ಪೊಲೀಸ್ ಕ್ಲಿಯರೆನ್ಸ್ ಸಿಗೋದಿಲ್ಲ, ಪ್ರತಿಭಟನಾಕಾರರಿಗೆ ಏರ್ ಚೀಫ್ ಮಾರ್ಷಲ್ ಎಚ್ಚರಿಕೆ!
ಅಗ್ನಿಪಥ್ ನೇಮಕಾತಿ ಯೋಜನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿರುವ ರಕ್ಷಣಾ ಉದ್ಯೋಗಿ ಆಕಾಂಕ್ಷಿಗಳಿಗೆ ಎಚ್ಚರಿಕೆ ನೀಡಿರುವ ವಾಯುಸೇನೆಯ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ, ಸೇನೆಗೆ ಸೇರುವ ಸಮಯದಲ್ಲಿ ಪೊಲೀಸ್ ಕ್ಲಿಯರೆನ್ಸ್ ಪಡೆಯಲು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇ ನಿಮಗೆ ಅಡ್ಡಿಯಾಗಬಹುದು ಎಂದು ಹೇಳಿದ್ದಾರೆ.
ನವದೆಹಲಿ (ಜೂನ್ 18): ದೇಶವ್ಯಾಪಿ ಅಗ್ನಿಪಥ್ (Agnipath) ಯೋಜನೆಯ ಕುರಿತಾಗಿ ಯುವಜನತೆ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ (Air Chief Marshal VR Chaudhari), ರಕ್ಷಣಾ ಉದ್ಯೋಗಿ ಆಕಾಂಕ್ಷಿಗಳಿಗೆ (police clearance) ದೊಡ್ಡ ಎಚ್ಚರಿಕೆಯನ್ನು ನೀಡಿದ್ದಾರೆ. ಅಗ್ನಿಪಥ್ ಅಂತ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಇಷ್ಟು ಪ್ರಮಾಣದ ಹಿಂಸಾತ್ಮಕ ಪ್ರತಿಭಟನೆಯ ನಿರೀಕ್ಷೆಯನ್ನೇ ತಾವು ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಯಾರದೋ ಮಾತು ಕೇಳಿಕೊಂಡು ಯುವ ಜನರು ಹಾಗೂ ರಕ್ಷಣಾ ಉದ್ಯೋಗಿ ಆಕಾಂಕ್ಷಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಲ್ಲಿ ಮುಂದಿನ ದಿನದಲ್ಲಿ ಅದಕ್ಕೆ ದೊಡ್ಡ ಬೆಲೆಯನ್ನೇ ತೆರೆಬೇಕಾಗುತ್ತದೆ. ಆ ಎಚ್ಚರಿಕೆ ನಿಮ್ಮಲ್ಲಿರಲಿ ಎಂದು ಹೇಳಿದ್ದಾರೆ. "ಈ ಪ್ರಮಾಣದ ಹಿಂಸೆಯನ್ನು ನಾವು ಖಂಡಿಸುತ್ತೇವೆ. ಯಾವುದೇ ವಿಚಾರಕ್ಕೆ ಹಿಂಸಾತ್ಮಕ ಪ್ರತಿಭಟನೆ ಒಂದೇ ಮಾರ್ಗವಲ್ಲ. ರಕ್ಷಣಾ ಇಲಾಖೆಯ ಎಲ್ಲಾ ಉದ್ಯೋಗದ ಅತ್ಯಂತ ಕೊನೆಯ ಹಂತ ಇರುವುದು ಪೊಲೀಸ್ ವೆರಿಫಿಕೇಶನ್. ನಿಮ್ಮ ಮೇಲೆ ಇರುವ ಯಾವುದೇ ರೀತಿಯ ಕೇಸ್ಗಳ ಬಗ್ಗೆ ಅಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಯಾರಾದರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜೈಲುಪಾಲು ಅಥವಾ ಬಂಧನಕ್ಕೆ ಒಳಗಾಗಿದ್ದರೆ ಅವರಿಗೆ ಪೊಲೀಸ್ ಕ್ಲಿಯರೆನ್ಸ್ ಸಿಗೋದಿಲ್ಲ' ಎಂದು ಚೀಫ್ ಆಫ್ ಏರ್ ಸ್ಟಾಫ್ (ಸಿಎಎಸ್) ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ತಿಳಿಸಿದ್ದಾರೆ.
ಅಗ್ನಿಪಥ್ ಯೋಜನೆಯನ್ನು ಸಕಾರಾತ್ಮಕ ಹೆಜ್ಜೆ ಎಂದು ಶ್ಲಾಘಿಸಿದ ಏರ್ ಚೀಫ್ ಮಾರ್ಷಲ್ ಚೌಧರಿ, ಕಾರ್ಯಕ್ರಮದ ಬಗ್ಗೆ ಕಾಳಜಿ ಇರುವವರು ಹತ್ತಿರದ ಸೇನಾ ಕೇಂದ್ರಗಳು, ವಾಯುಪಡೆ ಅಥವಾ ನೌಕಾ ನೆಲೆಗಳನ್ನು ಸಂಪರ್ಕಿಸಿ ತಮ್ಮ ಅನುಮಾನಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು ಎಂದು ಹೇಳಿದರು.
ಪ್ರತಿಭಟನೆ ಮಾಡುತ್ತಿರುವ ವ್ಯಕ್ತಿಗಳು ಈಗ ಮಾಡಬೇಕಾಗಿರುವುದು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದು, ಯೋಜನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು. ಯೋಜನೆಯ ಪ್ರಯೋಜನ ಮತ್ತು ಇದರಿಂದ ಅವರಿಗೆ ಸಿಗುವ ಪ್ರಯೋಜನ ಎಲ್ಲವೂ ಅವರಿಗೆ ತಿಳಿಯುತ್ತದೆ. ಇದು ಅವರ ಮನಸ್ಸಿನಲ್ಲಿರುವ ಎಲ್ಲಾ ಅನುಮಾನಗಳನ್ನು ನಿವಾರಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದರು.
ಅಗ್ನಿಪಥ್ ಅಲ್ಪಾವಧಿಯ ನೇಮಕಾತಿ ಯೋಜನೆಯು ಕಳೆದ ಎರಡು ವರ್ಷಗಳಿಂದ ಸೇನೆಯ ವಿವಿಧ ಹಂತಗಳಲ್ಲಿ ಚರ್ಚೆಯಲ್ಲಿತ್ತು ಮತ್ತು ಸಶಸ್ತ್ರ ಪಡೆಗಳ ವಯಸ್ಸಿನ ಪ್ರೊಫೈಲ್ ಅನ್ನು 30 ರಿಂದ 25 ವರ್ಷಗಳಿಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಸಿಎಎಸ್ ವಿವರಿಸಿದ್ದಾರೆ. ನಾಲ್ಕು ವರ್ಷಗಳ ಕೆಲಸದ ನಂತರ ಬಿಡುಗಡೆಯಾದವರು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಹೆಮ್ಮೆ ಮಾತ್ರವಲ್ಲ "ಶಿಸ್ತು, ಪ್ರೇರಣೆ ಮತ್ತು ಸೇವೆಗಳ ತತ್ವಗಳನ್ನು ಅಳವಡಿಸಿಕೊಳ್ಳುತ್ತಾರೆ" ಎಂದು ಅವರು ಹೇಳಿದರು.
ಗೃಹ ಸಚಿವಾಲಯದ ಬೆನ್ನಲ್ಲೇ ಅಗ್ನಿಪಥಕ್ಕೆ ಶೇ. 10ರಷ್ಟು ಮೀಸಲಾತಿ ನೀಡಿದ ರಕ್ಷಣಾ ಸಚಿವ!
ಸಿಎಎಸ್ ಚೌಧರಿ, ಸರ್ಕಾರ ಮತ್ತು ರಕ್ಷಣಾ ಸಂಸ್ಥೆಯು ಉದ್ಯೋಗಾಕಾಂಕ್ಷಿಗಳ ಆತಂಕವನ್ನು ನಿವಾರಿಸಲು ಮತ್ತು ವಿಶೇಷವಾಗಿ ಭವಿಷ್ಯದ ಬಗ್ಗೆ ಅವರ ಅಭದ್ರತೆಗೆ ಸಂಬಂಧಿಸಿದಂತೆ ಅವರ ಭಯವನ್ನು ಹೋಗಲಾಡಿಸಲು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
11 ರಾಜ್ಯಗಳಿಗೆ ವಿಸ್ತರಿಸಿದ ಪ್ರತಿಭಟನೆಯ ಜ್ವಾಲೆ, ಅಗ್ನಿಪಥ ವಿರೋಧಿಸಿ ಹಿಂಸಾಚಾರ, 2 ಬಲಿ!
ಯೋಜನೆ ಹಿಂಪಡೆಯುವುದಿಲ್ಲ: ಯೋಜನೆಯನ್ನು ಹಿಂಪಡೆಯುವ ಗುರಿ ಸರ್ಕಾರಕ್ಕಿಲ್ಲ ಎನ್ನುವುದನ್ನು ಮಾರ್ಮಿಕವಾಗಿ ಅವರು ಹೇಳಿದರು. "ಯೋಜನೆಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದ ನಂತರ ಬದಲಾವಣೆಗಳು ಅಗತ್ಯವಿದೆಯೇ ಅಥವಾ ಸುಧಾರಣೆ ಅಗತ್ಯವಿದೆಯೇ ಎಂದು ನಾವು ನೋಡುತ್ತೇವೆ" ಎಂದು ಅವರು ಹೇಳಿದರು. ಶುಕ್ರವಾರ, ಅಗ್ನಿಪಥ್ ಯೋಜನೆಯಡಿ ನೇಮಕಾತಿಗಾಗಿ ಭಾರತೀಯ ವಾಯುಪಡೆಯ ಆಯ್ಕೆ ಪ್ರಕ್ರಿಯೆಯು ಜೂನ್ 24 ರಿಂದ ಪ್ರಾರಂಭವಾಗಲಿದೆ ಎಂದು ಏರ್ ಸ್ಟಾಫ್ ಮುಖ್ಯಸ್ಥರು ಘೋಷಿಸಿದರು. ಈ ವರ್ಷ ಯೋಜನೆಯಡಿ ಸೇರ್ಪಡೆಗೊಳ್ಳಲು ಗರಿಷ್ಠ ವಯಸ್ಸಿನ ಮಿತಿಯನ್ನು 23 ಕ್ಕೆ ಏರಿಸಿರುವುದನ್ನು ಸ್ವಾಗತಿಸಿದರು. ಈ ಕ್ರಮವು ಹೊಸ ಮಾದರಿಯ ನೇಮಕಾತಿಯ ಅಡಿಯಲ್ಲಿ ಸೇರ್ಪಡೆಗೊಳ್ಳಲು ಹೆಚ್ಚಿನ ಸಂಖ್ಯೆಯ ಯುವಕರನ್ನು ಅನುಮತಿಸುತ್ತದೆ.