾಗೂ ಎಐಎಂಐಎಂ ಸಂಸದರಿಬ್ಬರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬೆನ್ನಲ್ಲೇ, ಇದೀಗ ಆಪ್‌ ಶಾಸಕ ಅಮಾನತುಲ್ಲಾ ಖಾನ್‌ ಹಾಗೂ ಎಪಿಸಿಆರ್‌ ಎಂಬ ಎನ್‌ಜಿಒ ಕೂಡ ಅದೇ ಹಾದಿ ಹಿಡಿದಿದ್ದಾರೆ.

Add Asianetnews Kannada as a Preferred SourcegooglePreferred

ಖಾನ್‌ ಸುಪ್ರೀಂ ನ್ಯಾಯಪೀಠಕ್ಕೆ ಅರ್ಜಿ ಹಾಕಿ, ‘ವಕ್ಫ್‌ ಮಸೂದೆಯು ಸಂವಿಧಾನದ 14, 15, 21, 25, 26, 29, 30, ಮತ್ತು 300-ಎ ವಿಧಿಗಳ ಅಡಿಯಲ್ಲಿ ಬರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇದು ಮುಸ್ಲಿಮರ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಮೊಟಕುಗೊಳಿಸುತ್ತದೆ. ಕಾರ್ಯಾಂಗದ ಅನಿಯಂತ್ರಿತ ಹಸ್ತಕ್ಷೇಪಕ್ಕೆ ಅನುವು ಮಾಡಿಕೊಡುತ್ತದೆ. ಅಂತೆಯೇ, ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳನ್ನು ನಿರ್ವಹಣೆಯಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ’ ಎಂದು ಆರೋಪಿಸಿಲಾಗಿದೆ. ಜೊತೆಗೆ, ಮಸೂದೆಯನ್ನು ಅಸಾಂವಿಧಾನಿಕ’ ಎಂದು ಘೋಷಿಸುವಂತೆ ಕೋರಿದ್ದಾರೆ.

ಇದನ್ನೂ ಓದಿ:Breaking ವಕ್ಫ್ ತಿದ್ದುಪಡಿ ಮಸೂದೆ ಈಗ ಕಾನೂನು, ರಾಷ್ಟ್ರಪತಿ ಮುರ್ಮು ಅಂಕಿತ

ಅತ್ತ ನಾಗರಿಕ ಹಕ್ಕುಗಳ ರಕ್ಷಣೆ ಸಂಘ (ಎಪಿಸಿಆರ್‌) ಎಂಬ ಸರ್ಕಾರೇತರ ಸಂಸ್ಥೆ, ‘ವಕ್ಫ್‌ ಮಸೂದೆಯು ಪ್ರವಾದಿ ಮೊಹಮ್ಮದ್ ಕಾಲದಿಂದಲೂ ಕುರಾನ್ ಉಲ್ಲೇಖಗಳು ಮತ್ತು ಹದೀಸ್‌ನಲ್ಲಿ ಆಳವಾಗಿ ಬೇರೂರಿರುವ ವಕ್ಫ್‌ನ ಮೂಲಭೂತ ಉದ್ದೇಶ ಮತ್ತು ಅದರ ಆಸ್ತಿಗಳ ಕಾನೂನು ಮಾನ್ಯತೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.

ವಕ್ಫ್‌ ಮಸೂದೆ ಕುರಿತಾದ ಜೆಪಿಸಿಯ ಸದಸ್ಯರೂ ಆದ ಕಾಂಗ್ರೆಸ್‌ ಸಂಸದ ಮೊಹಮ್ಮದ್‌ ಜಾವೇದ್‌ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ‘ಇದು ವಕ್ಫ್ ಆಸ್ತಿಗಳು ಮತ್ತು ಅವುಗಳ ನಿರ್ವಹಣೆಯ ಮೇಲೆ ಅನಿಯಂತ್ರಿತ ನಿರ್ಬಂಧಗಳನ್ನು ವಿಧಿಸುತ್ತದೆ ಮತ್ತು ಮುಸ್ಲಿಂಮರ ಧಾರ್ಮಿಕ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.