ಕಣಿವೆ ಬಿಡಿ, ಇಲ್ಲಾ ಸಾಯಲು ಸಜ್ಜಾಗಿ: ಕಾಶ್ಮೀರಿ ಪಂಡಿತರಿಗೆ ಉಗ್ರರ ಜೀವ ಬೆದರಿಕೆ!
* ಇಸ್ಲಾಂಗೆ ಮತಾಂತರಗೊಳ್ಳಲು ತಾಕೀತು
* ಕಾಶ್ಮೀರಿ ಪಂಡಿತರಿಗೆ ಉಗ್ರರ ಜೀವ ಬೆದರಿಕೆ
* ಕಣಿವೆ ಬಿಡಿ, ಇಲ್ಲಾ ಸಾಯಲು ಸಜ್ಜಾಗಿ
ಶ್ರೀನಗರ(ಏ,15): ಕಾಶ್ಮೀರಿ ಪಂಡಿತರು ವಾಸಿಸುತ್ತಿರುವ ಬಾರಾಮುಲ್ಲಾದ ವೀರ್ವಾನ್ ಕಾಲೋನಿಗೆ ಉಗ್ರ ಸಂಘಟನೆಯೊಂದರಿಂದ ಬೆದರಿಕೆ ಪತ್ರ ಬಂದಿದೆ. ಕಾಶ್ಮೀರಿ ಪಂಡಿತರ ಕುರಿತ ‘ಕಾಶ್ಮೀರ್ ಫೈಲ್ಸ್’ ಚಿತ್ರ ಬಿಡುಗಡೆ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಲಷ್ಕರ್-ಎ-ಇಸ್ಲಾಂ ಎಂಬ ಉಗ್ರ ಸಂಘಟನೆ ಈ ಪತ್ರ ರವಾನಿಸಿದೆ. ‘ಪಂಡಿತರು ಮತ್ತು ಮುಸ್ಲಿಮರಲ್ಲದವರು (ಕಾಫಿರರು) ಇಸ್ಲಾಂಗೆ ಮತಾಂತರ ಆಗಬೇಕು. ಇಲ್ಲವೇ ಕಾಶ್ಮೀರ ಕಣಿವೆ ಬಿಡಬೇಕು. ಇಲ್ಲದೇ ಹೋದರೆ ಸಾವಿಗೆ ಸಿದ್ಧರಾಗಬೇಕು. ಕಾಶ್ಮೀರ ಇರುವುದು ಕೇವಲ ಅಲ್ಲಾನ ಅನುಯಾಯಿಗಳಿಗೆ ಮಾತ್ರ’ ಎಂಬ ಬೆದರಿಕೆ ಒಡ್ಡಲಾಗಿದೆ.
ರಕ್ಷಣಾ ಪಡೆಗಳಿಗೆ ಈ ಪತ್ರ ಮೊದಲು ಪೋಸ್ಟ್ ಮೂಲಕ ಬಂದಿದ್ದು, ಅದನ್ನು ಅವರು ವೀರ್ವಾನ್ನಲ್ಲಿರುವ ಪಂಡಿತರ ಕಾಲೋನಿಯ ಅಧ್ಯಕ್ಷರಿಗೆ ನೀಡಿದ್ದಾರೆ. ಈ ಕುರಿತಾಗಿ ಬಾರಾಮುಲ್ಲಾದ ಎಸ್ಎಸ್ಪಿ ಅವರಿಗೆ ದೂರು ನೀಡಲಾಗಿದೆ ಮತ್ತು ತನಿಖೆ ನಡೆಸುವಂತೆ ಕೋರಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪಂಡಿತರ ಕಾಲೋನಿಯಲ್ಲಿ ಸುಮಾರು 350 ಪಂಡಿತರು ವಾಸವಾಗಿದ್ದಾರೆ.
ಲಷ್ಕರ್-ಇ-ಇಸ್ಲಾಂ ಸಂಘಟನೆಯನ್ನು 2015ರಲ್ಲೇ ನಿರ್ನಾಮ ಮಾಡಲಾಗಿದೆ. ಇಲ್ಲಿಯವರೆಗೆ ಅವರು ಯಾವುದೇ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವುದರ ಕುರಿಯತಾಗಿ ಸಾಕ್ಷ್ಯಗಳು ಲಭ್ಯವಾಗಿಲ್ಲ. ಕಾಶ್ಮೀರದ ಶಾಂತಿಯನ್ನು ಕದಡಲು ಕಿಡಿಗೇಡಿಗಳು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.