ಇದುವರೆಗೂ ಭಾರತದಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದ ಐಸಿಸ್‌, ಸಿಮಿ ಮತ್ತು ಇಂಡಿಯನ್‌ ಮುಜಾಹಿದಿನ್‌ ಸಂಘಟನೆಗಳು ಇದೀಗ ಭಾರತದಲ್ಲಿ ದುಷ್ಕೃತ್ಯ ಎಸಗಲು ಒಂದಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಮುಂಬೈ: ಪುಣೆಯ ಕೊಂಡ್ವಾ ಪ್ರದೇಶದಲ್ಲಿ ನಡೆದ ಬಾಂಬ್‌ ತಯಾರಿಕಾ ಶಿಬಿರದ ಕುರಿತು ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳು ಸ್ಫೋಟಕ ಮಾಹಿತಿಯೊಂದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ. ಇದುವರೆಗೂ ಭಾರತದಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದ ಐಸಿಸ್‌, ಸಿಮಿ ಮತ್ತು ಇಂಡಿಯನ್‌ ಮುಜಾಹಿದಿನ್‌ ಸಂಘಟನೆಗಳು ಇದೀಗ ಭಾರತದಲ್ಲಿ ದುಷ್ಕೃತ್ಯ ಎಸಗಲು ಒಂದಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಮೂರೂ ಸಂಘಟನೆಗಳ ಸಿದ್ಧಾಂತದಲ್ಲಿ ಭಿನ್ನತೆ ಇದ್ದರೂ, ಅವೆಲ್ಲಾ ಮತ್ತೆ ಒಂದಾಗಿ ಕಾರ್ಯಾಚರಣೆ ನಡೆಸಲು ಬದ್ಧತೆ ವ್ಯಕ್ತಪಡಿಸಿವೆ. ಪ್ರಕರಣ ಸಂಬಂಧ ಬಂಧಿತರೆಲ್ಲಾ ಮಾಹಿತಿ ತಂತ್ರಜ್ಞಾನ, ಸೈಬರ್‌ (cyber), ಸುಧಾರಿತ ಸ್ಫೋಟಕ ತಯಾರಿಕೆಯಲ್ಲಿ ಅತ್ಯಂತ ಗರಿಷ್ಠ ಮಟ್ಟದ ತರಬೇತಿ ಪಡೆದುಕೊಂಡಿವೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಬಗೆದಷ್ಟು ಬಯಲಾಗ್ತಿದೆ ‘ಉಗ್ರ’ರ ನಂಟಿನ ಜಾಲ: ಬೆಂಗಳೂರಲ್ಲಿ ಅಡಗಿ ಕುಳಿತ್ತಿದ್ದಾರಾ ಮತ್ತಷ್ಟು ಶಂಕಿತರು..?

ಕಣ್ಣು ತಪ್ಪಿಸಿ ಒಗ್ಗಟ್ಟಿನ ಕೆಲಸ:

ಮೇಲ್ಕಂಡ ಮೂರೂ ಸಂಘಟನೆಗಳನ್ನು ಭಾರತ ಸರ್ಕಾರ ನಿಷೇಧಿಸಿದ ಬಳಿಕ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಳಿಕ ಅವುಗಳ ಕಾರ್ಯಾಚರಣೆ ಬಹುತೇಕ ನಿಂತೇ ಹೋಯಿತು ಎನ್ನುವ ಹಂತಕ್ಕೆ ಬಂದಿತ್ತು. ಆದರೆ ಸಂಘಟನೆಯ ಕಾರ್ಯಕರ್ತರು ಮತ್ತೆ ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಿ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿದ್ದು ಪುಣೆ ಪ್ರಕರಣದ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಪುಣೆ ಸ್ಫೋಟ ಸಂಚಿನ ಪ್ರಕರಣ ಸಂಬಂಧ ಎನ್‌ಐಎ ಕಳೆದ ಕೆಲ ದಿನಗಳ ಅವಧಿಯಲ್ಲಿ ಜುಲ್ಫಿಕರ್‌ ಅಲಿ ಬರೋಡಾವಾಲ, ಮೊಹಮ್ಮದ್‌ ಇಮ್ರಾನ್‌ ಖಾನ್‌, ಮೊಹಮ್ಮದ್‌ ಯೂನಸ್‌ ಸಕಿ ಮತ್ತು ಖಾದಿರ್‌ ಪಠಾಣ್‌ರನ್ನು ಬಂಧಿಸಿತ್ತು. ಇವರ ತನಿಖೆ ವೇಳೆ ಜಾರ್ಖಂಡ್‌ನ ಹಜಾರಿಬಾಗ್‌, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದ ಭಯೋತ್ಪಾದನಾ ಪ್ರಕರಣಗಳ ನಡುವೆ ನಂಟಿರುವುದು ಪತ್ತೆಯಾಗಿದೆ. ಇವರೆಲ್ಲರೂ 2002-03ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಸಾಖಿಬ್‌ ನಚನ್‌ನಿಂದ ತರಬೇತಿ ಪಡೆದಿದ್ದರು. ಜೊತೆಗೆ ಇರಾಕ್‌ ಅಥವಾ ಸಿರಿಯಾದ ಹ್ಯಾಂಡ್ಲರ್‌ಗಳಿಂದ ಇವರ ಕಾರ್ಯಾಚರಣೆಗೆ ಸೂಚನೆ ಬರುತ್ತಿತ್ತು ಎಂಬ ವಿಷಯವೂ ತನಿಖೆ ವೇಳೆ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಧ್ವಂಸಕ್ಕೆ ಉಗ್ರರ ಸ್ಕೆಚ್‌, ನಾಪತ್ತೆಯಾಗಿರುವ ಜುನೈದ್‌ ಪ್ರಿಯತಮೆ ಬಗ್ಗೆ ಮಾಹಿತಿ ಲಭ್ಯ