Asianet Suvarna News Asianet Suvarna News

ಮುತ್ತಿನ ನಗರಿಯಲ್ಲಿ ಮತೀಯ ಗಲಭೆಗೆ ಕುಮ್ಮಕ್ಕು: ಹೈದರಾಬಾದ್‌ನಲ್ಲಿ ಮೂವರು ಅಂದರ್

ಸಾರ್ವಜನಿಕ ಸಮಾರಂಭಗಳ ಮೇಲೆ ಗ್ರೇನೇಡ್ ಎಸೆಯಲು ಸಂಚು ರೂಪಿಸಿ ಈ ಮೂಲಕ ಮುತ್ತಿನ ನಗರಿ, ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಕೋಮು ಗಲಭೆಗೆ ಸಂಚು ರೂಪಿಸಿದ್ದ ಮೂವರನ್ನು ಹೈದರಾಬಾದ್ ಪೊಲೀಸರು ಇಂದು ಬಂಧಿಸಿದ್ದಾರೆ.

Three persons arrested by Hyderabad Police for conspiring to hurl grenades at public gatherings akb
Author
First Published Oct 2, 2022, 7:14 PM IST

ಹೈದರಾಬಾದ್: ಸಾರ್ವಜನಿಕ ಸಮಾರಂಭಗಳ ಮೇಲೆ ಗ್ರೇನೇಡ್ ಎಸೆಯಲು ಸಂಚು ರೂಪಿಸಿ ಈ ಮೂಲಕ ಮುತ್ತಿನ ನಗರಿ, ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಕೋಮು ಗಲಭೆಗೆ ಸಂಚು ರೂಪಿಸಿದ್ದ ಮೂವರನ್ನು ಹೈದರಾಬಾದ್ ಪೊಲೀಸರು ಇಂದು ಬಂಧಿಸಿದ್ದಾರೆ. ಪಾಕಿಸ್ತಾನ ಮೂಲದ ಹಾಗೂ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತಯ್ಬಾ ಜೊತೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಯೋರ್ವನಿಂದ ಬಂಧಿತ ಆರೋಪಿಗಳಲ್ಲಿ ಓರ್ವ  ಈ ಗ್ರೇನೇಡ್‌ಗಳನ್ನು ಸ್ವೀಕರಿಸಿದ್ದ. ಹೈದರಾಬಾದ್ ಪೊಲೀಸರು ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಬಂಧಿತ ಆರೋಪಿಗಳನ್ನು ಅಬ್ದುಲ್ ಜಹೆದ್, ಮೊಹಮ್ಮದ್ ಸಮೀಯುದ್ದೀನ್ ಹಾಗೂ ಮಾಜ್ ಹಸನ್ ಫಾರೂಕ್ ಎಂದು ಗುರುತಿಸಲಾಗಿದೆ. ಇವರು ಭಾರಿ ಸಂಖ್ಯೆಯಲ್ಲಿ ಜನ ಸೇರುವ ಸಾರ್ವಜನಿಕ ಸಭೆಗಳ ಮೇಲೆ ಗ್ರೇನೆಡ್ ಎಸೆಯಲು ಸಂಚು ರೂಪಿಸಿದ್ದರು.

ಬಂಧಿತನಲ್ಲಿ ಓರ್ವನಾಗಿರುವ ಅಬ್ದುಲ್ ಜೆಹೆದ್, ಈ ಹಿಂದೆಯೂ ಹಲವು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅಲ್ಲದೇ ಪಾಕಿಸ್ತಾನದ ಐಎಸ್‌ಐ ಹಾಗೂ ಎಲ್‌ಇಟಿ ಜೊತೆ ನಿಕಟ ಸಂಪರ್ಕದಲ್ಲಿದ್ದ. ಬಂಧನದ ವೇಳೆ ಆರೋಪಿಗಳ ಬಳಿ ಇದ್ದ ನಾಲ್ಕು ಹ್ಯಾಂಡ್ ಗ್ರೇನೆಡ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಪಾಕಿಸ್ತಾನ ಮೂಲದ ವ್ಯಕ್ತಿಯಿಂದ ಪಡೆದಿದ್ದ ಈ ಹ್ಯಾಂಡ್‌ ಗ್ರೇನೆಡ್‌ಗಳನ್ನು ತನ್ನ ಸಹವರ್ತಿಗಳ ಸಹಾಯದಿಂದ ಸಾರ್ವಜನಿಕ ಸಭೆಯ ಮೇಲೆ ಎಸೆಯಲು ಇವರು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್‌ನಲ್ಲಿ ಭಯೋತ್ಪಾದನೆ ಹಾಗೂ ಕೋಮು ಗಲಭೆ ಎಬ್ಬಿಸುವ ಗುರಿಯನ್ನು ಇವರು ಹೊಂದಿದ್ದರು. ಬಂಧನಕ್ಕೂ ಮೊದಲು ಈ ಶಂಕಿತರ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ಮತ್ತು ಅವರು ನಗರದಲ್ಲಿ ಬಿಜೆಪಿ ನಾಯಕರನ್ನು ಗುರಿಯಾಗಿಸಲು ಮುಂದಾದಾಗ ಅವರನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ರಾಮ ಮಂದಿರ, ಆರ್ಟಿಕಲ್ 370 to PFI ಬ್ಯಾನ್: ಮೋದಿ ಗೆದ್ದ ಸವಾಲುಗಳ ಪಟ್ಟಿ ಹೇಗಿದೆ ಗೊತ್ತಾ?

ಇವರೊಂದಿಗೆ ಇನ್ನು ಮೂವರು ಆರೋಪಿಗಳಾದ ಹೈದರಾಬಾದ್(Hyderabad) ನಿವಾಸಿಗಳೇ ಆಗಿರುವ ಫರ್ಹತುಲ್ಲಾ ಘೋರಿ, ಅಬು ಹಮ್ಜಲ, ಹಾಗೂ ಅಬ್ದುಲ್ ಮಜೀದ್ ನಾಪತ್ತೆಯಾಗಿದ್ದು, ಅವರು ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಬೇಕಾಗಿದ್ದಾರೆ ಆದರೆ ಅವರು ಪಾಕಿಸ್ತಾನದಲ್ಲಿ ನೆಲೆ ನಿಂತಿದ್ದು, ಐಎಸ್ಐ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

 

ಈ ಹಿಂದೆ ಅವರು ಸ್ಥಳೀಯ ಯುವಕರನ್ನು ನೇಮಿಸಿಕೊಂಡು ಅವರ ತಲೆ ಹಾಳು ಮಾಡಿ(Brain wash)ದ್ದರು, ನಂತರ ಅವರ ಮೂಲಕ 2002 ರಲ್ಲಿ ನಡೆದ ಹೈದರಾಬಾದ್‌ನ ದಿಲ್‌ಸುಖ್‌ನಗರ (Dilsukhnagar) ಸಾಯಿಬಾಬಾ ದೇಗುಲದ (Saibaba Temple) ಬಳಿ ಸ್ಫೋಟ, ಮುಂಬೈನ ಘಟ್ಕೊಪರ್ (Ghatkopar) ಬಳಿ ಬಸ್ ಸ್ಪೋಟ, 2005ರಲ್ಲಿ ಹೈದರಾಬಾದ್‌ನ ಬೇಗಂಪೇಟೆಯಲ್ಲಿ ಟಾಸ್ಕ್ ಫೋರ್ಸ್ ಕಚೇರಿ ಬಳಿ ಆತ್ಮಾಹುತಿ ದಾಳಿ ನಡೆಸಿದ್ದಾರೆ. ಅಲ್ಲದೇ ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿರುವ (Secunderabad) ಪ್ರಸಿದ್ಧ ಗಣೇಶ ದೇಗುಲದ (Ganesh Temple) ಬಳಿಯೂ 2004ರಲ್ಲಿ ಬಾಂಬ್ ಸ್ಫೋಟಕ್ಕೆ ಯತ್ನಿಸಿದ್ದರು.

ಅಲ್‌ಖೈದಾಗೆ ಶಸ್ತ್ರಾಸ್ತ್ರ ಪೂರೈಸುವ ಟರ್ಕಿ ಉಗ್ರರೊಂದಿಗೂ ಪಿಎಫ್‌ಐ ನಂಟು: ಇಬ್ಬರು ನಾಯಕರಿಗೆ ಅತಿಥ್ಯ

ಪ್ರಸ್ತುತ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಉಗ್ರರಾದ ಫರ್ಹತುಲ್ಲಾ ಘೋರಿ (Farhatullah Ghori), ಅಬು ಹಮ್ಜಲ್ (Abu Hamzala), ಮಜೀದ್ (Abdul Majeed) ತನ್ನೊಂದಿಗೆ ಸಂಪರ್ಕದಲ್ಲಿದ್ದು, ತಮಗೆ ಸದಾ ಉಗ್ರ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಾ ಹೈದರಾಬಾದ್‌ನಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ನಡೆಸಲು ಹಣದ ಸಹಾಯ ಮಾಡಿದ್ದರು ಎಂಬ ವಿಚಾರವನ್ನು ಬಂಧಿತ ಅಬ್ದುಲ್ ಜಹೆದ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios