ಅಮೆರಿಕಾ ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದಾರೆ. ಇರಾನ್ ಜೊತೆ ಅಮೆರಿಕಾದ ಸಂಧಾನದ ವರದಿಗಳ ನಡುವೆಯೂ, ಇರಾನ್ ಯುದ್ಧದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ವಾಷಿಂಗ್ಟನ್/ನವದೆಹಲಿ (ಮಾ.24): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಕುರಿತು ಭಾರತಕ್ಕೆ ಅಮೆರಿಕಾ ರಾಯಭಾರಿಯಾಗಿರುವ ಸೆರ್ಗಿಯೋ ಗೋರ್ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಉಭಯ ನಾಯಕರು ಮಧ್ಯಪ್ರಾಚ್ಯದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದು, ವಿಶೇಷವಾಗಿ 'ಹಾರ್ಮುಜ್ ಜಲಸಂಧಿ'ಯನ್ನು ಮುಕ್ತವಾಗಿಡುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ.

ಇನ್ನೊಂದೆಡೆ, ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅಮೆರಿಕಾ ಜೊತೆ ಮಾತುಕತೆಗೆ ಸಿದ್ಧರಿದ್ದಾರೆ ಎಂದು ವರದಿಗಳು ತಿಳಿಸಿವೆ. ಇರಾನ್ ವಿಧಿಸುವ ನಿಬಂಧನೆಗಳ ಅಡಿಯಲ್ಲಿ ಯುದ್ಧವನ್ನು ಶೀಘ್ರವಾಗಿ ಕೊನೆಗೊಳಿಸಲು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. 'ಅಲ್ ಅರೇಬಿಯಾ' ವರದಿಯ ಪ್ರಕಾರ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಅಮೆರಿಕಾ ರಾಯಭಾರಿ ಸ್ಟೀವ್ ವಿಟ್ಕಾಫ್ ಅವರಿಗೆ ಈ ರಹಸ್ಯ ಸಂದೇಶ ರವಾನಿಸಿದ್ದು, ಸಂಧಾನಕ್ಕೆ ಮೊಜ್ತಾಬಾ ಖಮೇನಿ ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಇರಾನ್ ಮೇಲಿನ ದಾಳಿ 5 ದಿನ ಮುಂದೂಡಿಕೆ

ಇತ್ತೀಚಿನ ಮಾತುಕತೆಗಳಲ್ಲಿ ಅಮೆರಿಕಾ ಮತ್ತು ಇರಾನ್ 15 ವಿಷಯಗಳ ಮೇಲೆ ಒಪ್ಪಂದಕ್ಕೆ ಬಂದಿವೆ ಎಂದು ಟ್ರಂಪ್ ಹೇಳಿದ್ದಾರೆ. ಈ ವಿಷಯಗಳ ಸಂಪೂರ್ಣ ಪಟ್ಟಿ ಬಹಿರಂಗವಾಗಿಲ್ಲ. ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಈ ಹಿಂದೆ 48 ಗಂಟೆಗಳ ಗಡುವು ನೀಡಿದ್ದ ಟ್ರಂಪ್, ಇದೀಗ ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲಿನ ದಾಳಿಯನ್ನು ಐದು ದಿನಗಳ ಕಾಲ ಮುಂದೂಡಿದ್ದಾರೆ.

ಆದರೆ, ಇರಾನ್ ವಿದೇಶಾಂಗ ಸಚಿವಾಲಯವು ವಾಷಿಂಗ್ಟನ್ ಜೊತೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಹೇಳಿದೆ. ಈ ಮಧ್ಯೆ, ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ದೇಶಗಳು ಸಂಧಾನಕ್ಕೆ ಪ್ರಯತ್ನಿಸುತ್ತಿವೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಭಾನುವಾರ ಟ್ರಂಪ್ ಜೊತೆ ಮಾತನಾಡಿದ್ದಾರೆ ಎಂದು 'ಡಾನ್' ಪತ್ರಿಕೆ ವರದಿ ಮಾಡಿದೆ.

ಸಂಧಾನಕ್ಕೆ ಅಮೆರಿಕಾದ ಪ್ರಸ್ತಾವನೆ

ಮಧ್ಯಸ್ಥಿಕೆ ವಹಿಸಿರುವ ದೇಶಗಳ ಮೂಲಕ ಅಮೆರಿಕಾವು ಇರಾನ್‌ಗೆ ಮಾತುಕತೆಯ ಪ್ರಸ್ತಾವನೆಯನ್ನು ಕಳುಹಿಸಿದೆ. "ಸಿಬಿಎಸ್ ನ್ಯೂಸ್" ಜೊತೆ ಮಾತನಾಡಿದ ಇರಾನ್ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಅಮೆರಿಕಾ ಕಳುಹಿಸಿರುವ ಸಂದೇಶದ ಅಂಶಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ದೃಢಪಡಿಸಿದ್ದಾರೆ.

ಗೆಲ್ಲುವವರೆಗೂ ಹೋರಾಟ ಎಂದ ಇರಾನ್

ಇನ್ನೊಂದೆಡೆ ಯುದ್ಧದಲ್ಲಿ ತಾವು ಹಿಂದೆ ಸರಿಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. "ಸಂಪೂರ್ಣ ವಿಜಯ ಸಿಗುವವರೆಗೂ ಈ ಹೋರಾಟ ಮುಂದುವರಿಯುತ್ತದೆ. ಇರಾನ್ ಸೇನೆಯು ದೇಶದ ಸಮಗ್ರತೆಯನ್ನು ರಕ್ಷಿಸಲು ದೃಢವಾಗಿ ನಿಂತಿದೆ," ಎಂದು ಇರಾನ್ ಸೇನಾ ಕಮಾಂಡ್ ವಕ್ತಾರ ಅಲಿ ಅಬ್ದುಲ್ಲಾ ಅಲಿಬಾದಿ ಸರ್ಕಾರಿ ಟಿವಿಯಲ್ಲಿ ಹೇಳಿಕೆ ನೀಡಿದ್ದಾರೆ.

ಇರಾನ್ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಲೆಬನಾನ್

ಇರಾನ್ ಜೊತೆಗಿನ ಉದ್ವಿಗ್ನತೆಯ ನಡುವೆ ಲೆಬನಾನ್ ಸರ್ಕಾರವು ಟೆಹ್ರಾನ್‌ನಿಂದ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡಿದೆ. ಇರಾನ್ ರಾಜತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಒಟ್ಟಾಗಿ ಬಾಳುವುದನ್ನು ಕಲಿಯಬೇಕು - ಕತಾರ್

"ಇರಾನ್ ಮತ್ತು ಕೊಲ್ಲಿ ದೇಶಗಳು ನೆರೆಹೊರೆಯವರಾಗಿ ಒಟ್ಟಿಗೆ ಬದುಕುವುದನ್ನು ಕಲಿಯಬೇಕು. ಸಂಪೂರ್ಣ ವಿನಾಶ ಎಂಬುದು ಆಯ್ಕೆಯಲ್ಲ. ಮಾನವೀಯತೆಯ ಭವಿಷ್ಯಕ್ಕಾಗಿ ನಾವು ಪರಸ್ಪರ ಬದುಕುವ ಮಾರ್ಗಗಳನ್ನು ಕಂಡುಕೊಳ್ಳಬೇಕು," ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಅಲ್-ಅನ್ಸಾರಿ ಹೇಳಿದ್ದಾರೆ.

ಭಾರತಕ್ಕೆ ಬಂದಿಳಿಯಲಿವೆ ಗ್ಯಾಸ್ ಟ್ಯಾಂಕರ್‌ಗಳು

ಭಾರತದ ಎರಡು ಪ್ರಮುಖ ಎಲ್‌ಪಿಜಿ ಟ್ಯಾಂಕರ್‌ಗಳಾದ 'ಜಗ್ ವಸಂತ್' ಮತ್ತು 'ಪೈನ್ ಗ್ಯಾಸ್' ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದತ್ತ ಮುಖ ಮಾಡಿವೆ. ಇವುಗಳಲ್ಲಿ ಒಟ್ಟು 92,612.59 ಮೆಟ್ರಿಕ್ ಟನ್ ಎಲ್‌ಪಿಜಿ ಇದೆ. ಜಗ್ ವಸಂತ್‌ನಲ್ಲಿ 33 ಮತ್ತು ಪೈನ್ ಗ್ಯಾಸ್‌ನಲ್ಲಿ 27 ಭಾರತೀಯ ನಾವಿಕರಿದ್ದಾರೆ. ಈ ಹಡಗುಗಳು ಮಾರ್ಚ್ 26 ಮತ್ತು 28, 2026 ರ ನಡುವೆ ಭಾರತೀಯ ಬಂದರುಗಳನ್ನು ತಲುಪುವ ನಿರೀಕ್ಷೆಯಿದೆ. ಭಾರತದ ಬಂದರು ಮತ್ತು ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಅವರು, "ಹಾರ್ಮುಜ್ ಜಲಸಂಧಿ ದಾಟಲು ಇರಾನ್ ಕಡೆಯಿಂದ ಯಾವುದೇ ಟೋಲ್ (ಶುಲ್ಕ) ವಸೂಲಿ ಮಾಡುತ್ತಿಲ್ಲ," ಎಂದು ಮಾಹಿತಿ ನೀಡಿದ್ದಾರೆ.