ತರಗತಿಗಳಲ್ಲಿ ಕಡೆಯ ಬೆಂಚ್ ಎಂಬ ಮಾದರಿ ರದ್ದುಪಡಿಸಿ ಅದರ ಬದಲು ವಿದ್ಯಾರ್ಥಿಗಳನ್ನು ವೃತ್ತಾಕಾರ, ಯು ಆಕಾರದಲ್ಲಿ ಕೂರಿಸುವ ಕೇರಳದ ಶಾಲೆಯೊಂದರ ಪ್ರಯೋಗ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು.
ತಿರುವನಂತಪುರ (ಆ.06): ತರಗತಿಗಳಲ್ಲಿ ಕಡೆಯ ಬೆಂಚ್ ಎಂಬ ಮಾದರಿ ರದ್ದುಪಡಿಸಿ ಅದರ ಬದಲು ವಿದ್ಯಾರ್ಥಿಗಳನ್ನು ವೃತ್ತಾಕಾರ, ಯು ಆಕಾರದಲ್ಲಿ ಕೂರಿಸುವ ಕೇರಳದ ಶಾಲೆಯೊಂದರ ಪ್ರಯೋಗ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಇದೇ ಮಾದರಿಯನ್ನು ರಾಜ್ಯವ್ಯಾಪಿ ಅಳವಡಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಶಿಕ್ಷಣ ಸಚಿವ ಶಿವನ್ ಕುಟ್ಟಿ, ‘ಲಾಸ್ಟ್ ಬೆಂಚ್ ಪದ್ಧತಿಯಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಮತ್ತು ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ತೆಗೆದು ಹೊಸ ಮಾದರಿ ಅಳವಡಿಸಲು ತಜ್ಞರ ಸಮಿತಿ ರಚಿಸಲಾಗಿದೆ. ಅವರ ಶಿಫಾರಸಿನ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಕೇರಳದ ತ್ರಿಶೂರಿನ ವಡಕ್ಕಂಚೇರಿ ಪೂರ್ವ ಮಾಂಗಾಡ್ನಲ್ಲಿರುವ ಆರ್ಸಿಸಿಎಲ್ಪಿ ಶಾಲೆ ಸೇರಿ ಹಲವು ಶಾಲೆಗಳು ‘ಸ್ಥಾನಾರ್ಥಿ ಶ್ರೀಕುಟ್ಟನ್’ ಎಂಬ ಚಿತ್ರದಿಂದ ಪ್ರೇರಣೆ ಪಡೆದು ಶಾಲೆಯಲ್ಲಿ ಲಾಸ್ಟ್ ಬೆಂಚ್ ಬದಲಿಗೆ ‘ಯು’ ಆಕಾರದ ಬೆಂಚ್ ಅಳವಡಿಸಿತ್ತು. ಇದರ ಬಳಿಕ ರಾಜ್ಯದಲ್ಲಿ ಹಲವು ಶಾಲೆಗಳು ಇದೇ ಮಾದರಿಯನ್ನು ಅನುಸರಿಸಿದ್ದವು. ಕರ್ನಾಟಕದ ದಕ್ಷಿಣದ ಕನ್ನಡದ ಶಾಲೆಯೊಂದರಲ್ಲಿ ಹಲವು ದಶಕಗಳಿಂದಲೇ ಇಂಥ ಪದ್ಧತಿ ಜಾರಿಯಲ್ಲಿದೆ.
ಜೂನ್, ಜುಲೈನಲ್ಲಿ ರಜೆಗೆ ಚಿಂತನೆ: ಕೇರಳದ ಶಾಲೆಗಳಲ್ಲಿ ಬೇಸಿಗೆ ರಜಾ ಅವಧಿಯನ್ನು ಏಪ್ರಿಲ್, ಮೇ ತಿಂಗಳ ಬದಲು ಭಾರೀ ಮಳೆಯಾಗುವ ಜೂನ್ ಮತ್ತು ಜುಲೈಗೆ ಬದಲಿಸುವ ಪ್ರಸ್ತಾಪಕ್ಕೆ ಕೇರಳ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಸಾರ್ವಜನಿಕರಲ್ಲಿ ಅಭಿಪ್ರಾಯ ಕೇಳಿದ್ದಾರೆ. ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ ಕೇರಳದಲ್ಲಿ ಶಾಲೆಗಳಿಗೆ ಬಿಸಿಲಿನ ತಾಪ ಹೆಚ್ಚಿರುವ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ರಜೆ ನೀಡಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿತ್ತು.
ಮುಂಗಾರಿನ ಸಮಯವಾಗಿರುವ ಜೂನ್, ಜುಲೈಗಳಲ್ಲಿ ಭಾರೀ ಮಳೆಯಿಂದಾಗಿ ಶಾಲೆಗಳಿಗೆ ಕೆಲವೊಮ್ಮೆ ರಜೆ ನೀಡಬೇಕಾಗುತ್ತದೆ. ಇದರಿಂದ ಮಕ್ಕಳ ಅಧ್ಯಯನಕ್ಕೂ ತೊಂದರೆ. ಹೀಗಾಗಿ ರಜಾ ಅವಧಿಯನ್ನು ಜೂನ್ ಮತ್ತು ಜುಲೈಗೆ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಯುತ್ತದೆ ಎಂದಿದ್ದಾರೆ’. ಇದೇ ವೇಳೆ ಅವರು ಬದಲಾವಣೆ ಜಾರಿಗೆ ತರುವುದರಿಂದಾಗುವ ಸಂಭಾವ್ಯ ಅನುಕೂಲಗಳು ಮತ್ತು ಅನಾನುಕೂಲಗಳ ಕುರಿತು ಸಾರ್ವಜನಿಕರಿಂದ ಸಲಹೆ, ಸೂಚನೆಗಳಿಗೆ ಆಹ್ವಾನಿಸಿದ್ದಾರೆ.
