ಎಲ್ಪಿಜಿ ಸಿಲಿಂಡರ್ ಬುಕಿಂಗ್ಗೆ ಹೊಸ ನಿಯಮ ಜಾರಿಯಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ ನೀಡಿದೆ. ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಳೆಯ ನಿಯಮವೇ ಮುಂದುವರಿದಿದೆ ಎಂದು ತಿಳಿಸಿರುವ ಸರ್ಕಾರ ಅದರ ಡಿಟೇಲ್ಸ್ ಹಂಚಿಕೊಂಡಿದೆ. ದೇಶದಲ್ಲಿ ಸಾಕಷ್ಟು ಎಲ್ಪಿಜಿ ದಾಸ್ತಾನು ಲಭ್ಯವಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಇರಾನ್, ಇಸ್ರೇಲ್ ಮತ್ತು ಅಮೆರಿಕದ ನಡುವಿನ ಯುದ್ಧದಿಂದಾಗಿ ಇದಾಗಲೇ ಎಲ್ಪಿಜಿ ಸಮಸ್ಯೆ ವಿಶ್ವಾದ್ಯಂತ ತಲೆದೋರಿದೆ. ಭಾರತದಲ್ಲಿಯೂ ಇದರ ಬಿಸಿ ತಟ್ಟಿರುವ ಬೆನ್ನಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ಕೆಲವು ವಿಕೃತ ಮನಸ್ಸುಗಳು ಇಲ್ಲಸಲ್ಲದ ಸುದ್ದಿಗಳನ್ನು ಹರಡಿ ಜನರಿಗೆ ಭೀತಿ ಉಂಟು ಮಾಡುತ್ತಿದ್ದಾರೆ. ಇದು ಸುಳ್ಳು ಎಂದು ತಿಳಿದಿದ್ದರೂ, ತಮ್ಮ ಕೆಲವು ಲೈಕ್ಸ್, ವ್ಯೂವ್ಸ್ ಹಾಗೂ ಸರ್ಕಾರದ ವಿರುದ್ಧ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಲು ಇಂಥ ನಕಲಿ ಸುದ್ದಿಗಳನ್ನು ಹರಡಲಾಗುತ್ತಿದೆ. ಇದನ್ನೇ ನಿಜ ಎಂದು ನಂಬಿ ಭಯದ ವಾತಾವರಣ ಸೃಷ್ಟಿಯಾಗುತ್ತಿದ್ದು, ಜನರ ಜೀವನದ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಉಂಟಾಗುತ್ತಿದೆ.
ಫೇಕ್ ನ್ಯೂಸ್ಗಳಿಗೆ ಬಲಿಯಾಗಬೇಡಿ
ಎಲ್ಪಿಜಿ ಬುಕಿಂಗ್ ಅರ್ಥಾತ್ ಗ್ಯಾಸ್ ಸಿಲಿಂಡರ್ ಬುಕಿಂಗ್ನಲ್ಲಿ ಹೊಸ ನಿಯಮ ಜಾರಿಯಾಗಿದೆ. ಇಂದಿನಿಂದಲೇ ಜಾರಿ, ಬರುವ ಏಪ್ರಿಲ್ನಿಂದಲೇ ಜಾರಿ ಹಾಗೇ ಹೀಗೆ ಏನೇನೋ ವದಂತಿಗಳನ್ನು ಹರಡಲಾಗುತ್ತಿದೆ. LPG ಮರುಪೂರಣ ಬುಕಿಂಗ್ ಸಮಯಸೂಚಿಗಳನ್ನು ಪರಿಷ್ಕರಿಸಲಾಗಿದೆ ಎಂದು ಸುಳ್ಳು ಸುದ್ದಿಗಳ ಭರಾಟೆ ಜೋರಾಗಿದೆ. ಇದೀಗ ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಇಂಥ ಸುದ್ದಿಗಳನ್ನು ನಂಬದಂತೆ ಜನರಿಗೆ ಸ್ಪಷ್ಟಪಡಿಸಿದೆ. ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು PMUY ಸಂಪರ್ಕಗಳಿಗೆ 45 ದಿನಗಳ ಮಿತಿ, PMUY ಅಲ್ಲದ ಸಿಂಗಲ್ ಬಾಟಲ್ ಬಳಕೆದಾರರಿಗೆ 25 ದಿನಗಳು ಮತ್ತು ಡಬಲ್ ಬಾಟಲ್ ಸಂಪರ್ಕಗಳಿಗೆ 35 ದಿನಗಳ ಮಿತಿಯೊಂದಿಗೆ ಹೊಸ ಮಿತಿಗಳನ್ನು ಸೂಚಿಸಿವೆ ಎಂದೆಲ್ಲಾ ವರದಿ ಮಾಡಿದ್ದು ಎಲ್ಲವೂ ಸತ್ಯಕ್ಕೆ ದೂರವಾದದ್ದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನಿಜವಾದ ನಿಯಮ ಏನಿದೆ?
ಸರ್ಕಾರವು ಪ್ರಸ್ತುತ ನಿಗದಿಪಡಿಸಿರುವ ಸಮಯ ಮಿತಿ ನಿಜವಾಗಿಯೂ ಸದ್ಯ ಇರುವುದು ಹೀಗಿದೆ:
ಪಿಎಂ ಆವಾಜ್ ಯೋಜನೆಯ ಗ್ರಾಹಕರಾಗಿರಲಿ ಅಥವಾ ಸಾಮಾನ್ಯ ಗ್ರಾಹಕರು ಆಗಿರಲಿ... ಎಲ್ಲರಿಗೂ ಒಂದೇ ನಿಯಮ. ಅದು: ಎರಡು ಬುಕಿಂಗ್ಗಳ ನಡುವಿನ ಕನಿಷ್ಠ ಅವಧಿ ಎಂದರೆ,
ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳು.
ಇದರ ಅರ್ಥ ನಗರ ಪ್ರದೇಶಗಳಲ್ಲಿ 25 ದಿನಗಳಾದ ಮೇಲೆ ಇನ್ನೊಂದು ಬುಕಿಂಗ್ ಮಾಡಬಹುದಾಗಿದೆ. ಇದು ಗ್ರಾಮೀಣ ಪ್ರದೇಶಗಳಿಗಾದರೆ 45 ದಿನಗಳಾಗಿವೆ.
ಸಾಕಷ್ಟು ಸ್ಟಾಕ್
ಸದ್ಯ ದೇಶದಲ್ಲಿ ಸಾಕಷ್ಟು LPG ಸ್ಟಾಕ್ಗಳು ಲಭ್ಯವಿದೆ ಎಂದು ಸರ್ಕಾರ ಹೇಳಿದೆ. ಕರ್ನಾಟಕವೂ ಸೇರಿದಂತೆ ಹಲವು ಕಡೆಗಳಲ್ಲಿ ರಾಜಕೀಯ ಮುಖಂಡರು ಸೇರಿದಂತೆ ಕೆಲವರು ಕಾಳಸಂತೆಯಲ್ಲಿ ಸಿಲಿಂಡರ್ ಮಾರುವ ಉದ್ದೇಶದಿಂದ ಸ್ಟಾಕ್ ಇಟ್ಟುಕೊಂಡಿದ್ದರು. ಅವರ ಮೇಲೆ ಇದಾಗಲೇ ರೇಡ್ ಮಾಡಲಾಗಿದೆ. ಇನ್ನೂ ದಾಳಿ ನಡೆಯುತ್ತಲೇ ಇವೆ. ಇಂಥ ಕಳ್ಳರಿಂದಲಾಗಿಯೇ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯಲ್ಲಿ ಕೊರತೆ ಆಗುತ್ತಿದ್ದು, ಇಂಥವರನ್ನು ಮಟ್ಟ ಹಾಕುವ ಅಗತ್ಯವಿದೆ ಎನ್ನುವ ಕೂಗು ಜೋರಾಗಿದೆ.


