ತೆಲಂಗಾಣದ ಕಾಮರೆಡ್ಡಿಯಲ್ಲಿ, ಕೋಳಿ ಸಾರು ಮಾಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಪತ್ನಿಯು ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ. ಆರು ವರ್ಷಗಳ ದಾಂಪತ್ಯದ ನಡುವೆ ಆಗಾಗ್ಗೆ ನಡೆಯುತ್ತಿದ್ದ ಕೌಟುಂಬಿಕ ಕಲಹವು ಈ ಭೀಕರ ದುರಂತಕ್ಕೆ ಕಾರಣವಾಗಿದೆ.ರೆ.

ಹೈದರಾಬಾದ್ (ಏ.29): ಊಟದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ನಡೆದ ಕ್ಷುಲ್ಲಕ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದಿದೆ. ಕೋಳಿ ಸಾರು ಮಾಡಿಲ್ಲ ಎಂಬ ಕಾರಣಕ್ಕೆ ಪತ್ನಿಯ ಮೇಲೆ ಕಿರುಚಾಡಿದ 28 ವರ್ಷದ ಪತಿಯನ್ನು ಆಕೆಯು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ. ಕೊಲೆಯಾದ ವ್ಯಕ್ತಿಯನ್ನು ಗೋಸಾಂಗಿ ಕಾಲೋನಿಯ ಸ್ಕ್ರ್ಯಾಪ್ ವ್ಯಾಪಾರಿ ಕೊಡಂಡಂ ಶಿವಾಜಿ ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ, ಶಿವಾಜಿ ತನ್ನ ಪತ್ನಿ ಲಕ್ಷ್ಮಿಯೊಂದಿಗೆ ಕೋಳಿ ಸಾರು ಮಾಡದ ವಿಚಾರಕ್ಕೆ ಜಗಳವಾಡಲು ಆರಂಭಿಸಿದ್ದಾನೆ. ಈ ವೇಳೆ ಪಕ್ಕದಲ್ಲೇ ವಾಸವಿದ್ದ ಸಂಬಂಧಿಕರಾದ ದಾದಯ್ಯ ಮತ್ತು ಶಾರದಾ ಎಂಬುವವರು ಮನೆಗೆ ಬಂದು ದಂಪತಿಗಳನ್ನು ಸಮಾಧಾನಪಡಿಸಿ ಹೋಗಿದ್ದರು. ಆದರೆ, ಅವರು ಹೋದ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಜಗಳ ಶುರುವಾಗಿದೆ. ತನ್ನ ಇಚ್ಛೆಯಂತೆ ಊಟ ತಯಾರಿಸಿಲ್ಲ ಎಂದು ಶಿವಾಜಿ ಪತ್ನಿಯನ್ನು ನಿಂದಿಸಿದ್ದಲ್ಲದೆ, ಇತರ ಕೌಟುಂಬಿಕ ಸಮಸ್ಯೆಗಳನ್ನು ಎಳೆದು ತಂದು ಜಗಳವಾಡಿದ್ದಾನೆ.

ಜಗಳ ವಿಕೋಪಕ್ಕೆ ಹೋದಾಗ ಮತ್ತೊಬ್ಬ ಸಂಬಂಧಿ ನಂದಿನಿ ಎಂಬುವವರು ದಂಪತಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. "ಜಗಳದ ನಡುವೆ ಆಕ್ರೋಶಗೊಂಡ ಲಕ್ಷ್ಮಿ ಮನೆಯಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಶಿವಾಜಿಯ ಕುತ್ತಿಗೆಗೆ ಬಲವಾಗಿ ಏಟು ನೀಡಿದ್ದಾಳೆ. ದಾಳಿಯ ತೀವ್ರತೆಗೆ ಶಿವಾಜಿ ಕೆಳಗೆ ಬಿದ್ದಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅತಿಯಾದ ರಕ್ತಸ್ರಾವದಿಂದಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ," ಎಂದು ಕಾಮರೆಡ್ಡಿ ಇನ್ಸ್‌ಪೆಕ್ಟರ್ ಬಿ. ನರಹರಿ ತಿಳಿಸಿದ್ದಾರೆ.

ಆರು ವರ್ಷಗಳ ಸಂಸಾರ

ಮೃತನ ಹಿರಿಯ ಸಹೋದರ ಸೂರಿ ನೀಡಿದ ದೂರಿನ ಪ್ರಕಾರ, ಶಿವಾಜಿ ಮತ್ತು ಲಕ್ಷ್ಮಿ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು ಮತ್ತು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ಆರು ತಿಂಗಳಿನಿಂದ ಅವರು ಸಂಬಂಧಿಕರೊಬ್ಬರ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೌಟುಂಬಿಕ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಮತ್ತು ಈ ಹಿಂದೆಯೂ ಹಿರಿಯರು ಹಲವಾರು ಬಾರಿ ಪಂಚಾಯಿತಿ ನಡೆಸಿ ಬುದ್ಧಿ ಹೇಳಿದ್ದರು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

ಪತ್ನಿಯ ಬಂಧನ

ಘಟನೆಗೆ ಸಂಬಂಧಿಸಿದಂತೆ ಮೃತನ ಸಹೋದರನ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103 (1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶವಪರೀಕ್ಷೆಯ ನಂತರ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಪೊಲೀಸರು ಸೋಮವಾರ ಲಕ್ಷ್ಮಿಯನ್ನು ಬಂಧಿಸಿದ್ದಾರೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು.